ತುಮಕೂರು: ಪೊಲೀಸ್ ಠಾಣೆಯ ಮುಂದೆ ದಲಿತ ಸಮುದಾಯದವರಿಂದ ಅರೆ ಬೆತ್ತಲೆ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಜಿಲ್ಲೆಯ ತಿಪಟೂರು ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಮಗಳು ಕಿಡ್ನಾಪ್ ಆಗಿದ್ದಾಳೆಂದು ದೂರು ನೀಡಿದರೂ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.
ರಂಗಸ್ವಾಮಿ ಎಂಬುವರ ಮಗಳನ್ನ ರಕ್ಷಿತ್ ಎಂಬ ಯುವಕ ಕಿಡ್ನಾಪ್ ಮಾಡಿದ್ದಾನೆಂದು ಆರೋಪಿಸಿ ದೂರು ನೀಡಲು ಮುಂದಾಗಿದ್ದಾರೆ. ಏ. 12ರಂದು ಆಟೋದಲ್ಲಿ ಬಂದಿದ್ದ ರಕ್ಷಿತ್ ನ ತಾಯಿ ಹಾಗೂ ಆತನ ಸ್ನೇಹಿತರು ರಂಗಸ್ವಾಮಿ ಮಗಳನ್ನು ಕಿಡ್ನಾಪ್ ಮಾಡಿದ್ದರೆಂದು ಆರೋಪಿಸಿದ್ದಾರೆ. ನಮ್ಮನ್ನು ಮನೆಯಲ್ಲಿ ಕೂಡಿಹಾಕಿ ನನ್ನ ಮಗಳನ್ನ ಆಟೋದಲ್ಲಿ ಹತ್ತಿಸಿಕೊಂಡು ಹೋಗಿದ್ದಾರೆ. ಈ ಬಗ್ಗೆ ಏ. 14ರಂದು ತಿಪಟೂರು ನಗರ ಠಾಣೆಗೆ ದೂರು ನೀಡಿದರೂ ಎಫ್ಐಆರ್ ದಾಖಲಿಸಿಕೊಂಡಿಲ್ಲ ಎಂದು ರಂಗಸ್ವಾಮಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಕೇವಲ ಮೌಖಿಕವಾಗಿ ಹುಡುಕಿಕೊಡುತ್ತೇವೆ ಎಂದು ವಾಪಾಸ್ ಕಳುಹಿಸಿದ್ದಾರೆ. ಹೀಗಾಗಿ ನಮಗೆ ನ್ಯಾಯ ಬೇಕು. ನಾವು ದಲಿತರು ಎಂಬ ಕಾರಣಕ್ಕೆ ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಪೊಲೀಸ್ ಠಾಣೆಯ ಮುಂದೆ ರಂಗಸ್ವಾಮಿ ಹಾಗೂ ಕುಟುಂಬಸ್ಥರು ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.