ಬೆಂಗಳೂರು: ವೃದ್ಧೆಯ ಬಳಿ ಅಡ್ರೆಸ್ ಕೇಳುವ ನೆಪದಲ್ಲಿ ಖದೀಮರು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ನಗರದ ಹೊರವಲಯದ ಆನೇಕಲ್ ಬಳಿಯ ಕೆಂಪುವಡೇರಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಾವಿತ್ರಮ್ಮ ಎಂಬ ಮಹಿಳೆ ತೋಟದಲ್ಲಿ ಕೆಲಸ ಮುಗಿಸಿ ಬರುತ್ತಿದ್ದರು. ಈ ವೇಳೆ ಟಿವಿಎಸ್ ಎಕ್ಸೆಲ್ ಬೈಕ್ ನಲ್ಲಿ ಬಂದ ದಂಪತಿಗಳಿಬ್ಬರೂ ಅಡ್ರೆಸ್ ಕೇಳಿ ಈ ಭಾಗದಲ್ಲಿ ಕಳ್ಳರ ಹಾವಳಿ ಜಾಸ್ತಿ ಇದೆ. ಚಿನ್ನಾಭರಣ ದೋಚುತ್ತಾರೆ ಎಂದು ಭಯಗೊಳಿಸಿ, ಕೊರಳಿನ ಸರ ಮತ್ತು ಕಿವಿಯಲ್ಲಿದ್ದ ಓಲೆ ಬಿಚ್ಚಿಸಿ, ಪೊಟ್ಟಣದಲ್ಲಿ ಇಟ್ಟಿರುವುದಾಗಿ ಹೇಳಿ ನಂಬಿಸಿದ್ದಾರೆ.

ನಂತರ ಮಹಿಳೆ ಮನೆಗೆ ಬಂದು ಪೊಟ್ಟಣ ತೆರೆದಾಗ ಚಿನ್ನಾಭರಣ ಬದಲು ಪೊಟ್ಟಣದಲ್ಲಿ ಕಲ್ಲುಗಳು ಪತ್ತೆಯಾಗಿರುವುದನ್ನು ಕಂಡು ಶಾಕ್ ಆಗಿದ್ದಾರೆ. ಖತರ್ನಾಕ್ ದಂಪತಿ ಎಸ್ಕೇಪ್ ಆಗುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಎರಡುವರೆ ಲಕ್ಷ ಬೆಲೆ ಬಾಳುವ ಚಿನ್ನಾಭರಣ ಕಳೆದುಕೊಂಡ ಸಾವಿತ್ರಮ್ಮ ಕಂಗಾಲಾಗಿದ್ದು, ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.