ನವದೆಹಲಿ: ತನ್ನನ್ನು ನಡುನೀರಿನಲ್ಲಿ ಕೈಬಿಟ್ಟು, ಇದೀಗ ದೆಹಲಿಯಲ್ಲಿ ಎರಡನೇ ಮದುವೆಯಾಗಲು ಸಜ್ಜಾಗಿರುವ ಪತಿಯ ವಿರುದ್ಧ ಪಾಕಿಸ್ತಾನದ ಕರಾಚಿ ಮೂಲದ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ನಿಖಿತಾ ನಾಗದೇವ್ ಎಂಬ ಮಹಿಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಡಿಯೋ ಮೂಲಕ ಹತಾಶೆಯ ಮನವಿ ಮಾಡಿದ್ದು, ತಮಗೆ ನ್ಯಾಯ ಒದಗಿಸಿಕೊಡುವಂತೆ ಕೋರಿದ್ದಾರೆ. ಈ ಘಟನೆ ಉಭಯ ದೇಶಗಳ ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಏನಿದು ಪ್ರಕರಣ?
ಕರಾಚಿ ನಿವಾಸಿಯಾದ ನಿಖಿತಾ ಅವರು, ಪ್ರಸ್ತುತ ಇಂದೋರ್ನಲ್ಲಿ ದೀರ್ಘಾವಧಿಯ ವೀಸಾದಡಿ ನೆಲೆಸಿರುವ ಪಾಕಿಸ್ತಾನಿ ಮೂಲದ ವಿಕ್ರಂ ನಾಗದೇವ್ ಅವರನ್ನು 2020ರ ಜನವರಿ 26ರಂದು ಕರಾಚಿಯಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು. ಮದುವೆಯಾದ ಒಂದು ತಿಂಗಳ ನಂತರ, ಅಂದರೆ ಫೆಬ್ರವರಿ 26ರಂದು ವಿಕ್ರಮ್ ಆಕೆಯನ್ನು ಭಾರತಕ್ಕೆ ಕರೆತಂದಿದ್ದರು. ಆದರೆ ಕೆಲವೇ ತಿಂಗಳಲ್ಲಿ ನಿಕಿತಾ ಅವರ ಬದುಕು ಸಂಕಷ್ಟಕ್ಕೆ ಸಿಲುಕಿತು.
ಲಾಕ್ಡೌನ್ ನೆಪದಲ್ಲಿ ವಾಪಸ್ ಕಳುಹಿಸಿದ ಪತಿ
ಕೋವಿಡ್ ಲಾಕ್ಡೌನ್ ಸಮಯದಲ್ಲಿ, “ವೀಸಾ ತಾಂತ್ರಿಕತೆ”ಯ ನೆಪವೊಡ್ಡಿ 2020ರ ಜುಲೈ 9ರಂದು ಅಟ್ಟಾರಿ ಗಡಿಯಲ್ಲಿ ಆಕೆಯನ್ನು ಬಲವಂತವಾಗಿ ಪಾಕಿಸ್ತಾನಕ್ಕೆ ಕಳುಹಿಸಲಾಯಿತು ಎಂದು ನಿಖಿತಾ ಆರೋಪಿಸಿದ್ದಾರೆ. ಅಂದಿನಿಂದ ಪತಿ ವಿಕ್ರಮ್ ಒಮ್ಮೆಯೂ ಆಕೆಯನ್ನು ಭಾರತಕ್ಕೆ ಕರೆತರುವ ಪ್ರಯತ್ನ ಮಾಡಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
“ಪಾಕಿಸ್ತಾನದಿಂದ ಅತ್ತೆ ಮನೆಗೆ ಬಂದಾಗ ಅವರ ವರ್ತನೆ ಸಂಪೂರ್ಣ ಬದಲಾಗಿತ್ತು. ನನ್ನ ಪತಿ ನಮ್ಮದೇ ಸಂಬಂಧಿಯೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎಂಬುದು ತಿಳಿಯಿತು. ಈ ಬಗ್ಗೆ ಮಾವನವರಲ್ಲಿ ಪ್ರಸ್ತಾಪಿಸಿದಾಗ, ‘ಹುಡುಗರು ಅಂದಮೇಲೆ ಇದೆಲ್ಲ ಸಹಜ, ಏನೂ ಮಾಡಲಾಗದು’ ಎಂದು ಉಡಾಫೆಯಾಗಿ ಉತ್ತರಿಸಿದರು,” ಎಂದು ನಿಖಿತಾ ವಿಡಿಯೋದಲ್ಲಿ ಆರೋಪಿಸಿದ್ದಾರೆ.
