ಕ್ವೆಟ್ಟಾ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಬಲೂಚ್ ಬಂಡಾಯ ತೀವ್ರಗೊಂಡಿದ್ದು, ಪಾಕಿಸ್ತಾನದ ಅಧಿಕಾರಿಗಳು ಈ ಪ್ರದೇಶದ 80% ಭಾಗದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾರೆ ಎಂದು ಸ್ಫೋಟಕ ಆರೋಪವನ್ನು ಬಲೂಚ್ ಅಮೆರಿಕನ್ ಕಾಂಗ್ರೆಸ್ನ ಕಾರ್ಯದರ್ಶಿ ಜನರಲ್ ರಝಾಕ್ ಬಲೂಚ್ ಆರೋಪಿಸಿದ್ದಾರೆ.
ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಝಾಕ್ ಬಲೂಚ್ ಮಾತನಾಡಿ, “ಪಾಕಿಸ್ತಾನದ ಸೇನೆಯು ಸೂರ್ಯಾಸ್ತದ ನಂತರ ಕ್ವೆಟ್ಟಾದಿಂದ ಹೊರ ಬರಲು ಭಯಪಡುತ್ತಿದೆ” ಎಂದು ಹೇಳಿದ್ದಾರೆ. ಸಂಜೆ 5ರಿಂದ ಬೆಳಗ್ಗೆ 5 ಗಂಟೆಯವರೆಗೆ ಭದ್ರತಾ ಕಾರಣಗಳಿಂದ ಸೇನೆಯು ಗಸ್ತು ತಿರುಗುವುದಕ್ಕೂ ಹಿಂದೇಟು ಹಾಕುತ್ತಿದೆ ಎಂದು ಚುನಾಯಿತ ಪಾಕಿಸ್ತಾನಿ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ರಝಾಕ್ ಅವರು, ಪಾಕಿಸ್ತಾನದ ಸೇನೆಯು ಬಲೂಚಿಸ್ತಾನದಲ್ಲಿ ತನ್ನ ಹಿಡಿತ ಕಳೆದುಕೊಂಡಿದೆ ಎಂದಿದ್ದಾರೆ. “ಪಾಕ್ ಸೇನೆಯು ಈಗ ಕ್ವೆಟ್ಟಾದಂತಹ ಕೆಲವೇ ನಗರಗಳಿಗೆ ಸೀಮಿತವಾಗಿದೆ. 70-80% ಪ್ರದೇಶವು ಸೇನೆಗೆ ‘ನೋ-ಗೋ ಝೋನ್’ ಆಗಿ ಮಾರ್ಪಟ್ಟಿದೆ” ಎಂದಿದ್ದಾರೆ. ಪಾಕ್ ಸೇನೆಯು ಬಾಂಗ್ಲಾದೇಶದಂತಹ ಸ್ಥಿತಿಗೆ ತಲುಪುವ ಮೊದಲು ಗೌರವದಿಂದ ಹಿಂದೆ ಸರಿಯಬೇಕು ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ. ಇಲ್ಲದಿದ್ದರೆ ಅವರಿಗೆ “ಕೇವಲ ಬೂಟುಗಳು ಮಾತ್ರ ಉಳಿಯುತ್ತವೆ” ಎಂದು ವ್ಯಂಗ್ಯವಾಡಿದ್ದಾರೆ.
