ನವದೆಹಲಿ: ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಸೈನಿಕರ ಕುಟುಂಬಗಳಿಗೆ ಪೂರ್ವಭಾವಿಯಾಗಿ ಕಾನೂನು ನೆರವು ನೀಡುವ ಮಹತ್ವದ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. “ನಾಲ್ಸಾ ವೀರ ಪರಿವಾರ ಸಹಾಯತಾ ಯೋಜನೆ 2025” (NALSA Veer Parivar Sahayata Yojana 2025) ಎಂದು ಹೆಸರಿಸಲಾದ ಈ ಹೊಸ ಯೋಜನೆಯು, ಕಠಿಣ ಭೂಪ್ರದೇಶಗಳಲ್ಲಿ ಮತ್ತು ದೂರದ ಗಡಿ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಸೈನಿಕರನ್ನು ಕೌಟುಂಬಿಕ ಕಾನೂನು ಹೊರೆಗಳಿಂದ ಮುಕ್ತಗೊಳಿಸುವ ಗುರಿಯನ್ನು ಹೊಂದಿದೆ. “ನೀವು ಗಡಿಯಲ್ಲಿ ದೇಶ ಸೇವೆ ಮಾಡಿ, ನಾವು ಮನೆಯಲ್ಲಿ ನಿಮ್ಮ ಕುಟುಂಬವನ್ನು ನೋಡಿಕೊಳ್ಳುತ್ತೇವೆ” ಎಂಬುದು ಈ ಯೋಜನೆಯ ಪ್ರಮುಖ ಸಂದೇಶವಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.
ಈ ಯೋಜನೆಯನ್ನು ಶ್ರೀನಗರದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (NALSA) ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಔಪಚಾರಿಕವಾಗಿ ಇಂದು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಭಾಗವಹಿಸುವ ನಿರೀಕ್ಷೆಯಿದೆ.
ಯೋಜನೆಯ ಹಿಂದಿನ ಪ್ರೇರಣೆಯೇನು?
“ಆಪರೇಷನ್ ಸಿಂದೂರ”ದ ನಂತರದಲ್ಲೇ ಈ ಕಾರ್ಯಕ್ರಮದ ಕಲ್ಪನೆ ಹುಟ್ಟಿಕೊಂಡಿತು. ಈ ಕಾರ್ಯಾಚರಣೆಯ ಸಮಯದಲ್ಲಿ ಸಶಸ್ತ್ರ ಪಡೆಗಳು ಮಾಡಿದ ತ್ಯಾಗದಿಂದ ತೀವ್ರವಾಗಿ ಪ್ರಭಾವಿತರಾದ ನ್ಯಾಯಮೂರ್ತಿ ಸೂರ್ಯಕಾಂತ್ ಅವರು, ನ್ಯಾಯಾಂಗವು ಸೈನಿಕರ ಕಲ್ಯಾಣಕ್ಕೆ ಹೇಗೆ ನೇರವಾಗಿ ಕೊಡುಗೆ ನೀಡಬಹುದು ಎಂಬುದರ ಕುರಿತು ಚಿಂತನೆ ನಡೆಸಿದರು. ದೇಶವನ್ನು ರಕ್ಷಿಸುವ ಸೈನಿಕರು ತಮ್ಮ ವೈಯಕ್ತಿಕ ಕಾನೂನು ಬಿಕ್ಕಟ್ಟುಗಳನ್ನು ನಿಭಾಯಿಸಲು ಏಕಾಂಗಿಯಾಗಿ ಉಳಿಯಬಾರದು ಎಂಬುದನ್ನು ಕಾನೂನು ಸಮುದಾಯ ಖಚಿತಪಡಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂಥದ್ದೊಂದು ಯೋಜನೆಗೆ ನ್ಯಾ. ಸೂರ್ಯಕಾಂತ್ ಮುಂದಡಿಯಿಟ್ಟಿದ್ದು, ಈ ಐತಿಹಾಸಿಕ ನ್ಯಾಯಾಂಗ ಕ್ರಮವು, ಸೈನಿಕರು ತಮ್ಮ ಕರ್ತವ್ಯಗಳ ಮೇಲೆ ಸಂಪೂರ್ಣವಾಗಿ ಗಮನಹರಿಸಲು ಅನುವು ಮಾಡಿಕೊಡುವ ಗುರಿಯನ್ನು ಹೊಂದಿದೆ. ಇದು ಅವರಿಗೆ ತಮ್ಮ ಕುಟುಂಬದ ಕಾನೂನು ಸಮಸ್ಯೆಗಳ ಬಗ್ಗೆ ಚಿಂತಿಸದೆ ದೇಶ ರಕ್ಷಣೆಯಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡಲಿದೆ.
