ನವ ದೆಹಲಿ : ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಗುರುವಾರ ತಾವು ಆಗಸ್ಟ್ 2027 ರಲ್ಲಿ ನಿವೃತ್ತರಾಗುವುದಾಗಿ ತಿಳಿಸಿದ್ದು, ಅದು “ದೈವೇಚ್ಛೆಗೆ ಒಳಪಟ್ಟಿರುತ್ತದೆ” ಎಂದು ನಗುತ್ತಾ ಹೇಳಿದ್ದಾರೆ.
ಇಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್ಯು)ದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉಪ ರಾಷ್ಟ್ರಪತಿಗಳು ಈ ಹೇಳಿಕೆ ನೀಡಿದ್ದಾರೆ.
“ನಾನು ಸೂಕ್ತ ಸಮಯದಲ್ಲಿ, ಆಗಸ್ಟ್ 2027 ರಲ್ಲಿ ದೈವೇಚ್ಛೆಗೆ ಅನುಗುಣವಾಗಿ ನಿವೃತ್ತಿ ಹೊಂದುತ್ತೇನೆ” ಎಂದು ಜಗದೀಪ್ ಧನಕರ್ ಹೇಳಿದ್ದಾರೆ.
ಭಾರತದ 14ನೇ ಉಪ ರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಅವರ ಐದು ವರ್ಷಗಳ ಅಧಿಕಾರವಧಿ ಆಗಸ್ಟ್ 10, 2027 ರಂದು ಕೊನೆಗೊಳ್ಳಲಿದೆ.
ವೃತ್ತಿಯಲ್ಲಿ ಹಿರಿಯ ವಕೀಲರಾಗಿರುವ ಧನಕರ್ ಅವರು 2022 ರಲ್ಲಿ ಉಪ ರಾಷ್ಟ್ರಪತಿಗಳಾಗಿ ಆಯ್ಕೆಯಾಗುವ ಮೊದಲು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದರು. ಅವರನ್ನು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್ಡಿಎ) ಉಪ ರಾಷ್ಟ್ರಪತಿಗಳಾಗಿ ನಾಮನಿರ್ದೇಶನ ಮಾಡಿತು.