ಲಕ್ನೋ: ರಾಮನವಮಿ (Ram Navami) ಇರುವ ಹಿನ್ನೆಲೆಯಲ್ಲಿ ಅಯೋಧ್ಯೆ ಶ್ರೀರಾಮ ಮಂದಿರಕ್ಕೆ (Ram Mandir) ಸಾಗರೋಪಾದಿಯಲ್ಲಿ ಭಕ್ತರು ಬರುತ್ತಿದ್ದಾರೆ.
ರಾಮನವಮಿಯಾಗಿರುವ ಭಾನುವಾರ ಸುಮಾರು 50 ಲಕ್ಷಕ್ಕೂ ಅಧಿಕ ಭಕ್ತರು ಬಾಲರಾಮನ ದರ್ಶನ ಮಾಡುವ ಸಾಧ್ಯತೆ ಇದೆ. ಅಯೋಧ್ಯೆಯಲ್ಲಿ (Ayodhya) ಜನದಟ್ಟಣೆ ಇರುವ ಹಿನ್ನೆಲೆಯಲ್ಲಿ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಕುಂಭಮೇಳದ ಮಾದರಿಯಲ್ಲಿ ಭದ್ರತೆ, ಡ್ರೋನ್ ಕಣ್ಗಾವಲು ಕಲ್ಪಿಸಲಾಗಿದೆ. ರಾಮನವಮಿ ಹಿನ್ನೆಲೆ ಪ್ರಭು ಶ್ರೀರಾಮನಿಗೆ ವಿಶೇಷ ಪೂಜೆ ನಡೆಯಲಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ಪಾಸ್ ಗಳನ್ನು ರದ್ದುಗೊಳಿಸಲಾಗಿದೆ. ದೇವಸ್ಥಾನ, ಸರಯೂ ನದಿ ಸೇರಿ ಎಲ್ಲ ಕಡೆ ಎನ್ಡಿಆರ್ಎಫ್, ಎಸ್ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದೆ.
ಬಾಲರಾಮನ ವಿಗ್ರಹದ ಹಣೆ ಮೇಲೆ ಸೂರ್ಯ ರಶ್ಮಿ ಬೀಳಲಿದ್ದು, ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ.