ನಾಗ್ಪುರ: ಇಂಗ್ಲೆಂಡ್ ವಿರುದ್ದ ಏಕದಿನ ಸರಣಿಗೂ (IND vs ENG) ಮುನ್ನ ನಡೆದ ಮಾಧ್ಯಮಗೋಷ್ಠಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಪತ್ರಕರ್ತರೊಬ್ಬರ ಪ್ರಶ್ನೆಗೆ ಸಿಟ್ಟಿಗೆದ್ದ ಪ್ರಸಂಗ ನಡೆಯಿತು. ಇದ್ಯಾವ ಸೀಮೆಯ ಪ್ರಶ್ನೆ ಎಂದು ಕೇಳುವ ಮೂಲಕ ಹಿಟ್ಮ್ಯಾನ್ ಗರಂ ಆದರು. ಅಲ್ಲದೆ, ಪ್ರಶ್ನೆಯ ಬಗ್ಗೆ ಪ್ರಶ್ನೆ ಕೇಳಿದವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲನೇ ಏಕದಿನ ಪಂದ್ಯ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿದೆ. ಸಂಪ್ರದಾಯದಂತೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ರೋಹಿತ್ ಶರ್ಮಾಗೆ, ಪತ್ರಕರ್ತರು ಪ್ರಶ್ನೆಗಳ ಸುರಿ ಮಳೆಗೈದರು. ಆದರೆ, ಕೆಲವೊಂದು ಪ್ರಶ್ನೆಗಳು ರೋಹಿತ್ ಶರ್ಮಾ ಅವರಿಗೆ ಇರಸುಮುರಸು ಉಂಟು ಮಾಡಿತು. ಅಂಥವರ ವಿರುದ್ಧ ರೋಹಿತ್ ಅಸಮಾಧಾನ ವ್ಯಕ್ತಪಡಿಸಿದರು.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಬ್ಯಾಟ್ಸ್ಮನ್ ಆಗಿ ಹಾಗೂ ನಾಯಕನಾಗಿ ವೈಫಲ್ಯ ಅನುಭವಿಸಿದ್ದರು. ಟೆಸ್ಟ್ ಸರಣಿಯಲ್ಲಿ ವೈಫಲ್ಯ ಅನುಭವಿಸಿ, ಏಕದಿನ ಸರಣಿಯಲ್ಲಿನ ಸವಾಲನ್ನು ಹೇಗೆ ಸ್ವೀಕರಿಸುತ್ತೀರಿ? ಎಂಬ ಪ್ರಶ್ನೆಯನ್ನು ರೋಹಿತ್ ಶರ್ಮಾಗೆ ಪತ್ರಕರ್ತರೊಬ್ಬರು ಪ್ರಶ್ನೆ ಮಾಡಿದರು. ಇದು ಅವರಿಗೆ ಬೇಸರ ತಂದಿತು.
“ನಮಸ್ಕಾರ ರೋಹಿತ್. ಟೆಸ್ಟ್ ಸ್ವರೂಪದಲ್ಲಿ ನಿಮ್ಮ ಕಡೆಯಿಂದ ರನ್ಗಳು ಮೂಡಿಬಂದಿಲ್ಲವಾದರೂ, ಹಿಟ್ಮ್ಯಾನ್ ಆಗಿ ನೀವು 50 ಓವರ್ಗಳ ಸ್ವರೂಪದಲ್ಲಿ ಬ್ಯಾಟ್ ಮಾಡುವ ವಿಶ್ವಾಸವನ್ನು ಹೊಂದಿದ್ದೀರಾ?” ಎಂದು ಪತ್ರಕರ್ತರೊಬ್ಬರು ಪ್ರಶ್ನೆ ಎಸೆದರು.
ರೋಹಿತ್ ಶರ್ಮಾ: “ನಗುತ್ತಾ ಇದು ಯಾರ ರೀತಿಯ ಪ್ರಶ್ನೆ? ಇದು ವಿಭಿನ್ನ ಸ್ವರೂಪ, ವಿಭಿನ್ನ ಸಮಯ. ವಿಭಿನ್ನ ಪರಿಸ್ಥಿತಿ ಎಂದು ಹೇಳಿದರು.
