ಬೆಂಗಳೂರು: ಹಲವಾರು ಕನ್ನಡ ಸಿನಿಮಾಗಳಿಗೆ ಹಿನ್ನೆಲೆ ಧ್ವನಿ ನೀಡಿರುವ ಸಿಂಗರ್ ಸೋನು ನಿಗಮ್ ಈಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಹಾಡಿರುವ ಸೋನುನಿಗಮ್ ಅವರು ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇದೀಗ ಕನ್ನಡ ಭಾಷೆಯನ್ನು ಪಹಲ್ಗಾಮ್ ದಾಳಿಗೆ ಹೋಲಿಸಿ ವಿವಾದಕ್ಕೆ ಸಿಲುಕಿದ್ದಾರೆ. ಬೆಂಗಳೂರು ಕಾಲೇಜಿನ ಸಂಗೀತ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ ಭಾಗಿಯಾಗಿದ್ದರು. ಈ ವೇಳೆ ಕನ್ನಡ ಹಾಡು ಹಾಡಿ ಎಂದು ಪ್ರೇಕ್ಷಕರು ಡಿಮ್ಯಾಂಡ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸುವ ವೇಳೆ ಪಹಲ್ಗಾಮ್ ದುರಂತದ ಬಗ್ಗೆ ಸೋನುನಿಗಮ್ ಮಾತನಾಡಿದ್ದಾರೆ.
ಎಲ್ಲಾ ಭಾಷೆಯಲ್ಲೂ ಸಾಂಗ್ಸ್ ಹಾಡಿದ್ದೇನೆ. ಆದರೆ ದಿ ಬೆಸ್ಟ್ ಸಾಂಗ್ಸ್ ಹಾಡಿರುವುದು ಹೆಚ್ಚು ಕನ್ನಡದಲ್ಲಿ. ಕರ್ನಾಟಕಕ್ಕೆ ಬರುವಾಗ ತುಂಬಾ ಖುಷಿಯಾಗುತ್ತೆ, ತುಂಬಾ ಆಸೆಯಿಂದಲೇ ಇಲ್ಲಿಗೆ ಬರುತ್ತೇನೆ. ಸಾಮಾನ್ಯವಾಗಿ ಕನ್ನಡ ಸಾಂಗ್ಸ್ ಹಾಡಿ ಅಂತ ಕೇಳುತ್ತಾರೆ. ಆದರೆ, ಕೆಲವರು ಕನ್ನಡ … ಕನ್ನಡ.. ಅಂತ ಭಯ ಪಡಿಸ್ತೀರಾ ಇದೇ ಕಾರಣಕ್ಕೆ ಪಹಲ್ಗಾಮ್ ಘಟನೆ ಆಗಿದ್ದು ಎಂದು ಹೇಳಿಕೆ ನೀಡಿದ್ದಾರೆ. ಕನ್ನಡ ಹಾಡುಗಳ ಬಗ್ಗೆ, ಕರ್ನಾಟಕದ ಬಗ್ಗೆ ಹೆಮ್ಮೆಯಿಂದ ಮಾತಾಡಿರುವ ಸೋನು ನಿಗಮ್ ಕನ್ನಡವನ್ನು ಪಹಲ್ಗಾಮ್ ಹೋಲಿಸಿ ವಿವಾದಕ್ಕೆ ಸಿಲುಕಿದ್ದಾರೆ..
ಸೋನು ನಿಗಮ್ ವಿರುದ್ದ ಕನ್ನಡಪರ ಹೋರಾಟಗಾರರು ಆಕ್ರೋಶ
ನಮ್ಮ ಕನ್ನಡ ಭಾಷೆಯನ್ನು ಪಹಲ್ಗಾಮ್ ದುರಂತಕ್ಕೆ ಹೋಲಿಸಿದ್ದಕ್ಕೆ ಸೋನು ವಿರುದ್ಧ ಕನ್ನಡ ಪರ ಹೋರಾಟಗಾರ ನಾರಾಯಣ ಗೌಡ ಆಕ್ರೋಶ ಹೊರಹಾಕಿದ್ದಾರೆ. ಸೋನು ನಿಗಮ್ ಕನ್ನಡದ ಬಗ್ಗೆ ಎಷ್ಟೇ ಖುಷಿ ವ್ಯಕ್ತಪಡಿಸಿದ್ದರೂ ಪಹಲ್ಗಾಮ್ ದುರಂತಕ್ಕೆ ಹೋಲಿಸಿದ್ದು ತಪ್ಪು. ಆದ್ದರಿಂದ ಆದಷ್ಟು ಬೇಗ ಸೋನು ವಿರುದ್ಧ ಕ್ರಮ ಕೈಗೊಳ್ಳಬೇಕು. ಜೊತೆಗೆ ಮುಂದೆ ಕನ್ನಡ ಸಿನಿಮಾಗಳಲ್ಲಿ ಅವಕಾಶ ಕೊಡಬಾರದು ಅಂತ ಕಿಡಿಕಾರಿದ್ದಾರೆ.