ಬೆಂಗಳೂರು: ರಾಜ್ಯಕ್ಕೆ ಇನ್ನೂ ಮುಂಗಾರು ಮಳೆ ಪ್ರವೇಶಿಸಿಲ್ಲ. ಆದರೆ, ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಮುಂಗಾರು ಪೂರ್ವ ಮಳೆಯ ಅಬ್ಬರ ಶುರುವಾಗಿದೆ. ಈ ಮಧ್ಯೆ ಮುಂಗಾರು ಮಳೆಯ ಪ್ರವೇಶದ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
6 ವರ್ಷಗಳ ಬಳಿಕ ಅವಧಿ ಪೂರ್ವ ಮುಂಗಾರು ಮಳೆ ರಾಜ್ಯಕ್ಕೆ ಪ್ರವೇಶ ಮಾಡಲಿದೆ. 15 ದಿನ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈಗಾಗಲೇ ಶನಿವಾರ ಕರಾವಳಿ, ಮಲೆನಾಡು, ಒಳನಾಡಿನ ಹಲವೆಡೆ ವರುಣಾರ್ಭಟವಾಗಿದೆ. ಸಾಮಾನ್ಯವಾಗಿ ಜೂನ್ ಒಂದಕ್ಕೆ ಕೇರಳ ಕರಾವಳಿಗೆ ಮುಂಗಾರು ಎಂಟ್ರಿ ಕೊಡುತ್ತಿತ್ತು. ಆನಂತರ ಒಂದು ವಾರದ ಬಳಿಕ ರಾಜ್ಯ ಪ್ರವೇಶಿಸಿತ್ತು.
ಈ ಬಾರಿ ಮುಂಗಾರು ಮಾರುತ ಅಂಡಮಾನ್ ಬಳಿ ಬಂದಾಗ ಪ್ರಬಲ ಆಗಿತ್ತು. ಮೇ ತಿಂಗಳಲ್ಲಿ ಹಲವು ಮೇಲ್ಮೈ ಸುಳಿಗಾಳಿ & ಟ್ರಫ್ ನಂತಹ ವಾತಾವರಣ ಸೃಷ್ಟಿಯಾಗಿತ್ತು. ಹೀಗಾಗಿ ನಿಗದಿತ ಅವಧಿಗಿಂತ ಮೊದಲೇ ಮುಂಗಾರು ಪ್ರವೇಶಿಸುತ್ತಿದೆ. ರಾಜ್ಯದಲ್ಲಿ ಮೇ 27ರ ವರೆಗೂ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪೂರ್ವ ಅರಬ್ಬಿ ಸಮುದ್ರ, ಗೋವಾ ಕರಾವಳಿಯಲ್ಲಿ ವಾಯುಭಾರ ಕುಸಿತವಾಗಿದೆ. ಹೀಗಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಗದಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೆ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ.