ನವದೆಹಲಿ : ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಿರುವುದು ಲಿಂಗ ತಾರತಮ್ಯದ ಭಾಗವಲ್ಲ, ಬದಲಾಗಿ ಅದು ಧಾರ್ಮಿಕ ನಂಬಿಕೆ ಮತ್ತು ಸಂಪ್ರದಾಯಕ್ಕೆ ಸಂಬಂಧಿಸಿದ ವಿಷಯ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. 2018ರ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅರ್ಜಿಗಳ ವಿಚಾರಣೆಗೂ ಮುನ್ನ ಕೇಂದ್ರ ಸರ್ಕಾರವು ಮಂಗಳವಾರ ತನ್ನ ಲಿಖಿತ ಅಫಿಡವಿಟ್ ಸಲ್ಲಿಸಿ ಈ ಮಹತ್ವದ ವಾದವನ್ನು ಮುಂದಿಟ್ಟಿದೆ.
ಶಬರಿಮಲೆಯಲ್ಲಿ ಮಹಿಳೆಯರಿಗೆ ಇರುವ ನಿರ್ಬಂಧವು ಅಶುದ್ಧತೆ ಅಥವಾ ಕೀಳರಿಮೆಯ ಆಧಾರದ ಮೇಲೆ ಮಾಡಿದ್ದಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಅಯ್ಯಪ್ಪ ಸ್ವಾಮಿಯು ‘ನೈಷ್ಠಿಕ ಬ್ರಹ್ಮಚಾರಿ’ ರೂಪದಲ್ಲಿ ಅಲ್ಲಿ ನೆಲೆಸಿರುವುದು ಈ ನಿಯಮಕ್ಕೆ ಮುಖ್ಯ ಕಾರಣವಾಗಿದೆ.
ಒಂದು ವೇಳೆ ಈ ಸಂಪ್ರದಾಯಕ್ಕೆ ಧಕ್ಕೆ ತಂದರೆ ಅದು ದೇವಸ್ಥಾನದ ಆರಾಧನಾ ಸ್ವರೂಪವನ್ನೇ ಬದಲಿಸಿದಂತಾಗುತ್ತದೆ. ಶತಶತಮಾನಗಳಿಂದ ಭಕ್ತರು ಈ ವಿಶಿಷ್ಟ ಪರಂಪರೆಯನ್ನು ಗೌರವಿಸುತ್ತಾ ಬಂದಿದ್ದಾರೆ. ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡುವುದು ಸಂವಿಧಾನವು ರಕ್ಷಿಸಿರುವ ಧಾರ್ಮಿಕ ಬಹುತ್ವಕ್ಕೆ ನೀಡುವ ಕೊಡಲಿಯೇಟು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ನ್ಯಾಯಾಂಗ ವಿಮರ್ಶೆಯ ವ್ಯಾಪ್ತಿಗೆ ಮೀರಿದ್ದು
ಧಾರ್ಮಿಕ ನಂಬಿಕೆಗಳು ಮತ್ತು ದೇವಸ್ಥಾನಗಳ ಆಂತರಿಕ ಸ್ವಾಯತ್ತತೆಯ ವಿಷಯಗಳು ನ್ಯಾಯಾಂಗ ವಿಮರ್ಶೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಂದ್ರ ಸರ್ಕಾರ ಬಲವಾಗಿ ವಾದಿಸಿದೆ. ಧಾರ್ಮಿಕ ಆಚರಣೆಗಳನ್ನು ‘ವೈಚಾರಿಕತೆ’, ‘ಆಧುನಿಕತೆ’ ಅಥವಾ ‘ವೈಜ್ಞಾನಿಕತೆ’ಯ ಮಾನದಂಡಗಳ ಮೇಲೆ ಅಳೆಯುವುದು ಸರಿಯಲ್ಲ ಎಂದು ಎಚ್ಚರಿಸಿದೆ. ಇಂತಹ ಪ್ರಯತ್ನಗಳು ನಡೆದರೆ, ನ್ಯಾಯಾಲಯಗಳು ಧರ್ಮದ ಆಂತರಿಕ ತಿಳಿವಳಿಕೆಗೆ ಬದಲಾಗಿ ತಮ್ಮದೇ ಆದ ವೈಯಕ್ತಿಕ ಅಥವಾ ತಾತ್ವಿಕ ದೃಷ್ಟಿಕೋನಗಳನ್ನು ಹೇರಿದಂತಾಗುತ್ತದೆ ಎಂದು ಸರ್ಕಾರ ಕಳವಳ ವ್ಯಕ್ತಪಡಿಸಿದೆ.
ಧಾರ್ಮಿಕ ಗ್ರಂಥಗಳ ವ್ಯಾಖ್ಯಾನ ನ್ಯಾಯಾಧೀಶರ ಕೆಲಸವಲ್ಲ
ಯಾವುದೇ ಆಚರಣೆಯು ನ್ಯಾಯಾಂಗದ ಸಂವೇದನೆಗೆ ಒಪ್ಪಿಗೆಯಾಗುತ್ತದೆಯೇ, ಇಲ್ಲವೇ ಎಂದು ಪರಿಶೀಲಿಸುವುದು ಸಾಂವಿಧಾನಿಕ ವಿಮರ್ಶೆಯಲ್ಲ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ. ಧಾರ್ಮಿಕ ಪಠ್ಯಗಳನ್ನು ವ್ಯಾಖ್ಯಾನಿಸಲು ಅಥವಾ ದೇವತಾಶಾಸ್ತ್ರದ ಪ್ರಶ್ನೆಗಳಿಗೆ ತೀರ್ಪು ನೀಡಲು ನ್ಯಾಯಾಧೀಶರಿಗೆ ಸಾಂಸ್ಥಿಕವಾಗಿ ಅಥವಾ ತಾಂತ್ರಿಕವಾಗಿ ತರಬೇತಿ ಇರುವುದಿಲ್ಲ. ಹಾಗಾಗಿ, ಧರ್ಮದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದೆ, ಶಬರಿಮಲೆಯ ಈ ಹಿಂದಿನ ನಿರ್ಬಂಧಿತ ಸಂಪ್ರದಾಯವನ್ನು ಎತ್ತಿ ಹಿಡಿಯಬೇಕು ಎಂದು ಕೇಂದ್ರವು ಸುಪ್ರೀಂ ಕೋರ್ಟ್ ಪೀಠಕ್ಕೆ ಮನವಿ ಮಾಡಿದೆ.
ಇದನ್ನೂ ಓದಿ : ವಿದ್ಯುತ್ ಸ್ಥಾವರಗಳ ಮೇಲೆ ಟ್ರಂಪ್ ಬಾಂಬ್ ದಾಳಿ ಭೀತಿ.. ‘ಮಾನವ ಸರಪಳಿ’ ರಕ್ಷಣೆಗೆ ಇರಾನ್ ಸಜ್ಜು



















