ಅಮೃತಸರ: ಆಪರೇಷನ್ ಸಿಂದೂರ ಕಾರ್ಯಾಚರಣೆ, ಭಾರತ-ಪಾಕಿಸ್ತಾನ ಕದನ ವಿರಾಮ ಘೋಷಣೆ, ಡಿಜಿಎಂಒಗಳ ಮಹತ್ವದ ಸಭೆಯ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಬೆಳಗ್ಗೆ ನೇರವಾಗಿ ಪಂಜಾಬ್ನ ಅದಾಂಪುರ ವಾಯುನೆಲೆಗೆ ಭೇಟಿ(PM Modi Visits Adampur) ನೀಡಿದ್ದಾರೆ. ಅಲ್ಲಿ ಅವರಿಗೆ ಸೇನಾಧಿಕಾರಿಗಳು ಭದ್ರತಾ ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದ್ದಾರೆ. ಬಳಿಕ ಮೋದಿ ಅಲ್ಲಿದ್ದ ಯೋಧರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ಕೈಗೊಂಡಿದ್ದ ಆಪರೇಷನ್ ಸಿಂದೂರ ಕಾರ್ಯಾಚರಣೆ ನಂತರ ಮೇ 9 ಮತ್ತು 10ರಂದು ಭಾರತದ ಮೇಲೆ ದಾಳಿ ಮಾಡಿದ್ದ ಪಾಕಿಸ್ತಾನಿ ಸೇನೆಯು ಅದಾಂಪುರ ವಾಯುನೆಲೆಯನ್ನೂ ಟಾರ್ಗೆಟ್ ಮಾಡಿತ್ತು. ಆದರೆ, ಪಾಕ್ನ ಪ್ರಯತ್ನವನ್ನು ಭಾರತದ ಅತ್ಯಾಧುನಿಕ ವೈಮಾನಿಕ ರಕ್ಷಣಾ ವ್ಯವಸ್ಥೆಗಳು ವಿಫಲಗೊಳಿಸಿದ್ದವು. ಪಾಕಿಸ್ತಾನದ ಟಾರ್ಗೆಟ್ ಆಗಿದ್ದ ಭಾರತೀಯ ವಾಯುಪಡೆಗ 4 ನೆಲೆಗಳ ಪೈಕಿ ಇದೂ ಒಂದು.
ಮಂಗಳವಾರ ಮುಂಜಾನೆ ಇದೇ ಅದಾಂಪುರ ವಾಯುನೆಲೆಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಭದ್ರತಾ ಪರಿಸ್ಥಿತಿಯ ಬಗ್ಗೆ ವಿವರಣೆ ಪಡೆದು, ನಮ್ಮ ವೀರ ಯೋಧರ ಕುಶಲೋಪರಿ ವಿಚಾರಿಸಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಸತತ 4 ದಿನಗಳ ಕಾಲ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸದೃಶ ದಾಳಿ-ಪ್ರತಿದಾಳಿ ನಡೆದ ಬಳಿಕ ಮೇ 10ರಂದು ಉಭಯ ದೇಶಗಳು ಕದನ ವಿರಾಮ ಘೋಷಿಸಿಕೊಂಡಿದ್ದವು. ಆದರೆ, ನಾವು ನಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದೇವೆ ಅಷ್ಟೇ. ಆಪರೇಷನ್ ಸಿಂದೂರ ಚಾಲ್ತಿಯಲ್ಲಿದೆ ಎಂಬ ಎಚ್ಚರಿಕೆಯನ್ನೂ ಭಾರತ ಪಾಕ್ಗೆ ನೀಡಿತ್ತು. ಅದರ ಬೆನ್ನಲ್ಲೇ ಸೋಮವಾರ ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿಯವರು ದೇಶವನ್ನು ಉದ್ದೇಶಿಸಿ ಸುಮಾರು ಅರ್ಧ ತಾಸು ಮಾತನಾಡಿದ್ದರು.