ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಂದು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಹೀಗಾಗಿ ಈಗ ಆರೋಪಿಗಳಿಗೆ ಢವ ಢವ ಶುರುವಾಗಿದೆ.
ಈ ಕೊಲೆ ಪ್ರಕರಣದಲ್ಲಿ 17 ಜನ ಆರೋಪಿಗಳಿದ್ದಾರೆ. ಈ ಕೊಲೆ ನಡೆದ ನಂತರ ಆರೋಪಿಗಳು ತಪ್ಪಿಸಿಕೊಳ್ಳಲು ಹಲವಾರು ತಂತ್ರ ಹೆಣೆದರೂ ಪೊಲೀಸರ ಅತಿಥಿಯಾಗಿದ್ದಾರೆ. ಚಾರ್ಜ್ ಶೀಟ್ ನಲ್ಲಿ ಆರೋಪಿಗಳ ಕೃತ್ಯವನ್ನು ಎಳೆ ಎಳೆಯಾಗಿ ಹೇಳಲಾಗಿದೆ. ಈ ಪೈಕಿ ಯಾವ ಆರೋಪಿಯ ಪಾತ್ರ ಏನು ಎಂಬುವುದನ್ನು ನೋಡೋಣ…
ಪವಿತ್ರಾಗೌಡ: ಕೊಲೆಗೆ ಮೂಲ ಕಾರಣ. ಕೃತ್ಯ ನಡೆದ ಸಮಯದಲ್ಲಿ ಅಲ್ಲೇ ಇದ್ದರು ಎನ್ನುವುದಕ್ಕೆ ಸಾಕ್ಷಿ ಇದೆ. ಸಿಸಿಟಿವಿಯಲ್ಲಿ ಪವಿತ್ರಗೌಡ ಸೆರೆಯಾಗಿದ್ದಾರೆ. ಪವಿತ್ರ ಗೌಡ ಮೊಬೈಲ್ ಕೃತ್ಯದ ಸ್ಥಳದಲ್ಲಿ ಆಕ್ಟಿವ್ ಆಗಿರುವುದು ಪತ್ತೆಯಾಗಿದೆ.
ದರ್ಶನ್ : ಕಿಡ್ನಾಪ್ ಮಾಡಿಸಿದ್ದು , ಹಲ್ಲೆ ಮಾಡಿದ್ದು, ಕೊಲೆ ನಂತರ ಮುಚ್ಚಿಹಾಕಲು ಹಣ ನೀಡಿದ್ದು ದರ್ಶನ್ ಮೇಲಿರುವ ಆರೋಪ. ಕೊಲೆ ನಡೆದ ಸ್ಥಳದಲ್ಲಿ, ಹಲ್ಲೆ ಮಾಡಿರುವುದು ಪತ್ತೆಯಾಗಿದೆ. ಸಿಸಿಟಿವಿಯಲ್ಲಿ ದರ್ಶನ್ ಸೆರೆಯಾಗಿದ್ದಾರೆ. ದರ್ಶನ್ ಬಟ್ಟೆ ಮತ್ತು ಶೂನಲ್ಲಿ ರೇಣುಕಾ ಸ್ವಾಮಿ ರಕ್ತ ಇರುವುದು ಪತ್ತೆಯಾಗಿದೆ.
ಪವನ್: ಪವಿತ್ರ ಜೊತೆಗೆ ಇದ್ದರು ಎನ್ನಲಾಗಿದೆ. ರೇಣುಕಾಸ್ವಾಮಿಯನ್ನು ಅಪಹರಿಸುವಾಗ ರಾಘವೇಂದ್ರ ಜೊತೆಗೆ ಸಂಪರ್ಕದಲ್ಲಿ ಇದ್ದ. ಬೇರೊಂದು ಇನ್ಸ್ಟಾಗ್ರಾಮ್ ಅಕೌಂಟ್ ಮಾಡಿ ರೇಣುಕಾಸ್ವಾಮಿ ಜೊತೆಗೆ ಚಾಟ್ ಮಾಡಿ ಕಿಡ್ನಾಪ್ ಮಾಡುವಂತೆ ಸೂಚಿಸಿರುವ ಆರೋಪ ಇದೆ.
ರಾಘವೇಂದ್ರ: ಈತ ಚಿತ್ರದುರ್ಗ ದರ್ಶನ್ ಅಭಿಮಾನಿಗಳ ಸಂಘದ ಅದ್ಯಕ್ಷ. ರೇಣುಕಾಸ್ವಾಮಿ ಅಪಹರಣದಲ್ಲಿ ಪ್ರಮುಖ ಪಾತ್ರ. ಕೊಲೆಯಾದ ಸ್ಥಳದಲ್ಲಿ ಇದ್ದ. ಕೊಲೆಯಾದ ನಂತರ ರೇಣುಕಾಸ್ವಾಮಿ ಮೈ ಮೇಲಿದ್ದ ಆಭರಣ ತೆಗೆದಿದ್ದ.
ನಂದೀಶ: ಹಲ್ಲೆ ನಡೆಯುವಾಗ ಜೊತೆಗೆ ಇದ್ದ. ತೀವ್ರವಾಗಿ ಹಲ್ಲೆ ಮಾಡಿದವನು. ರೇಣುಕಾಸ್ವಾಮಿ ಬಳಸಿದ್ದ ಬಟ್ಟೆಯಲ್ಲಿ ರಕ್ತವಿದೆ. ಕೊಲೆ ನಂತರ ವಾಹನದಲ್ಲಿ ಮೃತ ದೇಹ ಇಟ್ಟಿದ್ದು, ದೇಹ ಹೊತ್ತುಕೊಂಡು ಬಂದಿದ್ದ ದೃಶ್ಯ ಪತ್ತೆಯಾಗಿದೆ.
