ಹೈದರಾಬಾದ್: ವ್ಯಕ್ತಿಯೊಬ್ಬ ಪ್ರೆಯಸಿಗಾಗಿ ತನ್ನ ಪತ್ನಿ ಹಾಗೂ ಮಕ್ಕಳನ್ನು ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಯತ್ನಿಸಿ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ತೆಲಂಗಾಣದ ಖಮ್ಮಮ್ ಜಿಲ್ಲೆಯಲ್ಲಿ ನಡೆದಿದ್ದು, ಹೈದರಾಬಾದ್ ಮೂಲದ ಫಿಸಿಯೋ ಥೆರಪಿಸ್ಟ್ ಬೋಡಾ ಪ್ರವೀಣ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೇ 28ರಂದು ‘ಅಪಘಾತ’ ನಡೆದಿತ್ತು. ಹೈದರಾಬಾದ್ನಿಂದ ಪತ್ನಿ ಹಾಗೂ ಮಕ್ಕಳ ಸಹಿತ ಬೋಡಾ ಪ್ರವೀಣ್, ಖಮ್ಮಮ್ ಜಿಲ್ಲೆಯಲ್ಲಿನ ತಮ್ಮ ಸ್ವಂತ ಊರಿಗೆ ತೆರಳುತ್ತಿದ್ದ. ರಘುನಾಧಪಾಲೆಂ ಮಂಡಲದ ಮಂಚುಕೊಂಡ ಮತ್ತು ಹರ್ಯಾ ತಾಂಡ ನಡುವೆ ರಸ್ತೆ ಪಕ್ಕದ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ ಎಂದು ಪ್ರವೀಣ್ ತಿಳಿಸಿದ್ದ. ಆತನ ಹೆಂಡತಿ ಬೋಡಾ ಕುಮಾರಿ (26) ಹಾಗೂ 2 ಮತ್ತು 3 ವರ್ಷದ ಇಬ್ಬರು ಹೆಣ್ಣುಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದರು. ಪ್ರವೀಣ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಆದರೆ, ಈ ಪ್ರಕರಣ ಪೊಲೀಸರಿಗೆ ಅನುಮಾನ ಮೂಡಿಸಿತ್ತು. ಕೊಲೆಗಳನ್ನು ಮುಚ್ಚಿಡಲು ಬೋಡಾ ಪ್ರವೀಣ್, ಅಪಘಾತದ ಕಥೆ ಹೆಣೆದಿದ್ದ ಎಂಬುವುದನ್ನು ಪೊಲೀಸರು ಬೇಧಿಸಿದ್ದಾರೆ.
ಈತನಿಗೆ ಅಕ್ರಮ ಸಂಬಂಧವಿತ್ತು. ತಾನು ಕೆಲಸ ಮಾಡುವ ಆಸ್ಪತ್ರೆಯಲ್ಲಿನ ಸಹೋದ್ಯೋಗಿ ಜತೆಗೆ ಆತ ಸಂಬಂಧ ಹೊಂದಿದ್ದ. ಇದು ಪತ್ನಿಗೆ ಗೊತ್ತಾಗಿತ್ತು. ಈ ವಿಚಾರವಾಗಿ ಇಬ್ಬರ ನಡುವೆ ಸಾಕಷ್ಟು ಕಿತ್ತಾಟಗಳು ನಡೆದಿದ್ದವು. ಹೀಗಾಗಿ ಅಕ್ರಮ ಸಂಬಂಧಕ್ಕೆ ಕುಟುಂಬವೇ ಅಡ್ಡಿಯಾಗಿದೆ ಎಂದು ಭಾವಿಸಿದ ಪ್ರವೀಣ್, ಪುಟ್ಟ ಮಕ್ಕಳೆಂಬ ದಯೆಯೂ ಇಲ್ಲದೆ ಮೂವರನ್ನೂ ಕೊಲೆ ಮಾಡಲು ನಿರ್ಧಾರರಿಸಿದ್ದಾನೆ ಎಂದು ಖಮ್ಮಮ್ ಎಎಸ್ಪಿ ರಮಣಮೂರ್ತಿ ಹೇಳಿದ್ದಾರೆ.
ಹೆಂಡತಿಯ ಅನಾರೋಗ್ಯ ಸಮಸ್ಯೆಗೆ ಚಿಕಿತ್ಸೆ ನೀಡುವ ನೆಪದಲ್ಲಿ ಮಾರಣಾಂತಿಕ ಚುಚ್ಚುಮದ್ದನ್ನು ನೀಡಿದ್ದಾನೆ. ಹೀಗಾಗಿ ಅವರು ಕಾರಿನಲ್ಲಿಯೇ ಸಾವನ್ನಪ್ಪಿದ್ದರು. ನಂತರ ಇಬ್ಬರು ಹೆಣ್ಣುಮಕ್ಕಳನ್ನು ಉಸಿರುಗಟ್ಟಿಸಿ ಬರ್ಬರವಾಗಿ ಕೊಲೆ ಮಾಡಿದ್ದ. ಆನಂತರ ವೇಗವಾಗಿ ಕಾರು ಡ್ರೈವ್ ಮಾಡಿ ಅಪಘಾತದ ಸನ್ನಿವೇಶ ಸೃಷ್ಟಿ ಮಾಡಿದ್ದ. ಸದ್ಯ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಸತ್ಯ ಕಕ್ಕಿಸಿದ್ದಾರೆ.