ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗಣರಾಜ್ಯೋತ್ಸವಕ್ಕೂ ಮುನ್ನ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದ್ದಾರೆ. ಅತ್ಯುನ್ನತ ನಾಗರಿಕ ಗೌರವಕ್ಕೆ ಈ ಬಾರಿಯೂ ಕೆಲವು ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ. ಐವರು ಭಾರತೀಯ ಅಥ್ಲೀಟ್ಗಳು ಈ ಬಾರಿ ಪದ್ಮ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಸತತ ಎರಡು ಒಲಂಪಿಕ್ಸ್ ಪದಕಗಳನ್ನು ಗೆದ್ದ ಭಾರತದ ಹಾಕಿ ಗೋಲ್ಕೀಪರ್ ಪಿಆರ್ ಶ್ರೀಜೇಶ್ ಅವರಿಗೆ ಮೂರನೇ ಅತ್ಯುನ್ನತ ಗೌರವ ಪದ್ಮ ಭೂಷಣ ಗೌರವಕ್ಕೆ ಪಾತ್ರರಾಗಿದ್ದಾರೆ. ಭಾರತೀಯ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ಗೆ ಪದ್ಮ ಶ್ರೀ ಪ್ರಶಸ್ತಿ ಲಭಿಸಿದೆ.
ಕಳೆದ ವರ್ಷವಷ್ಟೇ ಪ್ಯಾರಿಸ್ ಒಲಿಂಪಿಕ್ಸ್ ಕಂಚು ಗೆದ್ದ ಬಳಿಕ ಹಾಕಿಯಿಂದ ನಿವೃತ್ತರಾದ ಭಾರತದ ಶ್ರೇಷ್ಠ ಹಾಕಿ ಆಟಗಾರರಲ್ಲಿ ಒಬ್ಬರಾದ ಪಿಆರ್ ಶ್ರೀಜೇಶ್ ಅವರು ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ಪ್ಯಾರಿಸ್ನಲ್ಲಿ ಭಾರತ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಟೋಕಿಯೊ ಒಲಿಂಪಿಕ್ಸ್ನಲ್ಲಿ (2020) ಶ್ರೀಜೇಶ್ ಅದ್ಭುತ ಪ್ರದರ್ಶನ ನೀಡಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದರು, ಇದು 41 ವರ್ಷಗಳಲ್ಲಿ ಭಾರತಕ್ಕೆ ಮೊದಲ ಹಾಕಿ ಪದಕವಾಗಿತ್ತು. ಇದಲ್ಲದೆ, ಶ್ರೀಜೇಶ್ ಸತತ ಮೂರು ಬಾರಿ ಎಫ್ಐಎಚ್ ವರ್ಷದ ಗೋಲ್ಕೀಪರ್ ಆಗಿ ಆಯ್ಕೆಯಾಗಿದ್ದರು.
ಆರ್ ಅಶ್ವಿನ್ಗೆ ಸಾಧನೆಗೆ ಗೌರವ
ಕಳೆದ ತಿಂಗಳು ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ ಭಾರತದ ಶ್ರೇಷ್ಠ ಸ್ಪಿನ್ನರ್ಗಳಲ್ಲಿ ಒಬ್ಬರಾದ ರವಿಚಂದ್ರನ್ ಅಶ್ವಿನ್ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2024ರ ಡಿಸೆಂಬರ್ನಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಅಶ್ವಿನ್ ನಿವೃತ್ತಿ ಪಡದಿದ್ದರು. ಅಶ್ವಿನ್ 106 ಟೆಸ್ಟ್ ಪಂದ್ಯಗಳಿಂದ 537 ವಿಕೆಟ್ಗಳನ್ನು ಪಡೆದಿದ್ದಾರೆ. ಇನ್ನು ಬ್ಯಾಟಿಂಗ್ನಲ್ಲಿ 6 ಶತಕಗಳ ಸಹಾಯದಿಂದ 3 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅಶ್ವಿನ್ 2011 ರಲ್ಲಿ ವಿಶ್ವಕಪ್ ಮತ್ತು 2013 ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ಭಾಗವಾಗಿದ್ದರು.
ಹರ್ವೀಂದರ್ಗೆ ಪದ್ಮ ಶ್ರೀ ಪ್ರಶಸ್ತಿ
ಕಳೆದ ವರ್ಷ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದ ಆರ್ಚರಿ ಪಟು ಹರ್ವಿಂದರ್ ಸಿಂಗ್ ಕೂಡ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹರ್ವಿಂದರ್ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಬಿಲ್ಲುಗಾರ. ಇನ್ನು ಪ್ಯಾರಾ ಕ್ರೀಡಾಪಟು ಸತ್ಯಪಾಲ್ ಅವರು ಪದ್ಮಶ್ರೀಗೆ ಪಾತ್ರರಾಗಿದ್ದಾರೆ.
90ರ ದಶಕದಲ್ಲಿ ಭಾರತದ ಅತ್ಯುತ್ತಮ ಫುಟ್ಬಾಲ್ ಆಟಗಾರರಾಗಿದ್ದ ಕೇರಳದ ಐಎಂ ವಿಜಯನ್ ಅವರಿಗೂ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೈಚುಂಗ್ ಭುಟಿಯಾ ಮತ್ತು ಸುನಿಲ್ ಛೆಟ್ರಿಯ ಮೊದಲು, ವಿಜಯನ್ ಭಾರತೀಯ ಫುಟ್ಬಾಲ್ನ ಅತಿದೊಡ್ಡ ಆಟಗಾರಾಗಿದ್ದರು.