ಬೆಂಗಳೂರು: ರಾಜ್ಯ ಕಾಂಗ್ರೇಸ್ ಸರ್ಕಾರದಿಂದ ಮತ್ತೆ 1 ಲೀಟರ್ ಹಾಲಿಗೆ 4 ರೂ. ಏರಿಕೆ ಮಾಡಿರುವುದು ಖಂಡನೀಯ. ಈ ಸರ್ಕಾರ ಜನರಿಗೆ ದರ ಏರಿಕೆ ಬರೆ ಹಾಕಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಸರ್ಕಾರ ಕಳೆದ ಎರಡ್ಮೂರು ತಿಂಗಳ ಹಿಂದೆಯಷ್ಟೇ 2 ರೂ. ಹೆಚ್ಚು ಮಾಡಿತ್ತು. ಹಿಂದೆ ಹೆಚ್ಚುವರಿ 50 ಎಂ ಎಲ್ ಕೊಡಲಾಗಿತ್ತು. ಈಗ ಅದನ್ನೂ ಕಡಿತ ಮಾಡಲಾಗಿದೆ. ಹೀಗಾಗಿ ಈ ಒಂದು ವರ್ಷದಲ್ಲಿ 6.ರೂ ಲೀಟರ್ ಹಾಲಿಗೆ ಹೆಚ್ಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸರ್ಕಾರಕ್ಕೆ ದರ ಹೆಚ್ಚಳ ಮಾಡುವುದೇ ಸಾಧನೆಯಾಗಿದೆ. ಜನನ ಪ್ರಮಾಣ ಪತ್ರ ಹಿಡಿದು, ಮರಣ ಪತ್ರ, ಸ್ಟ್ಯಾಂಪ್ ಡ್ಯೂಟಿ ದರ, ಬಸ್ ದರ, ವಿದ್ಯುತ್ ದರ, ಮನೆ ತೆರಿಗೆ ಹೆಚ್ಚಳ ಸೇರಿದಂತೆ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ಇದು ಮನುಷ್ಯತ್ವ ಇಲ್ಲದ ಸರ್ಕಾರ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದರ ಹೆಚ್ಚಿಸದ ಪದಾರ್ಥಗಳೇ ಇಲ್ಲವಾಗಿದೆ. ಎಲ್ಲ ವಸ್ತುಗಳ ದರ ಏರಿಕೆ ಮಾಡಿದ್ದಾರೆ. ಜನರನ್ನು ಗ್ಯಾರಂಟಿಗಳ ಹೆಸರಿನಲ್ಲಿ ಸರ್ಕಾರ ಲೂಟಿ ಮಾಡುತ್ತಿದೆ. ಮಾನವೀಯತೆ, ಮನುಷ್ಯತ್ವ ಇಲ್ಲದ ಸರ್ಕಾರ ಇದು. ರಕ್ತ ಹೀರುವ ಸರ್ಕಾರ. ಹಾಲಿನ ದರ ಏರಿಕೆ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಹೋರಾಟ ಮಾಡಲಿದೆ. ಕೂಡಲೇ ಸರ್ಕಾರ ಹಾಲಿನ ದರ ಏರಿಕೆ ವಾಪಸ್ ಪಡೆಯಬೇಕೆಂದು ಒತ್ತಾಯಿಸುತ್ತೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.