ನವದೆಹಲಿ: 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ನಂತರ, ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಸಾಮರ್ಥ್ಯವನ್ನು ಬಿಸಿಸಿಐ (BCCI) ಪರಿಶೀಲಿಸುತ್ತಿದೆ. ಅಲ್ಲದೆ, ಭಾರತ ವೈಟ್ಬಾಲ್ ತಂಡದ ನಾಯಕತ್ವದ ರೇಸ್ಗೆ ಅವರು ಮರಳಲಿದ್ದಾರೆಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಂಜಾಬ್ ಕಿಂಗ್ಸ್ 2025ರ ಐಪಿಎಲ್ ಫೈನಲ್ನಲ್ಲಿ ಸೋತರೂ, ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಕಾರಣದಿಂದಾಗಿ ಭಾರತೀಯ ಕ್ರಿಕೆಟ್ನಲ್ಲಿ ಅವರ ಸ್ಥಾನಮಾನ ಗಣನೀಯವಾಗಿ ಹೆಚ್ಚಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಫೈನಲ್ಗೂ ಮುನ್ನ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಅಯ್ಯರ್ ಅವರ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದರು.
ಸದ್ಯ ಶ್ರೇಯಸ್ ಅಯ್ಯರ್ ಭಾರತ ಏಕದಿನ (Indian Cricket Team) ತಂಡದಲ್ಲಿ ಆಡುತ್ತಿದ್ದಾರೆ. ಆದರೆ, ಐಪಿಎಲ್ ಟೂರ್ನಿಯ ಈ ಯಶಸ್ಸಿನ ಬಳಿಕ ಅವರನ್ನು ಟಿ20 ಮತ್ತು ಟೆಸ್ಟ್ ತಂಡದಿಂದ ದೂರವಿಡಲು ಸಾಧ್ಯವಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಭಾರತ ವೈಟ್ಬಾಲ್ ತಂಡದ ನಾಯಕತ್ವವನ್ನು ಅಯ್ಯರ್ಗೆ ನೀಡುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ ಎನ್ನಲಾಗಿದೆ.
ಕಳೆದ ಒಂದು ವರ್ಷದ ಹಿಂದೆ ಶ್ರೇಯಸ್ ಅಯ್ಯರ್ ಬಿಸಿಸಿಐನ ಯಾವುದೇ ಕೇಂದ್ರ ಒಪ್ಪಂದವನ್ನು ಹೊಂದಿರಲಿಲ್ಲ. ಅವರನ್ನು ಟೆಸ್ಟ್ ಮತ್ತು ಟಿ20ಐ ತಂಡದಿಂದ ಕೈಬಿಡಲಾಗಿತ್ತು. ಆದರೆ, 2024ರಲ್ಲಿ ಅವರ ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡ ಐಪಿಎಲ್ ಗೆದ್ದಿತ್ತು. ಇದರ ನಂತರ ಅವರು ಕೆಕೆಆರ್ ತಂಡವನ್ನು ತೊರೆದಿದ್ದರು. ಅವರ ಫಿಟ್ನೆಸ್, ಫಾರ್ಮ್ ಮತ್ತು ಮಾನಸಿಕ ಸ್ಥಿತಿಯ ಬಗ್ಗೆ ಪ್ರಶ್ನೆಗಳು ಎದ್ದವು. ಆದರೂ, ಅಯ್ಯರ್ ಮುಂಬೈ ಪರ ದೇಶಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರು.
ಕಿಂಗ್ಸ್ನಲ್ಲಿ ಅವಕಾಶ
ಪಂಜಾಬ್ ಕಿಂಗ್ಸ್ (PBKS) ಶ್ರೇಯಸ್ ಅಯ್ಯರ್ ಅವರಿಗೆ ಅವಕಾಶ ನೀಡಿತು. ತಮ್ಮ ನಾಯಕತ್ವದ ಕೌಶಲ್ಯದಿಂದ ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್ ತಂಡವನ್ನು 2014ರ ನಂತರ ಇದೇ ಮೊದಲ ಬಾರಿಗೆ ಫೈನಲ್ಗೆ ತಂದರು. ಆದರೆ, ಫೈನಲ್ನಲ್ಲಿ ಕೇವಲ 6 ರನ್ಗಳ ಅಂತರದಿಂದ ಸೋತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಹಿಂದಿನ ಆವೃತ್ತಿಗಳಲ್ಲಿ ಪ್ಲೇಆಫ್ಸ್ಗೆ ಅರ್ಹತೆ ಪಡೆಯಲು ಸಹ ವಿಫಲವಾಗುತ್ತಿದ್ದ ಪಂಜಾಬ್ ತಂಡವು ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಅದ್ಭುತವಾಗಿ ಪುನರಾಗಮನ ಮಾಡಿತು. ತಂಡದಲ್ಲಿ ಲಭ್ಯವಿದ್ದ ಆಟಗಾರರನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಅವರು ಪಿಬಿಕೆಎಸ್ ತಂಡವನ್ನು ಉನ್ನತ ಸ್ಥಾನಕ್ಕೆ ತಲುಪಿಸಿದರು.
