ಶಿವಮೊಗ್ಗ: ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನಕ್ಕೆ ಸರಿಯಾದ ಬುದ್ಧಿಯನ್ನು ಸರ್ಕಾರ ಕಲಿಸಿದೆ ಎಂದು ಶಿವಮೊಗ್ಗದಲ್ಲಿ ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ. ಈ ಸಂದರ್ಭದಲ್ಲಿ ವೀರ ಸೈನಿಕರಿಗೆ, ಕೇಂದ್ರ ಸರ್ಕಾರದ ನೇತೃತ್ವ ವಹಿಸಿದ ಮೋದಿ ಅವರಿಗೆ ಕ್ಷೇತ್ರದ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಇಡೀ ದೇಶಾದ್ಯಂತ ಸೈನಿಕರನ್ನು ಅಭಿನಂದಿಸುವ ಕೆಲಸ ಆಗುತ್ತಿದೆ.
ತಿರಂಗಾ ಯಾತ್ರೆ ನಡೆಯುತ್ತಿದೆ ಶಿವಮೊಗ್ಗದಲ್ಲಿ ಭಾನುವಾರ ಈ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಪಕ್ಷದ ಕಾರ್ಯಕರ್ತರು ಮಾಜಿ ಸೈನಿಕರು ಶಾಲಾ ಮಕ್ಕಳು ಪಕ್ಷಾತೀತವಾಗಿ ಪಾಲ್ಗೊಂಡಿದ್ದಾರೆ. ಭಾರತವನ್ನು ಮುಟ್ಟಿದರೆ ಹುಷಾರ್ ಎಂಬ ಸಂದೇಶವನ್ನು ಪ್ರಧಾನಿ ಮೋದಿ ಅವರು ನೀಡಿದ್ದಾರೆ.
ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಸಣ್ಣತನದ ಹೇಳಿಕೆ ನೀಡುವುದನ್ನು ಬಿಡಬೇಕು. ದೇಶದ ಐಕ್ಯತೆ ವಿಷಯ ಬಂದಾಗ ಗೌರವದಿಂದ ನಡೆದುಕೊಳ್ಳಬೇಕು. ಆ ದಿಕ್ಕಿನಲ್ಲಿ ಅವರು ಜವಾಬ್ದಾರಿ ನಿರ್ವಹಣೆ ಮಾಡಬೇಕು. ದೇಶವನ್ನು ಮುನ್ನಡೆಸುವ ಕೆಲಸವನ್ನು ಕಾಂಗ್ರೆಸ್ ಸರಿಯಾಗಿ ಮಾಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಅವರು ಮಾಡಿದ ದೊಡ್ಡ ತಪ್ಪನ್ನು ಸರಿಪಡಿಸುವ ದೊಡ್ಡ ಜವಾಬ್ದಾರಿ ಪ್ರಧಾನಿ ಮೋದಿ ಹಾಗೂ ಸೈನಿಕರ ಮೇಲಿದೆ.
ಆ ಕೆಲಸವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಚ್ಚರಿಕೆಯಿಂದ ದೇಶದ ಮೇಲೆ ಯಾವುದೇ ಕಪ್ಪು ಚುಕ್ಕೆ ಬರದಂತೆ ನಿರ್ವಹಿಸಬೇಕಿದೆ. ಪಕ್ಕದ ನೆರೆಯ ರಾಷ್ಟ್ರದ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನು ಪ್ರಧಾನಿ ಮೋದಿ ಇಡುತ್ತಿದ್ದಾರೆ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.