ಎರಡನೇ ಮದುವೆಗೆ ತಯಾರಿ ಮತ್ತು ಗಡೀಪಾರು ಶಿಫಾರಸು
ಕರಾಚಿಗೆ ಮರಳಿದ ನಂತರ, ತನ್ನ ಪತಿ ದೆಹಲಿ ಮೂಲದ ಯುವತಿಯೊಂದಿಗೆ ಎರಡನೇ ಮದುವೆಯಾಗಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ವಿಷಯ ತಿಳಿದು ನಿಖಿತಾ ಆಘಾತಗೊಂಡಿದ್ದಾರೆ. ಈ ಸಂಬಂಧ 2025ರ ಜನವರಿ 27ರಂದು ಲಿಖಿತ ದೂರು ದಾಖಲಿಸಿದ್ದಾರೆ.
ಮಧ್ಯಪ್ರದೇಶ ಹೈಕೋರ್ಟ್ನಿಂದ ಅಧಿಕೃತಗೊಂಡ ಸಿಂಧಿ ಪಂಚ್ ಮಧ್ಯಸ್ಥಿಕೆ ಕೇಂದ್ರದಲ್ಲಿ ವಿಚಾರಣೆ ನಡೆದರೂ ಸಂಧಾನ ವಿಫಲವಾಯಿತು. ದಂಪತಿಗಳಿಬ್ಬರೂ ಭಾರತೀಯ ಪ್ರಜೆಗಳಲ್ಲದ ಕಾರಣ, ಈ ವಿಷಯ ಪಾಕಿಸ್ತಾನದ ವ್ಯಾಪ್ತಿಗೆ ಬರುತ್ತದೆ ಎಂದು ಕೇಂದ್ರವು ಅಭಿಪ್ರಾಯಪಟ್ಟಿದ್ದು, ವಿಕ್ರಂನನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡುವಂತೆ ಶಿಫಾರಸು ಮಾಡಿದೆ. ಇಂದೋರ್ ಜಿಲ್ಲಾಧಿಕಾರಿ ಆಶಿಶ್ ಸಿಂಗ್ ಅವರು ಈ ಬಗ್ಗೆ ತನಿಖೆಗೆ ಆದೇಶಿಸಿದ್ದು, ವರದಿ ಆಧರಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪ್ರಧಾನಿಗೆ ಮನವಿ
“ಇಂದು ನನಗೆ ನ್ಯಾಯ ಸಿಗದಿದ್ದರೆ, ಮಹಿಳೆಯರು ನ್ಯಾಯವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಾರೆ. ಅನೇಕ ಹೆಣ್ಣುಮಕ್ಕಳು ವೈವಾಹಿಕ ಜೀವನದಲ್ಲಿ ದೈಹಿಕ ಮತ್ತು ಮಾನಸಿಕ ಕಿರುಕುಳ ಅನುಭವಿಸುತ್ತಿದ್ದಾರೆ. ದಯವಿಟ್ಟು ಎಲ್ಲರೂ ನನ್ನ ಬೆಂಬಲಕ್ಕೆ ನಿಲ್ಲಿ,” ಎಂದು ನಿಖಿತಾ ಕಣ್ಣೀರು ಹಾಕುತ್ತಾ ಪ್ರಧಾನಿ ಮೋದಿಯವರಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ರಾಜಭವನವನ್ನು ಲೋಕ ಭವನ ಮಾಡಲು ನಮ್ಮ ಒಪ್ಪಿಗೆ ಇಲ್ಲ | ಎಚ್.ಕೆ.ಪಾಟೀಲ್



















