ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಎಸ್ಸಿ ಸಮಗ್ರ ಸಮೀಕ್ಷಾ ಕಾರ್ಯ ನಡೆಸುತ್ತಿರುವ ಕುರಿತು ಖಾತರಿ ಪಡಿಸಿಕೊಳ್ಳುವ ಸಲುವಾಗಿ ನಾಳೆಯಿಂದ (23ನೇ ಜೂನ್ 2025 ರಿಂದ) ಪ್ರತಿ ಮನೆಗೆ ಸ್ಟಿಕ್ಕರ್ ಅಂಟಿಸಲು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ 101 ಜಾತಿಗಳಿಗೆ ಸೇರಿದವರ ಪ್ರಾತಿನಿದ್ಯತೆ ಕುರಿತು ವೈಜ್ಞಾನಿಕ ದತ್ತಾಂಶವನ್ನು (Emperical Data) ಸಂಗ್ರಹಿಸಲು, 05-05-2025 ರಿಂದ ಮನೆ-ಮನೆ ಭೇಟಿ ನೀಡುವ ಮೂಲಕ ರಾಜ್ಯಾದ್ಯಂತ ಸಮೀಕ್ಷೆಯನ್ನು ಪ್ರಾರಂಭಿಸಲಾಗಿರುತ್ತದೆ.
ಕರ್ನಾಟಕ ಸರ್ಕಾರವು ಪ್ರತಿಯೊಬ್ಬರಿಗೂ, ವಿಶೇಷವಾಗಿ ಪರಿಶಿಷ್ಟ ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಈ ನಿಟ್ಟಿನಲ್ಲಿ, ಪರಿಶಿಷ್ಟ ಜಾತಿ ಸಮೀಕ್ಷೆಯನ್ನು ನಡೆಸುವ ಜವಾಬ್ದಾರಿಯನ್ನು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗಕ್ಕೆ ವಹಿಸಲಾಗಿದೆ.
ಅದರಂತೆ, ಕರ್ನಾಟಕದ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರೆ ಪಾಲಿಕೆಯ ತಂಡ ಅಥವಾ ಗಣತಿದಾರರು ಜೂನ್ 23, 2025 ರಿಂದ ನಿಮ್ಮ ಮನೆಗೆ ಭೇಟಿ ನೀಡಿ ಸಮೀಕ್ಷಾ ಕಾರ್ಯವನ್ನು ನಡೆಸುತ್ತಾರೆ. ಬಿಬಿಎಂಪಿ ತಂಡ ಅಥವಾ ಗಣತಿದಾರರು ಮನೆಗೆ ಭೇಟಿ ಮಾಡಿರುವ ಪುರಾವೆಯಾಗಿ ಪ್ರತಿ ಮನೆಗೆ ಸ್ಟಿಕ್ಕರ್ ಅಂಟಿಸುತ್ತಾರೆ.
ನಿಮ್ಮ ಮನೆಗೆ ಭೇಟಿ ನೀಡುವ ಬಿಬಿಎಂಪಿ ತಂಡ ಅಥವಾ ಗಣತಿದಾರರಿಗೆ ಸಹಕರಿಸಿ ಮತ್ತು ಸರಿಯಾದ ಮಾಹಿತಿ ನೀಡಿ. ಅಲ್ಲದೆ, ನಿಮ್ಮ ಮನೆಗೆ ಅಂಟಿಸಿದ ಸ್ಟಿಕ್ಕರ್ ಅನ್ನು ತೆಗೆದು ಹಾಕಬೇಡಿ.
ಸಮೀಕ್ಷಾ ಕಾರ್ಯದಲ್ಲಿ ಶೇ. 100 ರಷ್ಟು ಪ್ರಗತಿ ಸಾಧಿಸಲು ಸಮೀಕ್ಷೆಯಲ್ಲಿ ಇದುವರೆಗೂ ಭಾಗವಹಿಸದೇ ಇರುವ ಕರ್ನಾಟಕ ರಾಜ್ಯಕ್ಕೆ ಸೇರಿದ ಪರಿಶಿಷ್ಟ ಜಾತಿ ಕುಟುಂಬದವರಿಗೆ, 22ನೇ ಜೂನ್ 2025 ರವರೆಗೆ ಈ ಕೆಳಕಂಡ ಸ್ಥಳಗಳಲ್ಲಿ/ವಿಧಾನದ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ.
- ನಾಗರೀಕ ಸೇವಾ ಕೇಂದ್ರಗಳಾದ, “ಕರ್ನಾಟಕ ಒನ್” (Karnataka one) “ಬೆಂಗಳೂರು ಒನ್” (Bengaluru one) “ಗ್ರಾಮ ಒನ್”(Grama one) ಮತ್ತು ಬಾಪೂಜಿ ಸೇವಾ ಕೇಂದ್ರಗಳು.
- ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್ ಕಚೇರಿ (BBMP ward offices) ಗಳಲ್ಲಿ ವ್ಯವಸ್ಥೆ ಮಾಡಿಕೊಂಡಿರುವ ಪ್ರತ್ಯೇಕವಾದ ಶಿಬಿರಗಳು.
- Online ನಲ್ಲಿ https://schedulecastesurvey.karnataka.gov.in/selfd eclaration ಲಿಂಕ್ ಮೂಲಕ ಸ್ವಯಂ ಘೋಷಣೆ ಮಾಡಿಕೊಳ್ಳುವುದು.
ಸಮೀಕ್ಷೆಯಲ್ಲಿ ಭಾಗವಹಿಸದೇ ಇರುವ ಪರಿಶಿಷ್ಟ ಜಾತಿ ಕುಟುಂಬದವರಿಗೆ ಅಂತಿಮ ಅವಕಾಶ ಕಲ್ಪಿಸುವ ಉದ್ದೇಶದಿಂದ ಮೇಲ್ಕಂಡ ಸ್ಥಳ/ ವಿಧಾನಗಳ ಮೂಲಕ ರಾಜ್ಯಾದ್ಯಂತ ಸಮೀಕ್ಷಾ ದಿನಾಂಕವನ್ನು ದಿನಾಂಕ: 23-06-2025 ರಿಂದ ದಿನಾಂಕ: 30-06-2025 ರವರೆಗೆ ವಿಸ್ತರಿಸಿದೆ.
ಬೆಂಗಳೂರು ನಗರದಲ್ಲಿ ಸಮೀಕ್ಷೆಯು ಶೇ. 100 ರಷ್ಟು ಗುರಿ ಸಾಧಿಸಲು ಸಂಬಂಧಪಟ್ಟವರು ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.