ಚಿಕ್ಕಬಳ್ಳಾಪುರ | ಕೋಲಾರ ಪಕ್ಕದ ಚಿಕ್ಕಬಳ್ಳಾಪುರದಲ್ಲೂ ಚಿನ್ನದ ನಿಕ್ಷೇಪವಿರೋ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ಗಡಿಭಾಗದಲ್ಲಿ ಹೈಟೆಕ್ ಸರ್ವೆ ನಡೆಸಲಾಗ್ತಿದೆ. ಆಂಧ್ರದ ಕದಿರಿ ಮತ್ತು ಕರ್ನಾಟಕದ ಗುಡಿಬಂಡೆ ಸುತ್ತಮುತ್ತ ಹೆಲಿಕಾಪ್ಟರ್ ಮೂಲಕ ಗುಪ್ತ ನಿಧಿಗಾಗಿ ವಾಯುಗಾಮಿ ಸಮೀಕ್ಷೆ ಮಾಡಲಾಗುತ್ತಿದೆ.
ಹೆಲಿಕ್ಯಾಪ್ಟರ್ ಮೂಲಕ ವೈಜ್ಞಾನಿಕ ಸಲಕರಣೆಗಳನ್ನ ಬಳಸಿಕೊಂಡು ಜಿಲ್ಲೆ ಹಾಗೂ ಪಕ್ಕದ ತುಮಕೂರು ಜಿಲ್ಲೆಯ ಹಲವು ಕಡೆ ಏರಿಯಲ್ ಸರ್ವೆ ನಡೆಸಲಾಗುತ್ತಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ಚಿನ್ನದ ಗಣಿಯ ಬೆಟ್ಟದ ಸಾಲುಗಳು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಹರಡಿರುವ ಹಿನ್ನೆಲೆಯಲ್ಲಿ ಚಿನ್ನದ ನಿಕ್ಷೇಪಗಳಿಗಾಗಿ ಸರ್ವೆಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಇನ್ನು ಸುತ್ತಮುತ್ತಲ ಗ್ರಾಮಗಳ ಜನರು ಹೆಲಿಕಾಪ್ಟರ್ ಹಾರಾಟ ಕಂಡು ಸರ್ವೆ ಕಾರ್ಯ ನೋಡಲು ಹೆಲಿಕಾಪ್ಟರ್ ನೋಡಲು ಮುಗಿಬಿಳುತ್ತಿದ್ದಾರೆ. ಒಂದು ವೇಳೆ ಚಿನ್ನದ ಅದಿರು ಪತ್ತೆಯಾದ್ರೆ ರಾಜ್ಯ-ದೇಶದ ಆರ್ಥಿಕತೆಗೆ ಭರ್ಜರಿ ಬೂಸ್ಟ್ ಸಿಗಲಿದೆ.
ಜಿಲ್ಲಾಧಿಕಾರಿ ಹೇಳಿದ್ದೇನು?
ಭಾರತ ಸರ್ಕಾರದ ಭೂ ವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ ಭೂ ಭೌತಶಾಸ್ತ್ರ ಇಲಾಖೆಯಿಂದ ಖನಿಜ ನಿಕ್ಷೇಪಗಳ ಪತ್ತೆಕಾರ್ಯ ನಡೆಯಲಿದೆ. 2019-20ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಖನಿಜ ನಿಕ್ಷೇಪಗಳ ಪತ್ತೆ ಸರ್ವೆ ಕಾರ್ಯ ನಡೆದಿತ್ತು. ಅದರ ವರದಿ ಆಧಾರದ ಮೇಲೆ ಭಾರತ ಸರ್ಕಾರ ಆಳವಾದ ಅಧ್ಯಯನ ಕೈಗೊಂಡಿದೆ.
ಇನ್ನೂ ಜನವರಿ-28 ರಿಂದ ಮೇ 31 ರ ವರೆಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಿನ್ನ ಸೇರಿದಂತೆ ಉಳಿದ ಖನಿಜ ನಿಕ್ಷೇಪಗಳಿಗಾಗಿ ಸರ್ವೆ ನಡೆಯಲಿದೆ. ಸ್ಯಾಟ್ಲೈಟ್ ಬಳಸಿಕೊಂಡು ಅತ್ಯಾಧುನಿಕ ಮಾದರಿಯಲ್ಲಿ ಖನಿಜ ನಿಕ್ಷೇಪ ಪತ್ತೆ ಕಾರ್ಯ ಭರ್ಜರಿಯಿಂದ ನಡೆದಿದೆ. ಇದರಿಂದ ಒಂದು ಹೆಲಿಕ್ಯಾಪ್ಟರ್ ಹಾಗೂ ಸರ್ವೆಗೆ ಬಳಸುತ್ತಿರುವ ಸಲಕರಣೆಗಳು ಭೂಮಿಯ ಮೇಲ್ಮೈ ತೀರಾ ಸನಿಹದಲ್ಲಿ ಹಾರಾಡುತ್ತಿದ್ದು, ಸಾರ್ವಜನಿಕರು ಗಾಬರಿಪಡದಂತೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮನವಿ ಮಾಡಿದೆ. ಇನ್ನು ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದ ಅಗತ್ಯ ಅನುಮೋದನೆಯನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ ಪ್ರಭು ತಿಳಿಸಿದ್ದಾರೆ.
ಇದನ್ನೂ ಓದಿ : ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಸಾವು ಪ್ರಕರಣ | ಸಮಗ್ರ ತನಿಖೆಗೆ ಆದೇಶ!



















