ನವದೆಹಲಿ: ಅದು ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಆಪರೇಷನ್ ಸಿಂದೂರ(Operation Sindoor) ಕಾರ್ಯಾಚರಣೆಯ ಮೂಲಕ ಪಾಕ್ ಉಗ್ರರ ನೆಲೆಗಳನ್ನು ಉಡಾಯಿಸಿದ ಸಮಯ. ಪಾಕ್ ಮತ್ತು ಪಿಒಕೆಯಲ್ಲಿ ಕಾರ್ಯಾಚರಣೆಯ ಬಳಿಕ ಎರಡೂ ದೇಶಗಳ ನಡುವೆ ಯುದ್ಧದ ಕಾರ್ಮೋಡ ಆವರಿಸಿತ್ತು. ಭಾರತ-ಪಾಕಿಸ್ತಾನದ ಗಡಿಯ ಸಮೀಪದ ಪಂಜಾಬ್ನ ತಾರಾ ವಾಲಿ ಗ್ರಾಮದ ಬಳಿ ಯೋಧರ ಸಮೂಹವೇ ಜಮಾಯಿಸಿತ್ತು. ಅಲ್ಲಿನ ಹೊಲಗಳ ಮಣ್ಣಿನಲ್ಲಿ ಯೋಧರ ಬೂಟುಗಳ ಅಚ್ಚು ಕಾಣಿಸುತ್ತಿತ್ತು. ಬಂದೂಕು ಹಿಡಿಡ ಕೈಗಳು ದೇಶವನ್ನು ಕಾಯಲು ಸಜ್ಜಾಗಿದ್ದವು, ಶತ್ರು ರಾಷ್ಟ್ರದ ದಾಳಿಗೆ ಪ್ರತ್ಯುತ್ತರ ನೀಡಲು ಅವರ ಕಣ್ಣುಗಳು ಕಾಯುತ್ತಿದ್ದವು. ಇಡೀ ಗ್ರಾಮದಲ್ಲಿ ಭಯ, ಆತಂಕ ಆವರಿಸಿತ್ತು.

ಯುದ್ಧೋನ್ಮಾದ ಉನ್ಮತ್ತ ಸ್ಥಿತಿಗೇರಿದ್ದ ಈ ಹೊತ್ತಲ್ಲಿ ಎಲ್ಲರನ್ನೂ ಬೆರಗುಗೊಳಿಸಿದ್ದ 10 ವರ್ಷದ ಈ ಬಾಲಕ ಶ್ರವಣ್ ಸಿಂಗ್. ಸಮವಸ್ತ್ರವಿಲ್ಲ, ಶಸ್ತ್ರಾಸ್ತ್ರವಿಲ್ಲ. ಆದರೆ ಧೈರ್ಯಕ್ಕೆ ಮಾತ್ರ ಕಮ್ಮಿಯಿಲ್ಲ. ಬೆಳೆದು ದೊಡ್ಡವನಾದ ಮೇಲೆ ಸೇನೆಗೆ ಸೇರಿ ಯೋಧನಾಗುವ ಕನಸು ಕಾಣುತ್ತಿರುವ ಈ 10ರ ಪೋರ ಶ್ರವಣ್ ಸಿಂಗ್, ಉಳಿದ ಮಕ್ಕಳಂತೆ ಹೆದರಿ ಮನೆಯ ಮೂಲೆ ಸೇರಿಕೊಂಡಿರಲಿಲ್ಲ. ಸ್ಥಳೀಯ ರೈತ ಸೋನಾ ಸಿಂಗ್ ಪುತ್ರನಾದ ಶ್ರವಣ್ ಸಿಂಗ್, ಯಾರಿಗೂ ಹೆದರದೇ ತಮ್ಮ ಹೊಲದಲ್ಲಿ ನೆಲೆ ನಿಂತಿದ್ದ ಯೋಧರಿಗೆ ತನ್ನ ಎರಡು ಪುಟ್ಟ ಕೈಗಳಲ್ಲಿ ನೀರು, ಹಾಲು, ಲಸ್ಸಿ ಮತ್ತು ಐಸ್ ಕ್ರೀಂ ಹೊತ್ತುಕೊಂಡು ಹೋಗಿ ಸರಬರಾಜು ಮಾಡುತ್ತಿದ್ದ. ಆ ಬಿಸಿಲ ಬೇಗೆಯನ್ನೂ ಲೆಕ್ಕಿಸದೇ ಪ್ರತಿ ದಿನ ಬಾಲಕ ಯೋಧರಿಗೆ ತನ್ನಿಂದಾದ ಸಹಾಯ ಮಾಡುತ್ತಾ, ಅವರ ಹಸಿವು, ದಾಹ ತೀರಿಸುತ್ತಿದ್ದ. ನಾನು ನಿಮ್ಮೊಂದಿಗಿದ್ದೇನೆ ಎಂಬ ಸಂದೇಶವನ್ನೂ ಈ ಮೂಲಕ ಸಾರುತ್ತಿದ್ದ.
ಈ ಬಾಲಕನ ಪ್ರಯತ್ನ ಮತ್ತು ಪ್ರೀತಿ ಭಾರತೀಯ ಸೇನೆಯ ಹೃದಯ ಗೆದ್ದಿತ್ತು. ಅದರ ಫಲವೆಂಬಂತೆ, ಈಗ ಸೇನಾಧಿಕಾರಿಗಳು ಬಾಲಕ ಶ್ರವಣ್ ಕುಮಾರ್ ನನ್ನು ಕರೆಸಿ ಸನ್ಮಾನಿಸಿದ್ದಾರೆ.

7ನೇ ಇನ್ಫೆಂಟ್ರಿ ಡಿವಿಷನ್ನ ಜನರಲ್ ಆಫೀಸರ್ ಕಮಾಂಡಿಂಗ್ ಆಗಿರುವ ಮೇಜರ್ ಜನರಲ್ ರಂಜಿತ್ ಸಿಂಗ್ ಮನ್ರಾಲ್ ಅವರು, ಬಾಲಕನನ್ನು ಕರೆಸಿಕೊಂಡು ಸ್ಮರಣಿಕೆ, ವಿಶೇಷ ಔತಣಕೂಟ ಮತ್ತು ಅವನ ಫೇವರಿಟ್ ಐಸ್ ಕ್ರೀಂ ಕೊಟ್ಟು ಸನ್ಮಾನಿಸಿದ್ದಾರೆ.
ಬಳಿಕ ಮಾತನಾಡಿದ ಶ್ರವಣ್, “ಅವರು ನನಗೆ ಐಸ್ ಕ್ರೀಂ ಕೊಡಿಸಿದರು. ನನಗೆ ಬಹಳ ಸಂತೋಷವಾಗಿದೆ. ನಾನೂ ದೊಡ್ಡವನಾಗಿ ಯೋಧನಾಗುತ್ತೇನೆ. ದೇಶಸೇವೆ ಮಾಡುತ್ತೇನೆ” ಎಂದಿದ್ದಾರೆ.