ಈಗ ಭಾರತೀಯ ಕ್ರಿಕೆಟ್ ತಂಡ ಜಿಂಬಾಬ್ವೆ ಪ್ರವಾಸದಲ್ಲಿದೆ. ಈ ಮಧ್ಯೆ ಬಿಸಿಸಿಐ ಶ್ರೀಲಂಕಾ ವಿರುದ್ಧ ನಡೆಯಲಿರುವ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿದೆ.
ಜಿಂಬಾಬ್ವೆ ವಿರುದ್ಧ ಐದು ಟಿ20 ಪಂದ್ಯಗಳು ನಡೆಯಲ್ಲಿದ್ದು, ಈಗಾಗಲೇ 3 ಪಂದ್ಯಗಳು ಮುಗಿದಿವೆ. ಈ ಪೈಕಿ ಟೀಂ ಇಂಡಿಯಾ 2-1 ರ ಮುನ್ನಡೆ ಸಾಧಿಸಿದೆ. ಜಿಂಬಾಬ್ವೆ ಬಳಿಕ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದ ವೇಳಾಪಟ್ಟಿಯನ್ನು ಬಿಸಿಸಿಐ ಗುರುವಾರ ಬಿಡುಗಡೆ ಮಾಡಿದೆ.
ಬಿಸಿಸಿಐ ಪ್ರಕಟಿಸಿದ ವೇಳಾಪಟ್ಟಿಯಂತೆ ಭಾರತ ತಂಡ ಮೂರು ಪಂದ್ಯಗಳ ಟಿ20 ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಈ ಸಂದರ್ಭದಲ್ಲಿ ಆಡಲಿದೆ. ಜುಲೈ 26ರಿಂದ ಭಾರತದ ಶ್ರೀಲಂಕಾ ಪ್ರವಾಸ ಆರಂಭವಾಗಲಿದೆ. ಮೊದಲು ಟಿ20 ಸರಣಿ ನಡೆಯಲಿದೆ. ನಂತರ ಏಕದಿನ ಸರಣಿ ಆರಂಭವಾಗಲಿದೆ. ಟಿ20 ಸರಣಿಯ ಮೊದಲ ಪಂದ್ಯ ಜುಲೈ 26 ರಂದು ಪಲ್ಲೆಕೆಲೆಯಲ್ಲಿ ನಡೆಯಲಿದೆ.
ಎರಡನೇ ಟಿ20 ಜುಲೈ 27 ರಂದು ಮತ್ತು ಮೂರನೇ ಪಂದ್ಯ ಜುಲೈ 29 ರಂದು ನಡೆಯಲಿದೆ. ಟಿ20 ಸರಣಿಯ ಎಲ್ಲಾ ಮೂರು ಪಂದ್ಯಗಳು ರಾತ್ರಿ 7 ಗಂಟೆಗೆ ಆರಂಭವಾಗಲಿದ್ದು, ಏಕದಿನ ಸರಣಿಯ ಮೊದಲ ಪಂದ್ಯ ಆಗಸ್ಟ್ 1 ರಿಂದ ಆರಂಭವಾಗಲಿದೆ. ಎರಡನೇ ಪಂದ್ಯ ಆಗಸ್ಟ್ 4 ರಂದು ಮತ್ತು ಮೂರನೇ ಪಂದ್ಯ ಆಗಸ್ಟ್ 7 ರಂದು ನಡೆಯಲಿದೆ. ಏಕದಿನ ಸರಣಿ ಮಧ್ಯಾಹ್ನ 2.30ರಿಂದ ಆರಂಭವಾಗಲಿವೆ. ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡದ ಕೋಚ್ ಆಗಿ ಗೌತಮ್ ಗಂಭೀರ್ ಕಾಣಿಸಿಕೊಳ್ಳಲಿದ್ದಾರೆ. ಹೊಸ ನಾಯಕ ಕೂಡ ಈ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದು, ಅದು ಯಾರು ಎಂಬ ಕುತೂಹಲ ಶುರುವಾಗಿದೆ.