ಮುಂಬೈ: “ಸಂಘವು ಸೂಚಿಸಿದರೆ ನಾನು ಕ್ಷಣಾರ್ಧದಲ್ಲಿ ನನ್ನ ಜವಾಬ್ದಾರಿಯಿಂದ ಕೆಳಗಿಳಿಯಲು ಸಿದ್ಧ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
ಆರೆಸ್ಸೆಸ್ ಶತಮಾನೋತ್ಸವ ವರ್ಷದ ನಿಮಿತ್ತ ಮುಂಬೈನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಸಂಘದ ಆಂತರಿಕ ಶಿಸ್ತು, ಸಾಮಾಜಿಕ ಸಮಾನತೆ ಮತ್ತು ರಾಷ್ಟ್ರೀಯ ವಿಚಾರಗಳ ಕುರಿತು ಮಾತನಾಡುವ ವೇಳೆ ಈ ಹೇಳಿಕೆ ನೀಡಿದ್ದಾರೆ. ಸಾಮಾನ್ಯವಾಗಿ 75 ವರ್ಷ ದಾಟಿದ ನಂತರ ಯಾವುದೇ ಅಧಿಕೃತ ಸ್ಥಾನಗಳನ್ನು ಹೊಂದಿರದ ಸಂಪ್ರದಾಯ ಸಂಘದಲ್ಲಿದೆ ಎಂದೂ ಅವರು ಹೇಳಿದ್ದಾರೆ.
ಜಾತಿ ಮುಖ್ಯವಲ್ಲ, ಅರ್ಪಣಾ ಮನೋಭಾವ ಮುಖ್ಯ
ಸಂಘದ ಅತ್ಯುನ್ನತ ಸ್ಥಾನವಾದ ‘ಸರಸಂಘಚಾಲಕ’ ಹುದ್ದೆಗೆ ಜಾತಿ ಎಂದಿಗೂ ಮಾನದಂಡವಾಗುವುದಿಲ್ಲ ಎಂದು ಭಾಗವತ್ ಸ್ಪಷ್ಟಪಡಿಸಿದ್ದಾರೆ. “ಕ್ಷತ್ರಿಯ, ವೈಶ್ಯ, ಶೂದ್ರ ಅಥವಾ ಬ್ರಾಹ್ಮಣ ಯಾವುದೇ ಜಾತಿಯವರಾಗಿರಲಿ, ಹಿಂದೂ ಸಂಘಟನೆಗಾಗಿ ಶ್ರಮಿಸುವ ಯಾರು ಬೇಕಾದರೂ ಈ ಸ್ಥಾನಕ್ಕೆ ಏರಬಹುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಗಳೂ ತಮ್ಮ ಸಮರ್ಪಣಾ ಮನೋಭಾವದ ಆಧಾರದ ಮೇಲೆ ಸರಸಂಘಚಾಲಕರಾಗಲು ಸಾಧ್ಯವಿದೆ” ಎಂದು ಹೇಳುವ ಮೂಲಕ ಸಾಮಾಜಿಕ ಸಾಮರಸ್ಯದ ಸಂದೇಶ ನೀಡಿದ್ದಾರೆ.
ವೀರ ಸಾವರ್ಕರ್ಗೆ ‘ಭಾರತ ರತ್ನ’ ನೀಡಿ
ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ಕುರಿತು ಮಾತನಾಡಿದ ಅವರು, “ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವುದರಿಂದ ಪ್ರಶಸ್ತಿಯ ಗೌರವವೇ ಹೆಚ್ಚಾಗಲಿದೆ” ಎಂದು ಬಣ್ಣಿಸಿದ್ದಾರೆ. ಬ್ರಿಟಿಷರ ಕಾಲದ ಕ್ರಾಂತಿಕಾರರ ಕೊಡುಗೆಗಳನ್ನು ಸ್ಮರಿಸುವುದು ದೇಶದ ಹೆಮ್ಮೆಯ ವಿಷಯ ಎಂದು ಅವರು ಪ್ರತಿಪಾದಿಸಿದ್ದಾರೆ.
ಎಲ್ಲರ ಸಮ್ಮತಿ ಪಡೆದು ಯುಸಿಸಿ ಜಾರಿ ಮಾಡಿ
ಸದ್ಯ ದೇಶದಲ್ಲಿ ಚರ್ಚೆಯಾಗುತ್ತಿರುವ ಏಕರೂಪ ನಾಗರಿಕ ಸಂಹಿತೆ (UCC) ಬಗ್ಗೆ ಮಾತನಾಡಿದ ಅವರು, “ಯುಸಿಸಿ ಜಾರಿಗೆ ತರುವಾಗ ಸಮಾಜದ ಎಲ್ಲ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇದು ಸಮಾಜದಲ್ಲಿ ಯಾವುದೇ ರೀತಿಯ ಒಡಕನ್ನು ಸೃಷ್ಟಿಸಬಾರದು” ಎಂದು ಸಲಹೆ ನೀಡಿದ್ದಾರೆ. ಅಕ್ರಮ ನುಸುಳುವಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಇತ್ತೀಚೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯೇ ಬೇರೆ, ಸಂಘವೇ ಬೇರೆ
ಇದೇ ವೇಳೆ ಮೋದಿ ಸರ್ಕಾರವನ್ನು ಆರೆಸ್ಸೆಸ್ ಸರ್ಕಾರ ಎಂದು ಕರೆಯುವವರ ಟೀಕೆಗೆ ಪ್ರತಿಕ್ರಿಯಿಸಿದ ಭಾಗವತ್, “ಬಿಜೆಪಿ ಎಂಬುದು ಪ್ರತ್ಯೇಕ ರಾಜಕೀಯ ಪಕ್ಷ. ಸಂಘವು ನೇರವಾಗಿ ರಾಜಕೀಯದಲ್ಲಿ ಭಾಗವಹಿಸುವುದಿಲ್ಲ ಮತ್ತು ಸಂಘಕ್ಕೆ ಯಾವುದೇ ಅಧಿಕಾರದ ಹಂಬಲವಿಲ್ಲ. ಸಂಘದ ಕೆಲವು ಸ್ವಯಂಸೇವಕರು ಬಿಜೆಪಿಯಲ್ಲಿ ಸಕ್ರಿಯರಾಗಿರಬಹುದು, ಆದರೆ ಬಿಜೆಪಿ ಕಾರ್ಯಕರ್ತರೆಲ್ಲರೂ ಆರೆಸ್ಸೆಸ್ ಕಾರ್ಯಕರ್ತರಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ. ಭಾಷೆಯ ಕುರಿತು ಮಾತನಾಡುತ್ತಾ, ಇಂಗ್ಲಿಷ್ ಭಾಷೆಯನ್ನು ಅವಶ್ಯಕತೆ ಇದ್ದಾಗ ಮಾತ್ರ ಬಳಸಬೇಕು, ಸಂಘದ ಮುಖ್ಯ ಭಾಷೆ ಎಂದಿಗೂ ಇಂಗ್ಲಿಷ್ ಆಗುವುದಿಲ್ಲ ಎಂದು ಹೇಳಿದ ಅವರು, ಪ್ರತಿಯೊಬ್ಬ ಭಾರತೀಯನೂ ತನ್ನ ಮಾತೃಭಾಷೆಯನ್ನು ಗೌರವಿಸಬೇಕು ಎಂದೂ ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ : ಮಲೇಷ್ಯಾದಲ್ಲಿ ಮೋದಿ | ಆರು ಪ್ರಮುಖ ಒಪ್ಪಂದಗಳಿಗೆ ಉಭಯ ದೇಶಗಳ ಸಹಿ



















