ಮೂರು ತಿಂಗಳ ಮಗುವಿನ ಅಪಘಾತ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಬರೋಬ್ಬರಿ 360 ಕಿ.ಮೀ ಸುತ್ತಾಡಿದ ಪೊಲೀಸರು ಆರೋಪಿ ಪತ್ತೆಗೆ ಇಳಿದಿದ್ದರು.
ಬೆಂಗಳೂರು ಟೂ ಕರ್ನೂಲ್ ವರೆಗೂ ಸಿಸಿ ಕ್ಯಾಮರಾಗಳನ್ನು ಪೊಲೀಸರು ಪರಿಶೀಲನೆ ನಡೆಸಿ ಕೊನೆಗೂ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಜೂ. 8ರಂದು ಜಾಲಹಳ್ಳಿಯ ಕುವೆಂಪು ಅಂಡರ್ ಪಾಸ್ ಬಳಿ ಈ ಅಪಘಾತ ಸಂಭವಿಸಿತ್ತು.
ಅಪ್ಪ -ಅಮ್ಮನ ಜೊತೆಗೆ ಬೈಕ್ ನಲ್ಲಿ ಮೂರು ತಿಂಗಳ ಮಗು ಬರುತ್ತಿತ್ತು. ವೇಗವಾಗಿ ಬಂದ ಟ್ರಕ್ ಹಿಂಬದಿಯಿಂದ ಬೈಕ್ ಗೆ ಡಿಕ್ಕಿ ಹೊಡೆದಿತ್ತು. ಆ ವೇಳೆ ತಂದೆ-ತಾಯಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಮಗುವಿನ ತಲೆಗೆ ಬಲವಾದ ಗಾಯಗಳಾಗಿದ್ದವು. ಮಗುವನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿತ್ತು. ಈ ಕುರಿತು ಜಾಲಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗಾಬರಿಯಲ್ಲಿ ಟ್ರಕ್ ನಂಬರ್ ನ್ನು ಪೋಷಕರು ನೋಟ್ ಮಾಡಿಕೊಂಡಿರಲಿಲ್ಲ. ಗ್ರೀನ್ ಟ್ರಕ್ ಅಂತಾ ಮಾತ್ರ ಹೇಳಿದ್ದರು. ಇದೇ ಸಾಕ್ಷ್ಯ ಇಟ್ಟುಕೊಂಡು ಪೊಲೀಸರು ತನಿಖೆಗೆ ಇಳಿದಿದ್ದರು. ಲಾರಿ ಹೋದ ಮಾರ್ಗದಲ್ಲಿನ ಸಿಸಿಟಿವಿ ಪರಿಶೀಲನೆ ಮುಂದಾಗಿದ್ದರು. ಸಾದಹಳ್ಳಿ ಗೇಟ್ ಬಳಿ ಟ್ರಕ್ ಕಲರ್ ಪತ್ತೆಯಾಗಿದ್ದು.
ಆ ವೇಳೆ ಹರಿಯಾಯಣ ರಿಜಿಸ್ಟ್ರೇಷನ್ ಹೊಂದಿರುವ ಟ್ರಕ್ ಎನ್ನುವುದು ಬಯಲಾಗಿದೆ. ಸಾದಹಳ್ಳಿ ಟೋಲ್ ಮೂಲಕ ಮತ್ತೆ ಸಂಚಾರಿ ಪೊಲೀಸರು ಸಿಸಿಟಿವಿ ಪರಿಶೀಲನೆ ಮುಂದಾಗಿದ್ದರು. ಹೈದ್ರಾಬಾದ್ ಮೂಲಕವಾಗಿ ಟ್ರಕ್ ಹೋಗಿರುವುದು ಪತ್ತೆಯಾಗಿತ್ತು. ಒಟ್ಟು ಬೆಂಗಳೂರು ಟೂ ಕರ್ನೂಲು ಸುಮಾರು 100 ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ ಮಾಡಿ ಕೊನೆಗೆ ಕರ್ನೂಲ್ ಸಮೀಪ ರಸ್ತೆ ಬದಿ ನಿಂತಿದ್ದಾಗ ಚಾಲಕ ಹಾಗೂ ಟ್ರಕ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಟ್ರಕ್ ಚಾಲಕ ಇಸ್ಮಾಯಿಲ್ ನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.