ಅಮೃತಸರ: ಭಾರತ –ಪಾಕಿಸ್ತಾನ ನಡುವೆ(India-Pakistan News) ಕದನ ವಿರಾಮ ಘೋಷಿಸಲಾಗಿದ್ದರೂ, ಗಡಿಯಲ್ಲಿ ಪಾಕ್ ಕ್ಯಾತೆ ಮುಂದುವರಿದಿರುವ ಕಾರಣ ಶಾಲೆಗಳನ್ನು ಸದ್ಯಕ್ಕೆ ತೆರೆಯದೇ ಇರಲು ನಿರ್ಧರಿಸಲಾಗಿದೆ. ಪಂಜಾಬ್ನ ಗಡಿ ಭಾಗದ ಐದು ಜಿಲ್ಲೆಗಳಾದ ಅಮೃತಸರ, ಪಠಾಣ್ಕೋಟ್, ಫಾಜಿಲ್ಕಾ, ಫಿರೋಜ್ಪುರ ಮತ್ತು ತರನ್ ತಾರನ್ನಲ್ಲಿ ಮಂಗಳವಾರವೂ ಶಾಲೆಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ರಾತ್ರಿ ಪಂಜಾಬ್ ಗಡಿಯಲ್ಲಿ ಪಾಕ್ ಡ್ರೋನ್ ಪತ್ತೆಯಾಗಿದ್ದು, ಅದನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು. ಅದರ ಬೆನ್ನಲ್ಲೇ ಅಮೃತಸರ ಹಾಗೂ ಹೊಶಿಯಾರ್ಪುರದ ದಾಸೂಯಾ ಮತ್ತು ಮುಕೇರಿಯನ್ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಕಡಿತಗೊಳಿಸಲಾಗಿತ್ತು.
ಕದನ ವಿರಾಮ ಘೋಷಣೆಯ ನಂತರವೂ ಪಾಕ್ ತನ್ನ ಚಾಳಿ ಮುಂದುವರಿಸಿರುವ ಕಾರಣ, ಪಠಾಣ್ಕೋಟ್ ಮತ್ತು ಅಮೃತಸರದಲ್ಲಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನೂ ಮುಚ್ಚಲಾಗಿದೆ. ಆದರೆ, ಅಮೃತಸರ ಜಿಲ್ಲಾಡಳಿತವು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಆನ್ಲೈನ್ ತರಗತಿಗಳನ್ನು ನಡೆಸಬಹುದು ಎಂದು ತಿಳಿಸಿದೆ. ಗುರದಾಸ್ಪುರ, ಸಂಗ್ರೂರ್ ಮತ್ತು ಬರನಾಲಾ ಜಿಲ್ಲೆಗಳಲ್ಲಿ ಮಂಗಳವಾರ ಶಾಲೆಗಳು ಪುನರಾರಂಭಗೊಂಡಿದ್ದರೂ, ಮೇಲಿನ ಐದು ಗಡಿ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಮುಂದುವರಿದಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಪಾಕ್ ಡ್ರೋನ್ ಚಟುವಟಿಕೆ
ಸೋಮವಾರ ರಾತ್ರಿ ಪಂಜಾಬ್ನ ಜಲಂಧರ್ ಪ್ರದೇಶದಲ್ಲಿ ಪಾಕ್ ಡ್ರೋನ್ ಚಟುವಟಿಕೆಯನ್ನು ಗಮನಿಸಲಾಗಿದ್ದು, ಕೂಡಲೇ ಅದನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ. ಜಲಂಧರ್ನ ಉಪ ಆಯುಕ್ತ ಹಿಮಾಂಶು ಅಗರವಾಲ್ ಅವರು, ಮಾಂಡ್ ಗ್ರಾಮದ ಬಳಿ ಸಂದೇಹಾಸ್ಪದ “ಡ್ರೋನ್” ಅನ್ನು ಸಶಸ್ತ್ರ ಪಡೆಗಳು ನಿಷ್ಕ್ರಿಯಗೊಳಿಸಿವೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಮೃತಸರ ಮತ್ತು ಹೊಶಿಯಾರ್ಪುರದ ದಾಸೂಯಾ ಮತ್ತು ಮುಕೇರಿಯನ್ ಪ್ರದೇಶಗಳಲ್ಲಿ ಬ್ಲ್ಯಾಕ್ ಔಟ್ ಮಾಡಲಾಗಿತ್ತು. ಅಮೃತಸರದಲ್ಲಿ ಸೋಮವಾರ ರಾತ್ರಿ 11:42ರ ವೇಳೆಗೆ ವಿದ್ಯುತ್ ಸಂಪರ್ಕವನ್ನು ಪುನಃ ಸ್ಥಾಪಿಸಲಾಯಿತು. ವಿದ್ಯುತ್ ಕಡಿತ ಮತ್ತು ಅಮೃತಸರ ವಿಮಾನ ನಿಲ್ದಾಣವನ್ನು ಮುಚ್ಚಿದ್ದರಿಂದ, ಅಮೃತಸರಕ್ಕೆ ಹೊರಟಿದ್ದ ಇಂಡಿಗೋ ವಿಮಾನವು ದಿಲ್ಲಿಗೆ ವಾಪಸ್ಸಾಯಿತು.