ಬಾರ್ಡರ್ ಗವಾಸ್ಕರ್ ಟ್ರೋಫಿ ಸೇರಿದಂತೆ ಕೆಲವು ಪಂದ್ಯಗಳಿಂದ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ(Rohit Sharma) ಇದೀಗ ದೇಶಿಯ ಕ್ರಿಕೆಟ್ ತಂಡದೊಂದಿಗೆ ಅಭ್ಯಾಸಕ್ಕೆ ಹಾಜರಾಗಿ ಗಮನ ಸೆಳೆದಿದ್ದಾರೆ. ಅವರು ಮತ್ತು ಕೊಹ್ಲಿ ರಣಜಿ ಸೇರಿದಂತೆ ದೇಶೀಯ ಕ್ರಿಕೆಟ್ ನಿರ್ಲಕ್ಷಿಸಿದ್ದಕ್ಕಾಗಿ ಟೀಕೆಗೆ ಒಳಗಾಗಿದ್ದರು.
2024ರ ಅಕ್ಟೋಬರ್ನಿಂದ ಟೆಸ್ಟ್ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಆಡಿರುವ ಎಂಟು ಪಂದ್ಯಗಳಲ್ಲಿ ಆರರಲ್ಲಿ ಸೋಲು ಕಂಡಿದ್ದಾರೆ. ನಾಯಕನಾಗಿ ಮಾತ್ರವಲ್ಲದೆ ಆಟಗಾರನಾಗಿಯೂ ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಮುಂಬೈನ ಸುಪ್ರಸಿದ್ಧ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅವರು ಅಭ್ಯಾಸ ಆರಂಭಿಸಿದ್ದಾರೆ. ಭಾರತದ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಅವರೊಂದಿಗೆ ರೋಹಿತ್ ಬ್ಯಾಟಿಂಗ್ ಮಾಡಿದ್ದಾರೆ. 37 ವರ್ಷದ ಆಟಗಾರ, ರಣಜಿ ತಂಡದೊಂದಿಗೆ ಅಭ್ಯಾಸದಲ್ಲಿ ಭಾಗವಹಿಸುವ ಬಗ್ಗೆ ಮುಂಬೈ ತಂಡದ ಮ್ಯಾನೇಜ್ಮೆಂಟ್ಗೆ ಮಾಹಿತಿ ನೀಡಿದ್ದಾರೆ.
ಜಮ್ಮು ಕಾಶ್ಮೀರ ವಿರುದ್ಧ ಮುಂದಿನ ಪಂದ್ಯ
ಎಂಸಿಎ ಕ್ರಿಕೆಟ್ ಮೈದಾನದಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಪಂದ್ಯಕ್ಕೆ ಮೊದಲು ಅವರು ಅಭ್ಯಾಸ ಶುರು ಮಾಡಿಕೊಂಡಿದ್ದಾರೆ.
“ರೋಹಿತ್ ಶರ್ಮಾ ಇಂದು (ಮಂಗಳವಾರ) ರಣಜಿ ಟ್ರೋಫಿ ತಂಡದೊಂದಿಗೆ ತರಬೇತಿಗೆ ಬರಲಿದ್ದಾರೆ. ಅಜಿಂಕ್ಯ ರಹಾನೆ, ಶಾರ್ದೂಲ್ ಠಾಕೂರ್ ಮತ್ತು ಶ್ರೇಯಸ್ ಅಯ್ಯರ್ ಕೂಡ ತಂಡದಲ್ಲಿ ಇರಲಿದ್ದಾರೆ,” ಎಂದು ಎಂಸಿಎ ಮೂಲಗಳು ಹೇಳಿವೆ.
ರೋಹಿತ್ಗೆ ಹಿನ್ನಡೆ
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಟೆಸ್ಟ್ ತಂಡವು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ವೈಟ್ವಾಶ್ ಮುಖಭಂಗಕ್ಕೆ ಒಳಗಾಗಿತ್ತು. ಕಿವೀಸ್ ತಂಡ 3-1 ಅಂತರದಲ್ಲಿ ಸರಣಿ ಗೆದ್ದು ಬೀಗಿತ್ತು.
ಭಾರತದ ನಾಯಕ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲೂ ಮಿಂಚಲಿಲ್ಲ. ಆಡಿದ ಐದು ಇನ್ನಿಂಗ್ಸ್ಗಳಲ್ಲಿ 6.2ರ ಸರಾಸರಿಯಲ್ಲಿ ಕೇವಲ 31 ರನ್ ಗಳಿಸುವಷ್ಟರಲ್ಲಿ ಸುಸ್ತಾಗಿದ್ದರು. ಕಳಪೆ ಫಾರ್ಮ್ನಿಂದಾಗಿ ಸಿಡ್ನಿಯಲ್ಲಿ ನಡೆದ ಸರಣಿಯ ನಿರ್ಣಾಯಕ ಪಂದ್ಯದಿಂದ ಹೊರಗುಳಿದರು. ಸೆಪ್ಟೆಂಬರ್ ತಿಂಗಳಿನಿಂದ ಅವರು ಆಡಿದ ಎಂಟು ಪಂದ್ಯಗಳಲ್ಲಿ 10.93ರ ಸರಾಸರಿಯಲ್ಲಿ ಕೇವಲ 164 ರನ್ ಮಾತ್ರ ಗಳಿಸಿದ್ದಾರೆ.