ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ದೆಹಲಿ ವಿಶ್ವವಿದ್ಯಾಲಯಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದ್ದು, ವಿವಿಯ ಉತ್ತರ ಕ್ಯಾಂಪಸ್ನಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ವಿದ್ಯಾರ್ಥಿಗಳೊಂದಿಗೆ ಪ್ರಾತಿನಿಧ್ಯ, ಸಮಾನತೆ ಮತ್ತು ಶೈಕ್ಷಣಿಕ ನ್ಯಾಯದ ವಿಷಯಗಳ ಕುರಿತು ಸಂವಾದ ನಡೆಸಿದ್ದಾರೆ. ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ (ಡಿಯುಎಸ್ಯು) ಅಧ್ಯಕ್ಷರ ಕಚೇರಿಯಲ್ಲೇ ಈ ಸಂವಾದ ನಡೆದಿದೆ. ಆದರೆ, ರಾಹುಲ್ ಅವರ ದಿಢೀರ್ ಭೇಟಿಯನ್ನು ದೆಹಲಿ ವಿಶ್ವವಿದ್ಯಾಲಯವು ಖಂಡಿಸಿದ್ದು, ಇದನ್ನು ಸಂಸ್ಥೆಯ ನಿಯಮಗಳ ಉಲ್ಲಂಘನೆ ಮತ್ತು ವಿದ್ಯಾರ್ಥಿ ಆಡಳಿತದ ಕಾರ್ಯನಿರ್ವಹಣೆಗೆ ಮಾಡಿರುವ ಅಡ್ಡಿ ಎಂದು ಕರೆದಿದೆ.
ವಿಶ್ವವಿದ್ಯಾಲಯದ ಪ್ರಾಕ್ಟರ್ ಕಚೇರಿಯು ಈ ಭೇಟಿಯನ್ನು ಖಂಡಿಸಿದೆ. ಯಾವುದೇ ಪೂರ್ವ ಸೂಚನೆಯಿಲ್ಲದೆ ರಾಹುಲ್ ಗಾಂಧಿ ವಿವಿ ಪ್ರವೇಶಿಸಿದ್ದು ಇದು ಎರಡನೇ ಬಾರಿ ಎಂದು ಹೇಳಿದೆ. “ರಾಹುಲ್ ಗಾಂಧಿ ಇಂದು ದೆಹಲಿ ವಿಶ್ವವಿದ್ಯಾಲಯಕ್ಕೆ ಯಾವುದೇ ಮಾಹಿತಿ ಇಲ್ಲದೆ ಬಂದಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಅವರು ಡಿಯುಎಸ್ಯು ಕಚೇರಿಯಲ್ಲಿ ಇದ್ದರು. ಈ ಸಂದರ್ಭದಲ್ಲಿ ಅವರ ಭದ್ರತಾ ಸಿಬ್ಬಂದಿ ಇಡೀ ಪ್ರದೇಶವನ್ನು ಸುತ್ತುವರಿದಿದ್ದರು. ಈ ಕ್ರಮವು ವಿದ್ಯಾರ್ಥಿ ಸಂಘದ ಕಾರ್ಯನಿರ್ವಹಣೆಗೆ ಅಡ್ಡಿಯಾಯಿತು” ಎಂದು ಪ್ರಾಕ್ಟರ್ ಕಚೇರಿಯ ಅಧಿಕೃತ ಹೇಳಿಕೆ ತಿಳಿಸಿದೆ.
ರಾಹುಲ್ ಭೇಟಿ ನೀಡಿದ್ದ ಸಂದರ್ಭದಲ್ಲಿ, ಡಿಯುಎಸ್ಯು ಕಾರ್ಯದರ್ಶಿ ಮಿತ್ರವಿಂದ ಕರನ್ವಾಲ್ ಅವರಿಗೆ ತಮ್ಮ ಕಚೇರಿಗೆ ಪ್ರವೇಶವನ್ನು ತಡೆಯಲಾಯಿತು ಎಂದು ಆರೋಪಿಸಲಾಗಿದೆ. ಇದಲ್ಲದೆ, ಕೆಲವು ವಿದ್ಯಾರ್ಥಿಗಳನ್ನು ಕಾಂಗ್ರೆಸ್ನ ವಿದ್ಯಾರ್ಥಿ ಘಟಕವಾದ ಎನ್ಎಸ್ಯುಐ ಸದಸ್ಯರು ಕೊಠಡಿಯೊಳಗೇ ಇರುವಂತೆ ಸೂಚಿಸಿದ್ದರು. ಹೊರಬರಲೂ ಅವಕಾಶ ನೀಡದೇ ಅವರೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ವಿಶ್ವವಿದ್ಯಾಲಯ ಹೇಳಿಕೆಯಲ್ಲಿ ಆರೋಪಿಸಿದೆ. ಈ ಘಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುವುದಾಗಿ ವಿಶ್ವವಿದ್ಯಾಲಯ ಎಚ್ಚರಿಕೆ ನೀಡಿದೆ.
