ನವದೆಹಲಿ: ಪಹಲ್ಗಾಮ್ ದಾಳಿಯ ಮೂಲಕ ಭಾರತೀಯರನ್ನು ವಿಭಜಿಸಲು ಬಯಸಿದ್ದ ಭಯೋತ್ಪಾದಕರಿಗೆ ಭಾರತವು ಸರಿಯಾದ ಪ್ರತ್ಯುತ್ತರವನ್ನು ನೀಡಿತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಏಪ್ರಿಲ್ 22ರಂದು ನಡೆದ ದಾಳಿಯ ಬಳಿಕ ಭಾರತೀಯರು ಹಿಂದೆಂದಿಗಿಂತಲೂ ಹೆಚ್ಚಾಗಿ ಒಗ್ಗಟ್ಟಾದರು ಎಂದೂ ಹೇಳಿದ್ದಾರೆ.
ಗುರುವಾರ ಸಿಕ್ಕಿಂ ಪ್ರವಾಸ ಕೈಗೊಳ್ಳಬೇಕಾಗಿದ್ದ ಪ್ರಧಾನಿ ಮೋದಿಯವರು ಹವಾಮಾನ ವೈಪರೀತ್ಯದ ಕಾರಣಕ್ಕಾಗಿ ವರ್ಚುವಲ್ ಆಗಿಯೇ ಸಿಕ್ಕಿಂ ರಾಜ್ಯ ಸ್ಥಾಪನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದರು. ಈ ವೇಳೆ ಮಾತನಾಡಿದ ಅವರು, “ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ದಾಳಿಯು ಕೇವಲ ಭಾರತೀಯರ ಮೇಲೆ ನಡೆಸಿದ ದಾಳಿಯಲ್ಲ. ಅದು ಮಾನವತೆಯ ಆತ್ಮದ ಮೇಲೆ ನಡೆಸಿದ ದಾಳಿ, ಸಹೋದರತ್ವದ ಸ್ಫೂರ್ತಿಯ ಮೇಲೆ ನಡೆಸಿದ ದಾಳಿ. ಉಗ್ರರು ನಮ್ಮ ಹಲವು ಕುಟುಂಬಗಳ ಸಂತೋಷವನ್ನು ಕಸಿದುಕೊಂಡರು. ಭಾರತೀಯರನ್ನು ವಿಭಜಿಸಲು ಪ್ರಯತ್ನಿಸಿದರು. ಆದರೆ, ಇಂದು ಇಡೀ ಜಗತ್ತು ಭಾರತವು ಹಿಂದೆಂದಿಗಿಂತಲೂ ಹೆಚ್ಚು ಒಗ್ಗಟ್ಟಾಗಿರುವುದನ್ನು ನೋಡುತ್ತಿದೆ.
ನಾವೆಲ್ಲರೂ ಒಗ್ಗಟ್ಟಾಗಿ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದೇವೆ. ಆಪರೇಷನ್ ಸಿಂದೂರದ ಮೂಲಕ ಉಗ್ರರಿಗೆ ನಾವು ಬಲಿಷ್ಠ ಪ್ರತ್ಯುತ್ತರವನ್ನು ನೀಡಿದ್ದೇವೆ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಬಣ್ಣವನ್ನೂ ಬಯಲು ಮಾಡಿದ ಮೋದಿ ಅವರು, ಪಾಕಿಸ್ತಾನದ ಒಳಕ್ಕೆ ನುಗ್ಗಿ ಉಗ್ರರ ನೆಲೆಗಳನ್ನು ಹೇಗೆ ನಿಖರವಾಗಿ ಧ್ವಂಸಗೈಯ್ಯಬಹುದು ಎಂಬುದನ್ನು ಭಾರತ ತೋರಿಸಿಕೊಟ್ಟಿದೆ. ತಮ್ಮ ಉಗ್ರ ನೆಲೆಗಳು ಧ್ವಂಸಗೊಂಡಿದ್ದರಿಂದ ಹತಾಶಗೊಂಡ ಪಾಕಿಸ್ತಾನವು ನಮ್ಮ ನಾಗರಿಕರು ಮತ್ತು ಯೋಧರನ್ನು ಗುರಿಯಾಗಿಸಿ ದಾಳಿ ನಡೆಸಲು ಯತ್ನಿಸಿತು. ಆದರೆ, ಅಲ್ಲೂ ಪಾಕಿಸ್ತಾನ ಸೋತಿತು. ಅವರ ವಾಯುನೆಲೆಗಳನ್ನು ನಾಶಪಡಿಸುವ ಮೂಲಕ ನಾವು, ಭಾರತ ಎಷ್ಟು ಕ್ಷಿಪ್ರವಾಗಿ, ಎಷ್ಟು ನಿಖರವಾಗಿ ಮತ್ತು ಎಷ್ಟು ಬಲಿಷ್ಠವಾಗಿ ತಿರುಗೇಟು ನೀಡಬಲ್ಲೆವು ಎಂಬುದನ್ನು ತೋರಿಸಿದೆವು ಎಂದೂ ಹೇಳಿದರು.