ಶಿವಮೊಗ್ಗ: ಎಲ್ಲಾ ಯೋಜನೆಗಳಿಗೂ ವಿರೋಧ ಮಾಡುವವರು ಇದ್ದೇ ಇರುತ್ತಾರೆ, ವಿರೋಧ ಮಾಡುವವರ ಜೊತೆ ನಮ್ಮ ಅಧಿಕಾರಿಗಳು ಮಾತನಾಡಲಿದ್ದಾರೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಭದ್ರಾವತಿ ತಾಲೂಕಿನ ಭದ್ರಾ ಅಣೆಕಟ್ಟೆ ಬಳಿ ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿದ ಕೆ.ಜೆ.ಜಾರ್ಜ್, ರಾಜ್ಯದಲ್ಲಿ ಸದ್ಯಕ್ಕೆ ವಿದ್ಯುತ್ ಕೊರತೆ ಇಲ್ಲ. ಮುಂದಿನ ನಾಲ್ಕೈದು ವರ್ಷದ ನಂತರ ವಿದ್ಯುತ್ ಕೊರತೆ ಆಗಬಾರದು ಎಂದು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಈ ಯೋಜನೆಯಿಂದ ರಾಜ್ಯಕ್ಕೆ ಎರಡು ಸಾವಿರ ಮೆಗಾವ್ಯಾಟ್ ವಿದ್ಯುತ್ ಲಭ್ಯವಾಗುತ್ತದೆ. ಈ ಯೋಜನೆಗೆ ಯಾವುದೇ ನೀರಿನ ಹರಿವನ್ನು ನಾವು ನಿಲ್ಲಿಸುತ್ತಿಲ್ಲ. ಕೆಳಗಡೆಯಿಂದ ನೀರನ್ನು ಬ್ಯಾಲೆನ್ಸ್ ಡ್ಯಾಂಗೆ ಎತ್ತಿ ವಿದ್ಯುತ್ ಉತ್ಪಾದನೆ ಮಾಡುತ್ತೇವೆ ಅಷ್ಟೇ. ಯೋಜನೆಗೆ 120 ಎಕರೆ ಭೂಮಿ ಬೇಕು. ಪೈಪ್ ಲೈನ್ ಮೇಲೂ ಸಹ ನಾವು ಅರಣ್ಯ ಬೆಳೆಸಬಹುದು. ಇದು ಅತ್ಯಂತ ಸಿಂಪಲ್ ಯೋಜನೆ. ಈಗ ಶರಾವತಿಯಿಂದ ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಾದ ಮೇಲೆ ಮೂರು ಸಾವಿರ ಮೆಗಾವ್ಯಾಟ್ ಉತ್ಪಾದನೆ ಆಗುತ್ತದೆ. ಈ ಯೋಜನೆ ಮುಕ್ತಾಯವಾಗಬೇಕಾದರೆ ಮೂರ್ನಾಲ್ಕು ವರ್ಷ ಬೇಕಾಗುತ್ತದೆ. ಮುಂದಾಲೋಚನೆಯಿಂದ ಯೋಜನೆ ಮಾಡಲಾಗುತ್ತಿದೆ ಎಂದು ವಿವರ ನೀಡಿದ್ದಾರೆ.
ನಮ್ಮ ರಾಜ್ಯದಲ್ಲಿ ಏಳೂವರೆ ಕೋಟಿ ಜನರಲ್ಲಿ ವಿರೋಧ ಮಾಡುವುದಕ್ಕೆ ಸ್ವಲ್ಪ ಜನ ಇರುತ್ತಾರೆ. ವಿರೋಧ ಮಾಡುವವರಿಗೆ ಅನುಮಾನಗಳಿದ್ದರೆ, ಅದನ್ನು ನಾವು ಪರಿಹಾರ ಮಾಡುತ್ತೇವೆ. ಕೇಂದ್ರ ಹಾಗೂ ರಾಜ್ಯದ ಪರಿಸರ ಇಲಾಖೆ ಅನುಮತಿ ಪಡೆದು ನಾವು ಯೋಜನೆ ಮಾಡುತ್ತೇವೆ. ಕೇಂದ್ರದ ಪರಿಸರ ವಿಭಾಗ ಅನುಮತಿ ನೀಡುವಾಗ ನಿಯಮಾವಳಿ ಪ್ರಕಾರ ಏನು ಮಾಡಬೇಕೋ ಅದನ್ನು ಮಾಡುತ್ತದೆ. ಪರಿಸರದ ವಿಚಾರದಲ್ಲಿ ನಾವು ಅವರಿಗೆ ಒತ್ತಡ ಹಾಕಲು ಬರುವುದಿಲ್ಲ. ಅವರು ಏನು ಬೇಕೋ ಅದನ್ನು ಅಧ್ಯಯನ ಮಾಡಿ ವರದಿ ಕೊಡುತ್ತಾರೆ. ವರದಿ ನೀಡಿದ ನಂತರ ನಾವು ಯೋಜನೆ ಪ್ರಾರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಲ್ಲಿ ನೀರನ್ನು ಮೇಲಕ್ಕೆತ್ತಲು ಸೋಲಾರ್ ವಿದ್ಯುತ್ ಬಳಸಲಾಗುವುದು. ಹಗಲು ಹೂತ್ತಿನಲ್ಲಿ ಸೋಲಾರ್ ವಿದ್ಯುತ್ ಕಡಿಮೆ ದರಕ್ಕೆ ಸಿಗುತ್ತದೆ. ಅದನ್ನು ಸ್ಟೋರೇಜ್ ಮಾಡಿಕೊಂಡು ಪಂಪ್ಡ್ ಯೋಜನೆಗೆ ಬಳಕೆ ಮಾಡಿಕೊಳ್ಳಲಾಗುವುದು. ಈಗ ಪೀಕ್ ಅವರ್ನಲ್ಲಿ ವಿದ್ಯುತ್ಗೆ ಬೇಡಿಕೆ ಹೆಚ್ಚಿದೆ. ಇದರ ಕೊರತೆ ನೀಗಿಸಲು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬಳಸಿಕೊಳ್ಳುತ್ತೇವೆ. ಇದರ ಬಗ್ಗೆ ಇನ್ನೂ ಪರಿಸರ ಪ್ರೇಮಿಗಳಿಗೆ ಅನುಮಾನಗಳಿದ್ದರೆ, ಅವರೊಂದಿಗೆ ಮಾತನಾಡಲು ನಾನು ಅಧಿಕಾರಿಗಳನ್ನು ಕಳುಹಿಸುತ್ತೇನೆ ಎಂದಿದ್ದಾರೆ.
ಅರಣ್ಯ ನಾಶವಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಎಲ್ಲವನ್ನೂ ನಿಯಮದಂತೆ ಮಾಡಲಾಗುತ್ತಿದೆ. ಒಂದು ಮರಕ್ಕೆ ಹತ್ತು ಗಿಡ ನೆಡುವ, ಭೂಮಿಗೆ ಪರ್ಯಾಯ ಭೂಮಿ ನೀಡುವ ಕೆಲಸ ಮಾಡಲಾಗುತ್ತದೆ. ಪಂಪ್ಡ್ ಸ್ಟೋರೇಜ್ನಿಂದ ಉತ್ಪಾದನೆ ಆಗುವ ವಿದ್ಯುತ್ಗಾಗಿ ಪ್ರತ್ಯೇಕ ಮಾರ್ಗದ ಅವಶ್ಯಕತೆ ಇಲ್ಲ. ಹಾಲಿ ಮಾರ್ಗವನ್ನೇ ಮೇಲ್ದರ್ಜೆಗೇರಿಸಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.