ಅಂತಾರಾಷ್ಟ್ರೀಯ ಸಮುದಾಯ, ವಿಶೇಷವಾಗಿ ಭಾರತ ಮತ್ತು ಅಮೆರಿಕ ಬಲೂಚ್ ಸ್ವಾತಂತ್ರ್ಯ ಚಳವಳಿಗೆ ಬೆಂಬಲ ನೀಡಬೇಕು ಎಂದೂ ರಝಾಕ್ ಕರೆ ನೀಡಿದ್ದಾರೆ. “ಭಾರತವು ನಮಗೆ ಬೆಂಬಲ ನೀಡಿದರೆ, ನಮ್ಮ ಬಾಗಿಲುಗಳು ತೆರೆದುಕೊಳ್ಳುತ್ತವೆ,” ಎಂದು ಅವರು ಹೇಳಿದ್ದಾರೆ. ಬೆಂಬಲದಲ್ಲಿ ವಿಳಂಬವಾದರೆ, ಪಾಕಿಸ್ತಾನದ “ಕ್ರೂರ ಸೇನೆ” ಈ ಪ್ರದೇಶದ ಸ್ಥಿರತೆಯನ್ನು ಇನ್ನಷ್ಟು ಹಾಳುಮಾಡುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ, ಬಲೂಚ್ ಕಾರ್ಯಕರ್ತ ಮಿರ್ ಯಾರ್ ಬಲೂಚ್ ಅವರು ಬಲೂಚಿಸ್ತಾನವು ಎಂದಿಗೂ ಪಾಕಿಸ್ತಾನದ ಭಾಗವಾಗಿರಲಿಲ್ಲ ಎಂದು ಘೋಷಿಸಿದ್ದರು. “ಆಗಸ್ಟ್ 11, 1947ರಂದು ಬ್ರಿಟಿಷರು ಬಲೂಚಿಸ್ತಾನವನ್ನು ತೊರೆದಾಗಲೇ ನಾವು ಸ್ವಾತಂತ್ರ್ಯ ಘೋಷಿಸಿದ್ದೇವೆ,” ಎಂದು ಅವರು ಟ್ವೀಟ್ ಮಾಡಿದ್ದಾರೆ. “ನಾವು ಪಾಕಿಸ್ತಾನಿಗಳಲ್ಲ, ನಾವು ಬಲೂಚಿಸ್ತಾನಿಗಳು,” ಎಂದು ಅವರು ಒತ್ತಿಹೇಳಿದ್ದಾರೆ. ಭಾರತೀಯರಿಗೆ ಬಲೂಚ್ ಜನರನ್ನು “ಪಾಕಿಸ್ತಾನೀಯರು” ಎಂದು ಕರೆಯದಂತೆ ಮನವಿ ಮಾಡಿದ ಅವರು, “ಪಾಕಿಸ್ತಾನದ ಜನ ಎಂದರೆ ಪಂಜಾಬಿಗಳು, ಅವರು ಎಂದಿಗೂ ವೈಮಾನಿಕ ದಾಳಿಗಳು, ಬಲವಂತದ ನಾಪತ್ತೆಗಳು ಮತ್ತು ಜನಾಂಗೀಯ ಹತ್ಯಾಕಾಂಡವನ್ನು ಎದುರಿಸಿಲ್ಲ,” ಎಂದು ತಿಳಿಸಿದ್ದಾರೆ.
ಮಿರ್ ಯಾರ್ ಬಲೂಚ್ ಅವರು ಭಾರತವು ಬಲೂಚಿಸ್ತಾನದ ಸಾರ್ವಭೌಮತ್ವವನ್ನು ಗುರುತಿಸಿ, ದೆಹಲಿಯಲ್ಲಿ ಬಲೂಚ್ ರಾಯಭಾರ ಕಚೇರಿಯನ್ನು ಸ್ಥಾಪಿಸಲು ಅನುಮತಿಸಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ, ವಿಶ್ವಸಂಸ್ಥೆಯಿಂದ ಶಾಂತಿಪಾಲನಾ ಪಡೆಗಳನ್ನು ಕಳುಹಿಸುವಂತೆ ಕೋರಿದ್ದಾರೆ. ಇದರ ಬೆನ್ನಲ್ಲೇ ಟ್ವೀಟರ್ ನಲ್ಲಿ “ರಿಪಬ್ಲಿಕ್ ಆಫ್ ಬಲೂಚಿಸ್ತಾನ” ಎಂಬ ಹ್ಯಾಷ್ಟ್ಯಾಗ್ ಕೂಡ ವೈರಲ್ ಆಗಿವೆ.
ಬಲೂಚ್ ಬಂಡಾಯದ ತೀವ್ರತೆ
ಬಲೂಚ್ ಲಿಬರೇಶನ್ ಆರ್ಮಿ (BLA) ನೇತೃತ್ವದ ಬಂಡಾಯವು ಪಾಕಿಸ್ತಾನದ ಸೇನೆ ಮತ್ತು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆಗಳನ್ನು ಗುರಿಯಾಗಿಸಿಕೊಂಡಿದೆ. ಬಲೂಚ್ ಆರ್ಮಿಯು ಇತ್ತೀಚೆಗೆ ಕ್ವೆಟ್ಟಾದ ಫ್ರಾಂಟಿಯರ್ ಕಾರ್ಪ್ಸ್ ಹೆಡ್ಕ್ವಾರ್ಟರ್ಸ್ ಸೇರಿದಂತೆ 51ಕ್ಕೂ ಹೆಚ್ಚು ಸ್ಥಳಗಳಲ್ಲಿ 71 ಸಂಘಟಿತ ದಾಳಿಗಳನ್ನು ನಡೆಸಿದೆ ಎಂದು ಹೇಳಿಕೊಂಡಿದೆ. ಈ ದಾಳಿಗಳಲ್ಲಿ ಸೇನಾ ಬೆಂಗಾವಲು ಪಡೆಗಳು, ಪೊಲೀಸ್ ಠಾಣೆಗಳು, ಮತ್ತು ಖನಿಜ ಸಾಗಾಟ ವಾಹನಗಳನ್ನು ಗುರಿಯಾಗಿಸಲಾಗಿದೆ.
ಮೇ 8-9ರ ರಾತ್ರಿಯಲ್ಲಿ, ಬಿಎಲ್ಎ ಹೋರಾಟಗಾರರು ಕ್ವೆಟ್ಟಾದ ಹಲವು ಪ್ರಮುಖ ಚೆಕ್ಪೋಸ್ಟ್ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಕೇಚ್, ಮಾಸ್ತುಂಗ್, ಮತ್ತು ಕಚ್ಚಿ ಜಿಲ್ಲೆಗಳಲ್ಲಿ ರಿಮೋಟ್-ಕಂಟ್ರೋಲ್ಡ್ ಐಇಡಿಗಳು, ಸ್ವಯಂಚಾಲಿತ ಶಸ್ತ್ರಾಸ್ತ್ರಗಳು ಮತ್ತು ಗ್ರೆನೇಡ್ ಲಾಂಚರ್ಗಳನ್ನು ಬಳಸಿ ದಾಳಿಗಳನ್ನು ನಡೆಸಲಾಗಿದೆ. ಕ್ವೆಟ್ಟಾದ ಹಜಾರಾ ಟೌನ್ ಮತ್ತು ಕಿರಾನಿ ರಸ್ತೆಯಲ್ಲಿ ಭಾರೀ ಗುಂಡಿನ ಚಕಮಕಿ ಮತ್ತು ಸ್ಫೋಟಗಳು ವರದಿಯಾಗಿವೆ.
ಭಾರತದೊಂದಿಗಿನ ಸಂಬಂಧ
ಬಲೂಚ್ ನಾಯಕರು ಭಾರತದೊಂದಿಗಿನ ಸಂಬಂಧವನ್ನು ಬಲಪಡಿಸಲು ಉತ್ಸುಕರಾಗಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ನಡೆಸಿದ “ಆಪರೇಷನ್ ಸಿಂದೂರ್” ಕಾರ್ಯಾಚರಣೆಯನ್ನು ಮಿರ್ ಯಾರ್ ಬಲೂಚ್ ಬೆಂಬಲಿಸಿದ್ದಾರೆ. “ನೀವು ಒಂಟಿಯಲ್ಲ, ನರೇಂದ್ರ ಮೋದಿಯವರೇ,” ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.