ಲಕ್ನೋ: ಸನಾತನ ಧರ್ಮ (Sanatana Dharma) ಎನ್ನುವುದು ಭಾರತದ ರಾಷ್ಟ್ರೀಯ ಧರ್ಮ. ಅದು ಮಾನವೀಯತೆಯ ಧರ್ಮ. ಇಲ್ಲಿ ಪೂಜಾ ಪ್ರಕ್ರಿಯೆ ವಿಭಿನ್ನವಾಗಿರಬಹುದು ಆದರೆ ಧರ್ಮದ ಸಂಸ್ಕಾರ ಮಾತ್ರ ಒಂದೇ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಅಭಿಪ್ರಾಯಪಟ್ಟಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಸನಾತನ ಧರ್ಮ ಭಾರತದ ರಾಷ್ಟ್ರೀಯ ಧರ್ಮವಾಗಿದೆ. ಮಹಾ ಕುಂಭಮೇಳ ಸನಾತನ ಧರ್ಮದ ಭಾಗ. ಮಹಾ ಕುಂಭಮೇಳ (Maha Kumbhmela), ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಬೃಹತ್ ಧಾರ್ಮಿಕ ಕಾರ್ಯಕ್ರಮವಾಗಿದೆ. ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಮೀಸಲಾಗಿಲ್ಲ ಎಂದು ಹೇಳಿದ್ದಾರೆ.
ಇಡೀ ವಿಶ್ವಕ್ಕೆ ಏಕತೆಯ ಸಂದೇಶವನ್ನು ಮಹಾ ಕುಂಭ ಮೇಳ ನೀಡುತ್ತದೆ. ಇಲ್ಲಿ ಯಾವುದೇ ತಾರತಮ್ಯವಿಲ್ಲ. ಸನಾತನ ಧರ್ಮವನ್ನು ಟೀಕಿಸುತ್ತಿದ್ದ ಜನರು, ಇದನ್ನು ನೋಡಿ ಮಾತನಾಡಬೇಕು. ಸುಮ್ಮನೆ ಧೃತರಾಷ್ಟ್ರನ ರೀತಿ ಮಾತನಾಡಬಾರದು ಎಂದು ಹೇಳಿದ್ದಾರೆ.