ಮುಂಬೈ ಇಂಡಿಯನ್ಸ್ (MI) ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಅಯ್ಯರ್ ತಮ್ಮ ಛಾಪು ಮೂಡಿಸಿದರು. ತಂಡವು ಗುರಿಯನ್ನು ಬೆನ್ನಟ್ಟಲು ಕಷ್ಟಪಡುತ್ತಿದ್ದಾಗ ಮತ್ತು ಜಸ್ಪ್ರೀತ್ ಬುಮ್ರಾ ಮಾರಕ ದಾಳಿ ನಡೆಸುತ್ತಿದ್ದ ವೇಳೆ ಅಯ್ಯರ್ ಅದ್ಭುತ ಆಟವನ್ನು ಹೊರತಂದರು. ಅವರು ಬುಮ್ರಾ ಅವರ ನಿಖರ ಯಾರ್ಕರ್ಗಳನ್ನು ಸಮರ್ಥವಾಗಿ ಬೌಂಡರಿಗೆ ಅಟ್ಟಿದರು. ಒಂದು ತುದಿಯಲ್ಲಿ ವಿಕೆಟ್ಗಳು ನಿರಂತರವಾಗಿ ಉರುಳುತ್ತಿದ್ದರೂ ಏಕಾಂಗಿಯಾಗಿ ಬ್ಯಾಟ್ ಮಾಡಿದ ಅಯ್ಯರ್, 41 ಎಸೆತಗಳಲ್ಲಿ 87 ರನ್ ಗಳಿಸಿದರು ಮತ್ತು ಪಂಜಾಬ್ ಒಂದು ಓವರ್ ಮುಂಚಿತವಾಗಿ 204 ರನ್ಗಳ ಗುರಿಯನ್ನು ತಲುಪಿತ್ತು.
ಶ್ರೇಯಸ್ ಅಯ್ಯರ್ ಬಗ್ಗೆ ಹೇಳಿಕೆ
“ಸದ್ಯ ಅವರು ಕೇವಲ ಏಕದಿನ ತಂಡದಲ್ಲಿ ಆಡುತ್ತಿದ್ದಾರೆ. ಆದರೆ ಈ ಐಪಿಎಲ್ ಟೂರ್ನಿಯ ನಂತರ ನಾವು ಅವರನ್ನು ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಂದ ಮತ್ತು ಟೆಸ್ಟ್ ಪಂದ್ಯಗಳಿಂದ ದೂರವಿಡಲು ಸಾಧ್ಯವಿಲ್ಲ. ಇದಲ್ಲದೆ, ಅವರು ಈಗ ಅಧಿಕೃತವಾಗಿ ವೈಟ್-ಬಾಲ್ ನಾಯಕತ್ವದ ರೇಸ್ಗೆ ಸೇರಿದ್ದಾರೆ,” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
ಇದರರ್ಥ ಶ್ರೇಯಸ್ ಅಯ್ಯರ್ ಅವರ ಪ್ರದರ್ಶನವು ರಾಷ್ಟ್ರೀಯ ತಂಡವು ತನ್ನ ಕಾರ್ಯತಂತ್ರವನ್ನು ಮರುಪರಿಶೀಲಿಸುವಂತೆ ಮಾಡಿದೆ. 2024ರ ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಗೆಲುವಿನತ್ತ ಕೊಂಡೊಯ್ದ ನಂತರವೂ, ಅಯ್ಯರ್ ಅವರನ್ನು ಕೈಬಿಡಲಾಗಿತ್ತು. ಇದು ಅವರ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳು ಎದುರಾಗಿದ್ದವು. ಆದರೂ ಅವರು ತಮ್ಮ ಛಲವನ್ನು ಬಿಡಲಿಲ್ಲ ಹಾಗೂ ದೇಶಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರಿ ಬಿಸಿಸಿಐ ಗುತ್ತಿಗೆ ಪಟ್ಟಿಗೆ ಕಮ್ಬ್ಯಾಕ್ ಮಾಡಿದ್ದರು.