ಬೆಂಗಳೂರು : ಚಾಕುವಿನಿಂದ ಪ್ರಾವಿಜನ್ ಸ್ಟೋರ್ ಮಾಲೀಕನ ಕತ್ತು ಕೊಯ್ದು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದ ಘಟನೆ ಮಂಗಳವಾರ ಹಾಡಹಗಲೇ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕಿತ್ತಗಾನಹಳ್ಳಿಯಲ್ಲಿ ನಡೆದಿದೆ.
ಮಾದೇಶ್ (40) ಕೊಲೆಯಾದ ವ್ಯಕ್ತಿ. ಮಾದೇಶ್, ಪ್ರಾವಿಜನ್ ಸ್ಟೋರ್ ಇಟ್ಟುಕೊಂಡಿದ್ದರು. ಇಂದು ಮನೆಯಲ್ಲಿದ್ದಾಗ ಏಕಾಏಕಿ ದುಷ್ಕರ್ಮಿಗಳು ಏರ್ಗನ್ ಮತ್ತು ಚಾಕು ಸಮೇತ ಮನೆಗೆ ನುಗ್ಗಿ ಹತ್ಯೆಗೈದು ಪರಾರಿ ಆಗಿದ್ದಾರೆ.
ಘಟನಾ ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಕತ್ತು ಕೊಯ್ದು ಕೊಲೆ ಮಾಡಲಾಗಿದೆ ಎಂದು 112ಗೆ ಫೋನ್ ಬಂದಿತ್ತು. ಕೂಡಲೇ ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಹರಿತವಾದ ಆಯುಧದಿಂದ ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಪಕ್ಕದ ಮನೆಯ ನಿವಾಸಿಯೊಬ್ಬರು ಇದನ್ನು ನೋಡಿದ್ದಾರೆ. ಕೂಡಲೇ ಆರೋಪಿಯನ್ನು ಹಿಡಿಯಲು ಮುಂದಾಗಿದ್ದರು. ಈ ವೇಳೆ ಬೈಕ್ ಅಡ್ಡಗಟ್ಟುವಾಗ ಅವರ ಮೇಲೂ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾನೆ ಎಂದಿದ್ದಾರೆ.
ಘಟನಾ ಸ್ಥಳದಲ್ಲಿ ಬ್ಯಾಗ್, ಹೆಲ್ಮೆಟ್ ಸಿಕ್ಕಿದೆ. ಏರ್ ಪಿಸ್ತೂಲ್ ಮತ್ತು ಮೆಟಲ್ ಡಿಟೆಕ್ಟರ್, ಟಾರ್ಚ್ ಕೂಡ ಪತ್ತೆಯಾಗಿದೆ. ತಮಿಳುನಾಡಿನ ಡೆಂಕಣಿಕೋಟೆ ಸಮೀಪದ ಬಾರಂದೂರು ನಿವಾಸಿ ಮಾದೇಶ್, ಸಿಗರೇಟ್ ವ್ಯಾಪಾರ ಮತ್ತು ಪ್ರಾವಿಜನ್ ಸ್ಟೋರ್ ಇಟ್ಟುಕೊಂಡಿದ್ದರು. ಕಳೆದ ಹದಿನೈದು ವರ್ಷಗಳಿಂದ ಕಾಚನಾಯಕನಹಳ್ಳಿಯಲ್ಲಿ ವಾಸವಾಗಿದ್ದರು. ಊರಿನಲ್ಲಿ ಜಮೀನು ಮಾರಾಟ ಮಾಡಿ ಇಲ್ಲಿ ಹೊಸ ಮನೆ ಕಟ್ಟುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ : ಎರಡು ರೈಲುಗಳ ನಡುವೆ ಭೀಕರ ಅಪಘಾತ | ಆರು ಸಾವು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ



