ಆದರೆ, ಎನ್ಎಸ್ಯುಐ ಸಂಘಟನೆಗೆ ಸಂಯೋಜಿತವಾಗಿರುವ ಡಿಯುಎಸ್ಯು ಅಧ್ಯಕ್ಷ ರೋನಕ್ ಖತ್ರಿ ಅವರು ಮಾತನಾಡಿ ರಾಹುಲ್ ಗಾಂಧಿಯವರ ಈ ಭೇಟಿಯನ್ನು ಶಾಂತಿಯುತವಾಗಿ ನಡೆಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. “ಡಿಯುಎಸ್ಯು ಅಧ್ಯಕ್ಷರಾಗಿ, ನನಗೆ ಯಾವುದೇ ಅತಿಥಿಯನ್ನು ಆಹ್ವಾನಿಸಲು ಅನುಮತಿಯ ಅಗತ್ಯವಿಲ್ಲ. ಆರೋಪವೆಲ್ಲ ರಾಜಕೀಯ ಪ್ರೇರಿತವಾಗಿದೆ,” ಎಂದು ಅವರು ಹೇಳಿದ್ದಾರೆ.
ರಾಹುಲ್ ಭೇಟಿಯು ಈಗ ರಾಜಕೀಯ ವಿವಾದಕ್ಕೂ ಕಾರಣವಾಗಿದೆ. ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ರಾಹುಲ್ ಗಾಂಧಿ ಅವರ ಭೇಟಿಯನ್ನು “ಫೋಟೊ ಆಪ್” ಎಂದು ಕರೆದಿದ್ದಾರೆ. ಅವರ ದಿಢೀರ್ ಭೇಟಿಯಿಂದ ಕ್ಯಾಂಪಸ್ನಲ್ಲಿ ಗೊಂದಲ ಉಂಟಾಯಿತು ಎಂದು ಟೀಕಿಸಿದ್ದಾರೆ. ಅಲ್ಲದೇ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋವೊಂದರಲ್ಲಿ, ಒಬ್ಬ ಮಹಿಳೆಯು, ಪಹಲ್ಗಾಮ್ ದಾಳಿಯ ಕುರಿತು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗಳ ಬಗ್ಗೆ ಪ್ರಶ್ನಿಸುತ್ತಿರುವ ದೃಶ್ಯವಿದೆ. “ರಾಷ್ಟ್ರವು ನಮ್ಮ ಯೋಧರ ಬೆನ್ನಿಗೆ ನಿಂತಿದೆ,” ಎಂದೂ ಮಾಳವೀಯ ಬರೆದಿದ್ದಾರೆ.
ಇದೇ ವೇಳೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸಹ ಈ ಭೇಟಿಯನ್ನು ಖಂಡಿಸಿದ್ದು, ರಾಹುಲ್ ಗಾಂಧಿ ಕೇವಲ ಎನ್ಎಸ್ಯುಐ ಸದಸ್ಯರೊಂದಿಗೆ ಮಾತನಾಡಿದ್ದಾರೆ ಎಂದು ಆರೋಪಿಸಿದೆ. “ಇದು ಕಾಂಗ್ರೆಸ್ನ ಮಹಿಳಾ ಸಬಲೀಕರಣ, ಯುವ ಒಡನಾಟ ಮತ್ತು ಪ್ರಜಾಪ್ರಭುತ್ವದ ಆಲೋಚನೆಯೇ?” ಎಂದು ಎಬಿವಿಪಿ ಪ್ರಶ್ನಿಸಿದೆ.
ಕಳೆದ ವಾರ ಬಿಹಾರದ ದರ್ಭಾಂಗಾದ ಅಂಬೇಡ್ಕರ್ ಹಾಸ್ಟೆಲ್ಗೆ ರಾಹುಲ್ ಗಾಂಧಿ ಅನಧಿಕೃತ ಭೇಟಿ ನೀಡಿದ್ದಕ್ಕಾಗಿ ಅವರ ವಿರುದ್ಧ ಎರಡು ಎಫ್ಐಆರ್ಗಳು ದಾಖಲಾಗಿದ್ದವು. ತಮ್ಮ ‘ಶಿಕ್ಷಣ ನ್ಯಾಯ ಸಂವಾದ’ ಕಾರ್ಯಕ್ರಮದ ಭಾಗವಾಗಿ ರಾಹುಲ್ ಗಾಂಧಿಯವರು ಬೇರೆ ಬೇರೆ ವಿವಿಗಳಿಗೆ ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ.
ದೆಹಲಿ ವಿಶ್ವವಿದ್ಯಾಲಯವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.