ಮುಂಬೈ : ಪಶ್ಚಿಮ ಏಷ್ಯಾ ಯುದ್ಧ, ಜಾಗತಿಕ ಆರ್ಥಿಕ ಅಸ್ಥಿರತೆಯ ನಡುವೆಯೇ ಭಾರತೀಯ ರಿಸರ್ವ್ ಬ್ಯಾಂಕ್ (RBI) ಇಂದು ತನ್ನ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ್ದು, ಎಚ್ಚರಿಕೆಯ ಹೆಜ್ಜೆಯಿಟ್ಟಿರುವುದು ಸಾಬೀತಾಗಿದೆ.
ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದ ಹಣಕಾಸು ನೀತಿ ಪರಾಮರ್ಶೆ ಸಮಿತಿಯು (MPC) ರೆಪೋ ದರವನ್ನು ಯಥಾಸ್ಥಿತಿಯಲ್ಲಿ( ಶೇ.5.25) ಮುಂದುವರಿಸಲು ಸರ್ವಾನುಮತದ ನಿರ್ಧಾರ ಕೈಗೊಂಡಿದೆ. ಡಿಸೆಂಬರ್ 2025ರಿಂದ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದಿರುವುದು ‘ಕಾದು ನೋಡುವ’ ತಂತ್ರವನ್ನು ಅನುಸರಿಸಿರುವುದನ್ನು ಸೂಚಿಸುತ್ತದೆ.
ಹಣದುಬ್ಬರದ ಆತಂಕ
ಪಶ್ಚಿಮ ಏಷ್ಯಾ ಸಂಘರ್ಷವು ಜಾಗತಿಕವಾಗಿ ಇಂಧನ ಬೆಲೆಗಳ ಏರಿಕೆಗೆ ಕಾರಣವಾಗಬಹುದು ಎಂಬ ಆತಂಕವನ್ನು ಆರ್ಬಿಐ ವ್ಯಕ್ತಪಡಿಸಿದೆ. ಪ್ರಸ್ತುತ ದೇಶದಲ್ಲಿ ಹಣದುಬ್ಬರವು ನಿಯಂತ್ರಣದಲ್ಲಿದ್ದರೂ, ಯುದ್ಧದಿಂದಾಗಿ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ ಉಂಟಾದರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. “ಜಾಗತಿಕ ರಾಜಕೀಯ ಅಸ್ಥಿರತೆಯು ಆರ್ಥಿಕತೆಯ ಮೇಲೆ ಒತ್ತಡ ಹೇರುತ್ತಿದೆ. ಹೀಗಾಗಿ ಬಡ್ಡಿದರವನ್ನು ಸದ್ಯಕ್ಕೆ ಬದಲಿಸದಿರಲು ತೀರ್ಮಾನಿಸಲಾಗಿದೆ,” ಎಂದು ಗವರ್ನರ್ ಮಲ್ಹೋತ್ರಾ ತಿಳಿಸಿದ್ದಾರೆ.
ದೇಶದ ಆರ್ಥಿಕ ಬೆಳವಣಿಗೆಯ ವೇಗವು ಉತ್ತಮವಾಗಿದೆ ಎಂದು ಆರ್ಬಿಐ ಅಭಿಪ್ರಾಯಪಟ್ಟಿದೆ. ಬಳಕೆ ಮತ್ತು ಹೂಡಿಕೆಯ ಪ್ರಮಾಣ ಹೆಚ್ಚಿರುವುದು ಆರ್ಥಿಕತೆಗೆ ಬಲ ನೀಡಿದೆ. ಆರ್ಬಿಐ ತನ್ನ ನೀತಿಯಲ್ಲಿ ‘ತಟಸ್ಥ’ ನಿಲುವನ್ನು ಮುಂದುವರಿಸಿದ್ದು, ಅಗತ್ಯ ಬಿದ್ದಾಗ ಕ್ರಮ ಕೈಗೊಳ್ಳಲು ಸನ್ನದ್ಧವಾಗಿದೆ. ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (MSF) ದರವು ಶೇ. 5.5 ಮತ್ತು ಬ್ಯಾಂಕ್ ದರವು ಶೇ. 5.5 ರಲ್ಲೇ ಮುಂದುವರಿಯಲಿದೆ ಎಂದೂ ಮಲ್ಹೋತ್ರಾ ತಿಳಿಸಿದ್ದಾರೆ.
ಭಾರತದ ಆರ್ಥಿಕ ಸ್ಥಿತಿಸ್ಥಾಪಕತ್ವ
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಆಮದು ವೆಚ್ಚ ಹೆಚ್ಚಳದಂತಹ ಸವಾಲುಗಳಿದ್ದರೂ, ಭಾರತದ ಆರ್ಥಿಕ ಅಡಿಪಾಯ ಭದ್ರವಾಗಿದೆ ಎಂದು ಗವರ್ನರ್ ಹೇಳಿದ್ದಾರೆ. ಹಿಂದಿನ ಬಿಕ್ಕಟ್ಟುಗಳಿಗೆ ಹೋಲಿಸಿದರೆ ಭಾರತ ಇಂದು ಯಾವುದೇ ಆಘಾತಗಳನ್ನು ಎದುರಿಸಲು ಹೆಚ್ಚು ಶಕ್ತವಾಗಿದೆ. ಆದರೆ, ಪಶ್ಚಿಮ ಏಷ್ಯಾದ ಸಂಘರ್ಷವು ದೀರ್ಘಕಾಲ ಮುಂದುವರಿದರೆ ಅದು ದೇಶದ ಆರ್ಥಿಕ ಪ್ರಗತಿಯ ಮೇಲೆ ಪರಿಣಾಮ ಬೀರಬಹುದು ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.
ಇದನ್ನೂ ಓದಿ : ಕದನ ವಿರಾಮ ಘೋಷಣೆ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ಭಾರೀ ಕುಸಿತ!


















