ನವದೆಹಲಿ: ಉಗ್ರ ಪೋಷಣೆಯ ಮೂಲಕ ಜಾಗತಿಕವಾಗಿ ಪರಿಣಾಮ ಎದುರಿಸುತ್ತಿರುವ ಪಾಕಿಸ್ತಾನವು ಮತ್ತೆ ಉದ್ಧಟತನ ಪ್ರದರ್ಶಿಸಿದೆ. ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕದನವಿರಾಮಕ್ಕೆ ಒಪ್ಪಿಗೆ ಸೂಚಿಸಿದರೂ ಶನಿವಾರ ರಾತ್ರಿ ದಾಳಿ ನಡೆಸಿದೆ. ಇದಕ್ಕೆ ಭಾರತವೂ ತಿರುಗೇಟು ನೀಡಿದೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲೂ ಸಿಂಧೂ ಜಲ ಒಪ್ಪಂದವನ್ನು ಮುಂದುವರಿಸುವುದಿಲ್ಲ ಎಂಬುದಾಗಿ ಭಾರತ ಸ್ಪಷ್ಟಪಡಿಸಿದೆ ಎಂದು ತಿಳಿದುಬಂದಿದೆ. ಹಾಗಾಗಿ, ಪಾಕಿಸ್ತಾನಕ್ಕೆ ಭಾರತದ ಆರು ನದಿಗಳಿಂದ ನೀರು ಹರಿಯುವುದಿಲ್ಲ ಎನ್ನಲಾಗಿದೆ.
ಅಮೆರಿಕದ ಮಧ್ಯೆಸ್ಥಿಕೆ ಹಿನ್ನೆಲೆಯಲ್ಲಿ ಭಾರತವು ಕದನವಿರಾಮಕ್ಕೆ ಒಪ್ಪಿಗೆ ಸೂಚಿಸಿದೆ. ದಾಳಿ ಮಾಡದಿರಲು ಘೋಷಣೆ ಮಾಡಿದೆ. ಆದರೆ, ಪಾಕಿಸ್ತಾನ ಪ್ರಚೋದನೆ ನೀಡಿದರೆ, ದಾಳಿ ಮಾಡಿದರೆ ಪ್ರತಿದಾಳಿ ನಿಶ್ಚಿತ ಎಂಬ ಸಂದೇಶವನ್ನೂ ರವಾನಿಸಿದೆ. ಪಾಕಿಸ್ತಾನದ ಕುತಂತ್ರ ಬುದ್ಧಿಯನ್ನು ಅರಿತ ಭಾರತವು ಸಿಂಧೂ ಜಲ ಒಪ್ಪಂದಕ್ಕೆ ನೀಡಿರುವ ತಡೆಯಾಜ್ಞೆಯನ್ನು ಮುಂದುವರಿಸುವುದಾಗಿ ತಿಳಿಸಿದೆ. ಹಾಗಾಗಿ, ಮುಂದಿನ ದಿನಗಳಲ್ಲೂ ಪಾಕಿಸ್ತಾನಕ್ಕೆ ನೀರು ಹರಿಯುವುದಿಲ್ಲ. ಇದರಿಂದ ಪಾಕ್ ಕೃಷಿಗೆ ಪೆಟ್ಟು ಬೀಳಲಿದೆ ಎಂದು ಹೇಳಲಾಗುತ್ತಿದೆ.
ಭಾರತದ ಪ್ರತಿದಾಳಿಗೆ ತತ್ತರಿಸಿ, ಅಮೆರಿಕದ ಎದುರು ಮಂಡಿಯೂರಿದ್ದ ಪಾಕಿಸ್ತಾನವು ಕದನವಿರಾಮಕ್ಕೆ ಸಹಿ ಹಾಕಿತ್ತು. ಆದರೆ, ಇದಾದ ಕೆಲವೇ ಗಂಟೆಗಳಲ್ಲಿ ಗಡಿಯಲ್ಲಿ ಅಪ್ರಚೋದಿತವಾಗಿ ದಾಳಿ ನಡೆಸುವ ಮೂಲಕ ಕದನವಿರಾಮ ಉಲ್ಲಂಘಿಸಿದೆ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿರುವ ಭಾರತದ ಸೇನೆಯು ಪಾಕಿಸ್ತಾನದ ಐದಕ್ಕೂ ಅಧಿಕ ಡ್ರೋನ್ ಗಳನ್ನು ಹೊಡೆದುರುಳಿಸಿದೆ. ಆ ಮೂಲಕ ವೈರಿ ರಾಷ್ಟ್ರವನ್ನು ಹಿಮ್ಮೆಟ್ಟಿಸಿದೆ.
ಗುಜರಾತ್ ನ ಕಛ್, ಜಮ್ಮು-ಕಾಶ್ಮೀರದ ಉಧಮ್ ಪುರ, ನೌಶೇರ್, ಶ್ರೀನಗರ, ಬುದ್ಗಾಮ್ ಹಾಗೂ ಅನಂತನಾಗ್ ಗಡಿಯಲ್ಲಿ ಪಾಕಿಸ್ತಾನವು ಶನಿವಾರ ರಾತ್ರಿ ಡ್ರೋನ್ ದಾಳಿ ನಡೆಸಿದೆ. ಇವುಗಳನ್ನು ಭಾರತ ಹೊಡೆದುರುಳಿಸಿದೆ. ಆದಾಗ್ಯೂ, ಕದನವಿರಾಮದ ಬಳಿಕ ಪಾಕಿಸ್ತಾನ ನಡೆಸುವ ದಾಳಿಯನ್ನು ಯುದ್ಧವೆಂದೇ ಪರಿಗಣಿಸಲಾಗುವುದು ಎಂದು ಭಾರತ ಸ್ಪಷ್ಟಪಡಿಸಿದೆ.