ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ಪಿಂಚಣಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಹತ್ವದ ಬದಲಾವಣೆಗಳನ್ನು ಮಾಡಿ ಆದೇಶ ಹೊರಡಿಸಿದೆ. ಸಾರ್ವಜನಿಕ ವಲಯದ ಉದ್ಯಮಗಳಲ್ಲಿ (ಪಿಎಸ್ ಯು) ಕಾರ್ಯನಿರ್ವಹಿಸುತ್ತಿರುವ ನೌಕರರ ನಿವೃತ್ತಿ ನಂತರದ ಭದ್ರತೆಗೆ ಸಂಬಂಧಿಸಿದ ಮಹತ್ವದ ತಿದ್ದುಪಡಿಯನ್ನು ಜಾರಿಗೆ ತಂದಿದೆ.
ಹೊಸ ಅಧಿಸೂಚನೆಯು ಸಿಸಿಎಸ್ (ಪಿಂಚಣಿ) ನಿಯಮಗಳು 2021 ರ ನಿಯಮ 37 ರ ಉಪ-ನಿಯಮ 29 ರಲ್ಲಿ ಹೊಸ ಷರತ್ತುಗಳನ್ನು ಸೇರಿಸಿದೆ. ಇದರ ಅಡಿಯಲ್ಲಿ, ಸರ್ಕಾರಿ ನೌಕರರು ಯಾವುದೇ ಇಲಾಖೆಯಿಂದ ಪಿ ಎಸ್ ಯು ಸೇರಿದ ನಂತರ ಯಾವುದೇ ವಿಚಾರದಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ ಅವರು ಸರ್ಕಾರಿ ಸೇವೆಯಲ್ಲಿದ್ದಾಗ ಪಡೆದ ನಿವೃತ್ತಿ ಪ್ರಯೋಜನಗಳನ್ನು ಕಳೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.
ಸರ್ಕಾರಿ ಸೇವೆಯಿಂದ ಪಿಎಸ್ಯುಗಳಿಗೆ ಹೋಗುವ ನೌಕರರು ಅಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಶಿಸ್ತುಭಂಗ ಅಥವಾ ಅನೈತಿಕ ವರ್ತನೆ ಮಾಡಿದ್ದರೆ, ಅವರನ್ನು ಪಿ ಎಸ್ ಯುದಿಂದ ವಜಾ ಮಾಡಿದರೆ ಅಥವಾ ಶಿಸ್ತಿನ ಕ್ರಮ ಕೈಗೊಳ್ಳಲಾಗಿದೆ ಎಂದಾದರೆ, ಅವರು ಸರ್ಕಾರಿ ಸೇವೆಯಲ್ಲಿ ಇದ್ದಾಗ ಸಂಪಾದಿಸಿದ ಪಿಂಚಣಿ ಹಾಗೂ ಗ್ರಾಚ್ಯುಟಿ ಸೌಲಭ್ಯಗಳನ್ನು ಪೂರ್ತಿ ಅಥವಾ ಭಾಗಶಃ ಕಡಿತಗೊಳಿಸಬಹುದಾಗಿದೆ ಎಂದು ಹೊಸ ಅಧಿಸೂಚನೆ ತಿಳಿಸುತ್ತದೆ.
ಹೊಸ ಅಧಿಸೂಚನೆ ಪ್ರಕಾರ, ಸರ್ಕಾರಿ ನೌಕರರು ಸಾರ್ವಜನಿಕ ವಲಯದ ಉದ್ಯಮಗಳಿಗೆ ವರ್ಗವಾದ ಬಳಿಕ ಅವರ ಶಿಸ್ತು ಮತ್ತು ನಡವಳಿಕೆಗೆ ಆಧಾರಿತವಾಗಿ ಪಿಂಚಣಿ ಸೌಲಭ್ಯಗಳನ್ನು ಕೊಡಬೇಕಾ ಅಥವಾ ಇಲ್ಲವೇ ಎಂಬ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಸರ್ಕಾರಕ್ಕಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಸರ್ಕಾರಿ ಇಲಾಖೆಯನ್ನು ಪಿ ಎಸ್ ಯು ಆಗಿ ಬದಲಾಯಿಸಿದಾಗ, ಅದರ ಉದ್ಯೋಗಿಗಳಿಗೆ ಪಿಂಚಣಿ ಹೇಗೆ ನೀಡಲಾಗುತ್ತದೆ ಎಂಬುದನ್ನು ನಿಯಮ 37 ಹೇಳುತ್ತದೆ. ಒಂದು ಇಲಾಖೆಯು ಪಿ ಎಸ್ ಯು ಆದಾಗ, ಉಳಿದ ಉದ್ಯೋಗಿಗಳ ಗಳಿಕೆ ರಜೆ ಮತ್ತು ಅರ್ಧ ವೇತನ ರಜೆಯನ್ನು ಪಿ ಎಸ್ ಯುಗೆ ವರ್ಗಾಯಿಸಲಾಗುತ್ತದೆ. ಅಲ್ಲದೆ, ಉದ್ಯೋಗಿಗಳ ಭವಿಷ್ಯ ನಿಧಿ ಅಥವಾ ಪಿಎಫ್ ಮೊತ್ತವನ್ನು ಹೊಸ ಕಂಪನಿಯ ಪಿಎಫ್ ಖಾತೆಗೆ ವರ್ಗಾಯಿಸಲಾಗುತ್ತದೆ.