ನವದೆಹಲಿ: ಕರ್ನಾಟಕದ ಒಟ್ಟು 9 ಮಂದಿ ಸಾಧಕರಿಗೆ 2025ನೇ ಸಾಲಿನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು ಸಂದಿದ್ದು, ಬೆಂಗಳೂರಿನ ಖ್ಯಾತ ಪಿಟೀಲು ವಾದಕ ಲಕ್ಷ್ಮೀನಾರಾಯಣ ಸುಬ್ರಹ್ಮಣ್ಯಂ ಅವರು ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದರೆ, ಹಿರಿಯ ಚಲನಚಿತ್ರ ನಟ ಅನಂತ್ ನಾಗ್, ಪತ್ರಿಕೋದ್ಯಮ, ಸಾಹಿತ್ಯ ಮತ್ತು ಶಿಕ್ಷಣಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಎ. ಸೂರ್ಯಪ್ರಕಾಶ್ ಅವರು ಪದ್ಮಭೂಷಣವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕರ್ನಾಟಕದ ಭೀಮವ್ವ ಶಿಳ್ಳೇಕ್ಯಾತರ, ಹಾಸನ ರಘು, ಪ್ರಶಾಂತ್ ಪ್ರಕಾಶ್, ರಿಕಿ ಕೇಜ್, ವೆಂಕಪ್ಪ ಸುಗತೇಕರ್, ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ಪ್ರಸಕ್ತ ಸಾಲಿನ ಪದ್ಮಶ್ರೀ ಪ್ರಶಸ್ತಿ ಸಂದಿದೆ. ಈ ಮೂಲಕ ರಾಜ್ಯದ 9 ಮಂದಿಗೆ ಪದ್ಮ ಕಿರೀಟ ಸಂದಂತಾಗಿದೆ.
ಈ ವರ್ಷ ಒಟ್ಟು 7 ಪದ್ಮ ವಿಭೂಷಣ, 19 ಪದ್ಮಭೂಷಣ ಹಾಗೂ 113 ಮಂದಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಘೋಷಿಸಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಪಿಟೀಲು ವಾದಕ ಲಕ್ಷ್ಮೀನಾರಾಯಣ ಸುಬ್ರಹ್ಮಣ್ಯಂ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತರಾಗಿದ್ದಾರೆ. 2007ರಲ್ಲಿ ತಮ್ಮ ಪತ್ನಿಯ ಜತೆಗೂಡಿ ಬೆಂಗಳೂರಿನಲ್ಲಿ ಸುಬ್ರಮಣಿಯಮ್ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಎಂಬ ಸಂಗೀತ ಶಾಲೆಯನ್ನು ಆರಂಭಿಸಿರುವ ಕೀರ್ತಿ ಅವರಿಗೆ ಸಲ್ಲುತ್ತದೆ.
ಇನ್ನು, ಸ್ಯಾಂಡಲ್ ವುಡ್ ಚೆಲುವ ಎಂದೇ ಕರೆಸಿಕೊಳ್ಳುವ ಹಿರಿಯ ನಟ ಅನಂತನಾಗ್, ಭಾರತೀಯ ಚಿತ್ರರಂಗ ಕಂಡ ಅದ್ಭುತ ಪ್ರತಿಭೆ. ಕನ್ನಡ ಮಾತ್ರವಲ್ಲದೇ ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. ತಮ್ಮ ಮನೋಜ್ಞ ಅಭಿನಯಕ್ಕಾಗಿ ಅವರಿಗೆ 6 ಫಿಲ್ಮ್ ಫೇರ್ ಮತ್ತು 5 ಕರ್ನಾಟಕ ಚಲನಚಿತ್ರ ಪ್ರಶಸ್ತಿಗಳು ಸಂದಿವೆ. ರಾಜ್ಯ ರಾಜಕೀಯದಲ್ಲೂ ಅನುಭವ ಹೊಂದಿರುವ ಅನಂತ್ ನಾಗ್ 1994ರ ಜೆ.ಎಚ್.ಪಟೇಲ್ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.