“ಒಬ್ಬ ಕ್ರಿಕೆಟಿಗನಾಗಿ ತಮ್ಮ ವೃತ್ತಿ ಜೀವದಲ್ಲಿ ಏರಿಳಿತಗಳು ಇದ್ದೇ ಇರುತ್ತವೆ ಎಂಬುದು ನಮಗೆ ಗೊತ್ತಿದೆ. ಇದನ್ನು ನಾನು ಸಾಕಷ್ಟು ಬಾರಿ ಅನುಭವಿಸಿದ್ದೇನೆ. ಪ್ರತಿಯೊಂದು ದಿನವೂ ಹೊಸತು. ಎಲ್ಲ ಸರಣಿಯೂ ವಿನೂತನವಾಗಿರುತ್ತದೆ ಎಂದು ನಮಗೆ ತಿಳಿದಿದೆ. ನಾವು ಹೊಸ ಸವಾಲನ್ನು ಸ್ವೀಕರಿಸಲು ಎದುರು ನೋಡುತ್ತಿದ್ದೇನೆ. ಈ ಹಿಂದೆ ಏನಾಗಿತ್ತು ಎಂಬುದನ್ನು ನೋಡಲು ನಾನು ಹೋಗುವುದಿಲ್ಲ. ಸ್ವಷ್ಟವಾಗಿ ಇದು ಅಗತ್ಯವಿಲ್ಲ,” ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
“ಈ ಹಿಂದಿನದನ್ನು ನೋಡಲು ನನಗೆ ಯಾವುದೇ ಕಾರಣಗಳಿಲ್ಲ. ನಿಮ್ಮ ಮುಂದೆ ಏನು ಬರುತ್ತದೆ ಎಂಬುದರ ಕಡೆ ಗಮನ ಕೊಡುವುದು ಇಲ್ಲಿ ತುಂಬಾ ಮುಖ್ಯವಾಗುತ್ತದೆ. ಈ ಸರಣಿಯಲ್ಲಿ ಅಗ್ರ ದರ್ಜೆಯೊಂದಿಗೆ ಆಡಲು ಎರು ನೋಡುತ್ತಿದ್ದೇನೆ,” ಎಂದು ಟೀಮ್ ಇಂಡಿಯಾ ಕ್ಯಾಪ್ಟನ್ ಹೇಳಿದ್ದಾರೆ.
ಇದು ಸೂಕ್ತ ಸಮಯವಲ್ಲ
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಬಳಿಕ ತಮ್ಮ ವೃತ್ತಿ ನಿರ್ಧಾರದ ಬಗ್ಗೆ ಹೇಳಲು ರೋಹಿತ್ ಶರ್ಮಾ ನಿರಾಕರಿಸಿದರು. ಏಕದಿನ ಸರಣಿ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳು ನಡೆಯಬೇಕಾಗಿವೆ. ಇಂಥಾ ಸಮಯದಲ್ಲಿ ತಮ್ಮ ಭವಿಷ್ಯದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ ರೋಹಿತ್ ಶರ್ಮಾ.
“ಕಳೆದ ಹಲವು ವರ್ಷಗಳಿಂದ ನನ್ನ ಕ್ರಿಕೆಟ್ ಬಗೆಗಿನ ವರದಿಗಳು ಹರಿದಾಡುತ್ತಿವೆ. ಈ ವರದಿಗಳ ಬಗ್ಗೆ ಸ್ಪಷ್ಟಪಡಿಸಲು ನಾನು ಇಲ್ಲಿಗೆ ಬಂದಿಲ್ಲ,” ಎಂದು ರೋಹಿತ್ ಶರ್ಮಾ ಖಾರವಾಗಿ ಸುದ್ದಿಗಾರರಿಗೆ ಉತ್ತರ ನೀಡಿದರು.