ಭಾರತ-ಪಾಕಿಸ್ತಾನ ನಡುವೆ ಸಮರ ಘೋಷಣೆಯಾಗಿದೆ. ಗಡಿಯಲ್ಲಿ ನಿರಂತರ ಗುಂಡಿನ ದಾಳಿ, ಶೆಲ್ಲಿಂಗ್ ತಾರಕ್ಕೇರಿದೆ. ಇತ್ತ ಮದುವೆಯಾದ ಮೂರೇ ದಿನಕ್ಕೆ ಸೈನಿಕನೋರ್ವ ತನ್ನ ದೇಶ ಸೇವೆಗೆ ಹೊರಟು ನಿಂತಿದ್ದಾನೆ. ಹೌದು, ಮಹಾರಾಷ್ಟ್ರದ ಜಳಗಾಂವ್ನ ಪಾಚೋರಾದ ಯೋಧ ಮನೋಜ್ ಪಾಟೀಲ್ ಮದುವೆ ಇದೇ ಮೇಲೆ 5ರಂದು ಅದ್ದೂರಿಯಾಗಿ ನೆರವೇರಿತ್ತು. ಇತ್ತ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದ್ದರೆ, ಅತ್ತ ಭಾರತ-ಪಾಕ್ ಗಡಿಯಲ್ಲಿ ಆಕ್ರಮಣಕಾರಿ ದಾಳಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮನೋಜ್ ಕುಮಾರ್ಗೆ ತುರ್ತಾಗಿ ಸೇನೆಯಿಂದ ಕರೆ ಬಂದಿದೆ.
ಮಹಾರಾಷ್ಟ್ರದ ಮನೋಜ್ ಪಾಟೀಲ್ ಹಾಗೂ ನಾಚಂಖೇಡೆಯ ರಾಮಚಂದ್ರ ಪಾಟೀಲ್ ಅವರ ಪುತ್ರಿ ಯಾಮಿನಿ ಅವರಿಗೆ ಮೇ.5 ರಂದು ಅದ್ದೂರಿ ಮದುವೆ ನಿಶ್ಚಯವಾಗಿತ್ತು. ಇದರಿಂದಾಗಿ ಮನೋಜ್ ರಜೆ ಹಾಕಿ ಹಳ್ಳಿಗೆ ಬಂದಿದ್ದರು. ಇತ್ತ ಮದುವೆ ಸಂಭ್ರಮದ ನಡುವೆಯೇ ಯೋಧ ಮನೋಜ್ ಪಾಟೀಲ್ ಅವರಿಗೆ ಸೇನೆಯಿಂದ ಕರೆ ಬಂದಿತ್ತು. ತುರ್ತಾಗಿ ಸೇನೆಯಲ್ಲಿ ಸೇರಿಕೊಳ್ಳುವಂತೆ ಸೂಚಿಸಲಾಗಿತ್ತು. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಯುದ್ಧದ ಆತಂಕ ಶುರುವಾಯಿತು. ಇತ್ತ ಮದುವೆಯಾದ ಮೂರನೇ ದಿನ ಮಗನನ್ನು ಸೇನೆಗೆ ಕಳುಹಿಸಬೇಕಲ್ಲಾ ಎಂದು ಪೋಷಕರು ಚಿಂತಿತರಾಗಿದ್ದರೆ, ಪತಿಯೊಂದಿಗೆ ಜೀವನದ ಸುಂದರ ಕನಸು ಕಂಡಿದ್ದ ಪತ್ನಿ ಯಾಮಿನಿ ಕಣ್ಣೀರಿಡುತ್ತಾ ಮೌನಕ್ಕೆ ಜಾರಿದ್ದರು. ಈ ವೇಳೆ ಮನೋಜ್ ಪಾಟೀಲ್ ಏನು ಮಾಡಲಾಗದೇ ಸೇನೆಗೆ ಹೊರಟು ನಿಂತ್ರೆ, ಯೋಧನ ಕೈ ಹಿಡಿದ ಸಂಗಾತಿ ಆತನಿಗೆ ಧೈರ್ಯ ತುಂಬುತ್ತಾ ನನಗೆ ದೇಶ ಸೇವೆ ಮುಖ್ಯ. ನನ್ನ ಕುಂಕುಮವನ್ನು ಗಡಿಗೆ ಕಳಿಸುತ್ತಿರುವುದು ನನಗೆ ಹೆಮ್ಮೆ ಇದೆ ಎಂದು ಕಣ್ಣೀರು ಹಾಕಿದ್ದಾರೆ.