ಭುವನೇಶ್ವರ: ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ 74ರ ಹುಟ್ಟು ಹಬ್ಬದ ಸಂಭ್ರಮ. ಈ ವೇಳೆ ಅವರು ಹಲಾವರು ಜನೋಪಯೋಗಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಅಲ್ಲದೇ, ಪ್ರಧಾನಿಗೆ ಇಡೀ ದೇಶವೇ ಶುಭಾಶಯ ಕೋರುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಹಿಳೆಯರಿಗೆ ಆರ್ಥಿಕ ನೆರವು ಒದಗಿಸುವ ಒಡಿಶಾ ಸರ್ಕಾರದ ‘ಸುಭದ್ರಾ’ ಯೋಜನೆಗೆ ಚಾಲನೆ ನೀಡಿದ್ದಾರೆ.
ಈ ಯೋಜನೆ ಮೂಲಕ ಒಡಿಶಾದ ಸುಮಾರು 1 ಕೋಟಿಗೂ ಹೆಚ್ಚು ಮಹಿಳೆಯರಿಗೆ ಆರ್ಥಿಕ ನೆರವು ಸಿಗಲಿದೆ. ಈ ಯೊಜನೆಯಡಿ 21-60 ವರ್ಷ ಮಹಿಳೆಯರು ಐದು ವರ್ಷಗಳಲ್ಲಿ 50 ಸಾವಿರ ರೂ. ಹಣ ಪಡೆಯಲಿದ್ದಾರೆ. ಅಂದರೆ, ಪ್ರತಿ ವರ್ಷ ಫಲಾನುಭವಿಗಳ ಖಾತೆಗೆ ಎರಡು ಕಂತುಗಳಲ್ಲಿ 10 ಸಾವಿರ ರೂ. ಜಮಾ ಆಗಲಿದೆ. ಇದರಿಂದ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು ಎಂಬುವುದು ಸರ್ಕಾರದ ಉದ್ಧೇಶವಾಗಿದೆ.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ 2800 ಕೋಟಿ ರೂ.ಗೂ ಅಧಿಕ ವೆಚ್ಚದ ರೈಲ್ವೆ ಯೋಜನೆಗೆ ಹಾಗೂ 1 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಿದರು. ಇದರೊಂದಿಗೆ 14 ರಾಜ್ಯಗಳ 10 ಲಕ್ಷ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯ ಫಲಾನುಭವಿಗಳಿಗೆ ಮೊದಲ ಕಂತಿನ ಹಣ ಬಿಡುಗಡೆ ಮಾಡಿದರು. ಇನ್ನೂ ಹೆಚ್ಚಿನ ಕುಟುಂಬಗಳಿಗೆ ಪ್ರಯೋಜನಕಾರಿಯಾಗುವಂತೆ ಸರ್ವೆ ನಡೆಸಲು ‘ಆವಾಸ್ + 2024’ ಮೊಬೈಲ್ ಅಪ್ಲಿಕೇಶನ್ ನ್ನು ಅನಾವರಣಗೊಳಿಸಿದರು.