ಈ ಯೋಜನೆ ಹೇಗೆ ನೆರವಾಗುತ್ತೆ?
ಈ ಹೊಸ ಯೋಜನೆಯು ದೀರ್ಘಕಾಲದಿಂದ ಸೈನಿಕರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯೊಂದನ್ನು ಪರಿಹರಿಸುವ ಗುರಿ ಹೊಂದಿದೆ. ದೂರದ ಮತ್ತು ದುರ್ಗಮ ಪ್ರದೇಶಗಳಲ್ಲಿ ನಿಯೋಜಿಸಲಾದ ಸೈನಿಕರು, ತಮ್ಮ ಕುಟುಂಬದ ಆಸ್ತಿ, ಕೌಟುಂಬಿಕ ಕಲಹಗಳು ಅಥವಾ ಭೂ ವಿವಾದಗಳಿಗೆ ಸಂಬಂಧಿಸಿದ ಕಾನೂನು ಪ್ರಕರಣಗಳನ್ನು ಮುಂದುವರಿಸಲು ಸಾಧ್ಯವಾಗದೇ ಪರದಾಡುತ್ತಿದ್ದರು.
ಉದಾಹರಣೆಗೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯದಲ್ಲಿರುವ ಸೈನಿಕನೊಬ್ಬನಿಗೆ, ಕೇರಳ ಅಥವಾ ತಮಿಳುನಾಡಿನಲ್ಲಿರುವ ತನ್ನ ಮನೆಯಲ್ಲಿನ ನ್ಯಾಯಾಲಯದ ಕಲಾಪಗಳಿಗೆ ಹಾಜರಾಗಲು ರಜೆ ಸಿಗದಿರಬಹುದು ಅಥವಾ ಅದಕ್ಕೆ ಸೀಮಿತ ಅವಕಾಶಗಳಿರಬಹುದು. ಈ ಯೋಜನೆಯ ಅಡಿಯಲ್ಲಿ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮಧ್ಯಪ್ರವೇಶಿಸಿ, ದೇಶದಾದ್ಯಂತ ನ್ಯಾಯಾಲಯಗಳಲ್ಲಿ ಇಂತಹ ಪ್ರಕರಣಗಳು ಸರಿಯಾಗಿ ಪ್ರತಿನಿಧಿಸಲ್ಪಡುವಂತೆ ನೋಡಿಕೊಳ್ಳಲಿದೆ.
ಅರೆಸೇನಾ ಪಡೆಗಳಿಗೂ ವಿಸ್ತರಣೆ
ಈ ಕಾನೂನು ನೆರವಿನ ಬೆಂಬಲವನ್ನು ಅರೆಸೇನಾ ಪಡೆಗಳ ಸಿಬ್ಬಂದಿಗೂ ವಿಸ್ತರಿಸಲಾಗುವುದು. ಇದರಲ್ಲಿ ಗಡಿ ಭದ್ರತಾ ಪಡೆ (BSF), ಕೇಂದ್ರ ಮೀಸಲು ಪೊಲೀಸ್ ಪಡೆ (CRPF), ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ITBP) ಮತ್ತು ಇದೇ ರೀತಿ ದೂರದ ಹಾಗೂ ಹೆಚ್ಚಿನ ಅಪಾಯದ ಪರಿಸ್ಥಿತಿಗಳಲ್ಲಿ ಸೇವೆ ಸಲ್ಲಿಸುವ ಇತರ ಪಡೆಗಳ ಸಿಬ್ಬಂದಿಯೂ ಮುಂದಿನ ದಿನಗಳಲ್ಲಿ ಇದರ ವ್ಯಾಪ್ತಿಗೆ ಬರಲಿದ್ದಾರೆ.


















