ಅಮರಾವತಿ: ಆಂಧ್ರಪ್ರದೇಶದ ಪ್ರಸಿದ್ಧ ಯಾತ್ರಾಸ್ಥಳ ದ್ರಾಕ್ಷಾರಾಮ ದೇವಾಲಯದಲ್ಲಿ ಶತಮಾನದಷ್ಟು ಹಳೆಯದಾದ ಶಿವಲಿಂಗವನ್ನು ಧ್ವಂಸಗೊಳಿಸಿದ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವೈಕುಂಠ ಏಕಾದಶಿಯ ಶುಭ ಸಂದರ್ಭವಾದ ಮಂಗಳವಾರದಂದು ನಸುಕಿನ ಜಾವ ಈ ಕೃತ್ಯ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮತ್ತು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಸಪ್ತ ಗೋದಾವರಿ ಕಾಲುವೆಯ ದಡದಲ್ಲಿರುವ ಕಪಿಲೇಶ್ವರ ಘಾಟ್ ಬಳಿ ಈ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ತೋಪೇಟೆ ಗ್ರಾಮದ ನೀಲಂ ಶ್ರೀನಿವಾಸ್ ಎಂಬಾತನನ್ನು ಆರೋಪಿ ಎಂದು ಗುರುತಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಮೀನಾ ಅವರ ನೇತೃತ್ವದಲ್ಲಿ ರಚಿಸಲಾದ ನಾಲ್ಕು ವಿಶೇಷ ತಂಡಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿವೆ.

ಕಾರಣವೇನು?
ಪ್ರಾಥಮಿಕ ತನಿಖೆಯ ಪ್ರಕಾರ, ಇದೊಂದು ಕೋಮು ಪ್ರೇರಿತ ಕೃತ್ಯವಲ್ಲ ಬದಲಾಗಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದ ಘಟನೆ ಎಂದು ತಿಳಿದುಬಂದಿದೆ. ಆರೋಪಿ ಶ್ರೀನಿವಾಸ್ ಇತ್ತೀಚೆಗೆ ದೇವಾಲಯದ ಅರ್ಚಕರೊಂದಿಗೆ ಪೂಜಾ ವಿಧಿವಿಧಾನಗಳ ವಿಚಾರವಾಗಿ ಜಗಳ ಮಾಡಿಕೊಂಡಿದ್ದ ಎನ್ನಲಾಗಿದೆ. ದೇವಾಲಯದ ಆಡಳಿತ ಮಂಡಳಿ ಮೇಲಿನ ಕೋಪ ಹಾಗೂ ಅರ್ಚಕರ ಮೇಲಿನ ಸೇಡು ತೀರಿಸಿಕೊಳ್ಳುವ ಭರದಲ್ಲಿ ಆತ ಶಿವಲಿಂಗವನ್ನು ಹಾನಿ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಸರ್ಕಾರದ ಕಠಿಣ ನಿಲುವು:
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನೇತೃತ್ವದ ಸರ್ಕಾರ, ಆರೋಪಿ ಯಾರೇ ಆಗಿರಲಿ, ಪಾರದರ್ಶಕ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದೆ.
ಭಕ್ತರ ಭಾವನೆಗೆ ಧಕ್ಕೆಯಾಗದಂತೆ ಮತ್ತು ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ, ಘಟನೆ ನಡೆದ ಕೆಲವೇ ಸಮಯದಲ್ಲಿ ಹೊಸ ಶಿವಲಿಂಗವನ್ನು ಶಾಸ್ತ್ರೋಕ್ತವಾಗಿ ಮರುಸ್ಥಾಪಿಸಲಾಯಿತು. ಇದೇ ವೇಳೆ, ಮುಂಜಾಗ್ರತಾ ಕ್ರಮವಾಗಿ ಸಪ್ತ ಗೋದಾವರಿ ನದಿ ತೀರದಲ್ಲಿ ಹೈ-ಡೆಫಿನಿಷನ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಪೊಲೀಸ್ ಗಸ್ತನ್ನು ಹೆಚ್ಚಿಸಲಾಗಿದೆ.
ಇದನ್ನೂ ಓದಿ:ಯಾದಗಿರಿ | ಕೇಕ್ ಬದಲಿಗೆ ಹಣ್ಣು, ತರಕಾರಿ ಕಟ್ ಮಾಡಿ ವರ್ಷದ ಕೊನೆಯ ದಿನ ಆಚರಿಸಿದ ರೈತ



















