ಬೆಂಗಳೂರು: ಗೃಹ ಸಚಿವ ಡಾ. ಜಿ ಪರಮೇಶ್ವರ (G Parameshwara) ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ (Siddhartha Education Institution) ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಇದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರನ್ಯಾ ರಾವ್ ಖಾತೆಗೆ ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಯಿಂದ ಲಕ್ಷಾಂತರ ರೂಪಾಯಿ ವರ್ಗಾವಣೆಯಾಗಿದೆ ಎಂಬ ಆರೋಪದ ಮೇಲೆ ಇಡಿ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ನಟಿ ರನ್ಯಾ ರಾವ್ಗೆ ಪರಮೇಶ್ವರ್ 15 ರಿಂದ 25 ಲಕ್ಷ ರೂ. ನೀಡಿದ್ದಾರೆ. ಅದನ್ನು ಅವರೇ ಹೇಳಿದ್ದರು ಎಂದು ಈಗ ಡಿಕೆಶಿ ಹೇಳಿಕೆ ನೀಡಿದ್ದಾರೆ. ರನ್ಯಾಗೆ 25 ಲಕ್ಷ ರೂ. ವರೆಗೆ ನೀಡಿದ್ದಾರಂತೆ. ಕುಟುಂಬದವರಿಗೆಂದು ಆ ಹಣ ಕೊಟ್ಟಿರಬಹುದು. ಪರಮೇಶ್ವರ್ ಪ್ರಭಾವಿ ವ್ಯಕ್ತಿ. ರನ್ಯಾರಂಥ ಹೆಣ್ಣುಮಗಳು ತಪ್ಪು ಮಾಡಿದ್ದರೆ ಕ್ರಮ ಆಗಲಿ. ಚಾರಿಟೇಬಲ್ ಟ್ರಸ್ಟ್ಗಳು ಸಾಕಷ್ಟು ನೆರವು ನೀಡುವ ಕೆಲಸ ಮಾಡುತ್ತಿವೆ. ಶಾಲಾ, ಕಾಲೇಜು ಫೀಸ್, ಮದುವೆ ಕಾರ್ಯಗಳಿಗೆ ನೆರವು ನೀಡಲಾಗುತ್ತದೆ. ಈ ರೀತಿಯ ಸಣ್ಣಪುಟ್ಟ ಚಾರಿಟಿ ನಡೆದಿರಬಹುದು ಎಂದಿದ್ದಾರೆ.
ಇಂಥ ಇಡಿ ದಾಳಿಗಳ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ಈ ವಿಚಾರದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು, ಅಧ್ಯಕ್ಷರು, ಮುಖ್ಯಮಂತ್ರಿಗಳ ನಿಲುವೇ ನನ್ನದೂ ಆಗಿರುತ್ತದೆ ಎಂದಿದ್ದಾರೆ.
ಇಡಿ ದಾಳಿಯ ನಂತರ ಪರಮೇಶ್ವರ್ ನಿವಾಸಕ್ಕೆ ನಾಯಕರು ತೆರಳಿದ್ದರು. ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಚಲುವರಾಯಸ್ವಾಮಿ ಸೇರಿದಂತೆ ಹಲವು ನಾಯಕರು ತೆರಳಿ ಮಾಹಿತಿ ಪಡೆದಿದ್ದಾರೆ.