ಜಗದೀಶ್ ಅಲಿಯಾಸ್ ಜಗ್ಗ: ಅಪಹರಿಸಿಕೊಂಡು ಬಂದಿದ್ದ ಗ್ಯಾಂಗ್ ನಲ್ಲಿದ್ದವ. ಕೊಲೆಯಾದ ನಂತರ ಪರಾರಿಯಾಗಿದ್ದ. ರೇಣುಕಾಸ್ವಾಮಿಯನ್ನು ಅಪಹರಿಸುವಾಗ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅನುಕುಮಾರ್ ಅಲಿಯಾಸ್ ಅನು: ಅಪಹರಿಸಿದ್ದ ತಂಡದಲ್ಲಿದ್ದವ. ಈತ ಕೂಡ ಕೊಲೆಯಾದ ನಂತರ ಅಲ್ಲಿಂದ ಪರಾರಿಯಾಗಿದ್ದ. ಅಪಹರಣ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರವಿ ಅಲಿಯಾಸ್ ರವಿಶಂಕರ್: ಈತ ಕಾರು ಚಾಲಕ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದಿದ್ದ. ಕೊಲೆಯ ನಂತರ ಇನ್ನುಳಿದ ಆರೋಪಿಗಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.
ರಾಜು ಅಲಿಯಾಸ್ ಧನರಾಜ್: ದರ್ಶನ್ ನಿವಾಸದಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ. ಈತನೇ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಿದ್ದು, ನಂತರ ಮೃತ ದೇಹ ಸಾಗಿಸಿರುವ ಕುರಿತು ಆರೋಪ.
ವಿನಯ್: ದರ್ಶನ್ ಆಪ್ತ. ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಮಾಲಿಕ. ಮನಸ್ಸಿಗೆ ಬಂದಂತೆ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿರುವ ವ್ಯಕ್ತಿ. ಲಾಠಿ ಬೀಸಿ ಬೀಸಿ ಹೊಡೆದಿದ್ದಾನೆ. ಕೊಲೆಯಾಗುವುದಕ್ಕೂ ಮೊದಲಿನಿಂದ ದರ್ಶನ್ ಜೊತೆಗೆ ಇದ್ದ.
ನಾಗರಾಜು ಅಲಿಯಾಸ್ ನಾಗ: ದರ್ಶನ್ ನ ಮ್ಯಾನೇಜರ್. ದರ್ಶನ್ ನ ಎಲ್ಲ ಪಾರ್ಟಿಗಳಲ್ಲಿ ಇರುತ್ತಿದ್ದ. ಹಲ್ಲೆ ಮಾಡುವಾಗ ಜೊತೆಗೆ ಇದ್ದು ಹಲ್ಲೆ ಮಾಡಿ ಕಾಲಿನಿಂದಲೂ ಒದ್ದಿದ್ದ. ಬೇರೆಯವರಿಗೆ ಶರಣಾಗುವಂತೆ ವ್ಯವಸ್ಥೆ ಮಾಡುವಲ್ಲಿಯೂ ಈತನ ಪಾತ್ರ ಇದೆ.
ಲಕ್ಷ್ಮಣ್: ದರ್ಶನ್ ಕಾರು ಚಾಲಕ. ಕೊಲೆ ಮಾಡುವಾಗ ಸ್ಥಳದಲ್ಲಿ ಇದ್ದು ಹಲ್ಲೆ ಮಾಡಿದ್ದು, ಮೃತ ದೇಹವನ್ನು ಎಸೆಯಲು ಬೇಕಾದ ವ್ಯವಸ್ಥೆ ಮಾಡಿದ್ದ. ಕೊಲೆಯಾದ ನಂತರ ಎ2 ಪರಾರಿಯಾಗಲು ಸಹಾಯ ಸಹ ಮಾಡಿದ್ದಾನೆ.
ದೀಪಕ್: ದರ್ಶನ್ ನ ಆಪ್ತ. ಈತನೂ ಹಲ್ಲೆ ಮಾಡಿದ್ದಾನೆ. ಪ್ರದೋಶ್ ಹೇಳಿದಂತೆ ಹಣವನ್ನು ನಿಕಿಲ್, ಕೇಶವಮೂರ್ತಿ, ಕಾರ್ತಿಕ್ ಗೆ ತಲಾ ಐದು ಲಕ್ಷ ಹಣ ನೀಡಿದ್ದ. ಕೊಲೆ ನಡೆದ ಶೆಡ್ ಸ್ಥಳದ ಜವಾಬ್ದಾರಿ ಹೊಂದಿದ್ದ.
ಪ್ರದೂಶ್: ದರ್ಶನ್ ಜೊತೆಗಿದ್ದವ. ಹಲ್ಲೆ ಮಾಡಿದವ. ದರ್ಶನ್ ಜೊತೆಗೆ ವ್ಯವಹಾರ, ಕೊಲೆ ಮಾಡಿದ್ದವರ ಖರ್ಚಿಗಾಗಿ ಮೂವತ್ತು ಲಕ್ಷ ಹಣ ತಂದಿದ್ದ. ಮೂವರನ್ನು ಸರಂಡರ್ ಮಾಡಿಸಿದ್ದ.
ಕಾರ್ತಿಕ್ ಅಲಿಯಾಸ್ ಕಪ್ಪೆ, ಕೇಶವಮೂರ್ತಿ, ನಿಕಿಲ್ ಹಣ ಪಡೆದು ಪೊಲೀಸರ ಮುಂದೆ ಶರಣಾದವರು. ಸದ್ಯ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ತನಿಖೆ ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ಕಾಯ್ದು ನೋಡಬೇಕಿದೆ.