ತಿರುವನಂತಪುರ: ಸುಳ್ಳು ಜಾಹೀರಾತು ನೀಡಿದ ಆರೋಪವೊಂದರಲ್ಲಿ ಕೋರ್ಟ್ ಮುಂದೆ ಹಾಜರಾಗಲು ವಿಫಲಗೊಂಡ ಯೋಗ ಗುರು ಬಾಬಾ ರಾಮ್ದೇವ್ (Baba Ramdev) ಮತ್ತು ಪತಂಜಲಿ ಆಯುರ್ವೇದದ ಎಂಡಿ ಮತ್ತು ಸಹ ಸಂಸ್ಥಾಪಕ ಆಚಾರ್ಯ ಬಾಲಕೃಷ್ಣ ವಿರುದ್ಧ ಕೇರಳ(kerala) ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ. ಇಂಗ್ಲಿಷ್ ಮತ್ತು ಮಲಯಾಳಂ ಪತ್ರಿಕೆಗಳಲ್ಲಿ ದಾರಿತಪ್ಪಿಸುವ ಔಷಧದ ಜಾಹೀರಾತುಗಳನ್ನು ಪ್ರಕಟಿಸಿದ ಆರೋಪದ ಮೇಲೆ ದಿವ್ಯಾ ಫಾರ್ಮಸಿ (Divya Pharmacy) ವಿರುದ್ಧ ಕೇರಳ ಡ್ರಗ್ಸ್ ಇನ್ಸ್ಪೆಕ್ಟರ್ ಪ್ರಕರಣ ದಾಖಲಿಸಿದ್ದರು.
ಫೆಬ್ರವರಿ 15ರಂದು ಅವರ ಹಾಜರಾಗುವಂತೆ ನ್ಯಾಯಾಲಯವು ವಾರಂಟ್ ಹೊರಡಿಸಲಾಗಿದೆ . ಇದಕ್ಕೂ ಮುನ್ನ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯವು ಫೆಬ್ರವರಿ 1 ರಂದು ಹಾಜರಾಗಲು ವಾರಂಟ್ ಹೊರಡಿಸಿತ್ತು.
ಬಾಬಾ ರಾಮ್ದೇವ್, ಬಾಲಕೃಷ್ಣ ಮತ್ತು ಹರಿದ್ವಾರ ಮೂಲದ ಪತಂಜಲಿ ಆಯುರ್ವೇದದ ಭಾಗವಾಗಿರುವ ದಿವ್ಯಾ ಫಾರ್ಮಸಿ ವಿರುದ್ಧ 2024 ರ ಅಕ್ಟೋಬರ್ನಲ್ಲಿ ಪ್ರಕರಣ ದಾಖಲಾಗಿತ್ತು. ಜನವರಿ 16 ರಂದು ಹಾಜರಾಗುವಂತೆ ನ್ಯಾಯಾಲಯವು ಅವರಿಗೆ ಸಮನ್ಸ್ ನೀಡಿತ್ತು, ಆದರೆ ಅವರು ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾಗಿದ್ದರು. ಪತಂಜಲಿ ಉತ್ಪನ್ನಗಳು ಅಧಿಕ ರಕ್ತದೊತ್ತಡ ಮತ್ತು ಮಧುಮೇಹವನ್ನು ಗುಣಪಡಿಸುತ್ತವೆ ಎಂದು ಹೇಳುವ ದಾರಿತಪ್ಪಿಸುವ ಜಾಹೀರಾತು ನೀಡಿದ ಪ್ರಕರಣ ಇದಾಗಿದೆ.
ವಿಶೇಷವೆಂದರೆ, ಕೇರಳದ ಕೋಯಿಕ್ಕೋಡ್ ಮತ್ತು ಉತ್ತರಾಖಂಡದ ಹರಿದ್ವಾರದ ನ್ಯಾಯಾಲಯಗಳಲ್ಲಿ ಇದೇ ರೀತಿಯ ಪ್ರಕರಣಗಳು ನಡೆಯುತ್ತಿವೆ. ಅಲ್ಲಿ ಅನೇಕ ಬಾರಿ ಸಮನ್ಸ್ ನೀಡಲಾಗಿದೆ. ಆದರೆ ರಾಮ್ದೇವ್ ಮತ್ತು ಬಾಲಕೃಷ್ಣ ಹಾಜರಾಗಿಲ್ಲ.
ಕೋಯಿಕ್ಕೋಡ್ನಲ್ಲಿ 4, ಪಾಲಕ್ಕಾಡ್ನಲ್ಲಿ 3, ಎರ್ನಾಕುಲಂನಲ್ಲಿ 2, ತಿರುವನಂತಪುರಂನಲ್ಲಿ 1 ಸೇರಿದಂತೆ ಒಟ್ಟು 10 ಪ್ರಕರಣಗಳು ದಾಖಲಾಗಿವೆ.
ಈ ಹಿಂದೆ, ಜನವರಿ 15 ರಂದು, ಸುಪ್ರೀಂ ಕೋರ್ಟ್ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವೈದ್ಯಕೀಯ ಜಾಹೀರಾತುಗಳನ್ನು ದಾರಿತಪ್ಪಿಸುವ ವ್ಯಕ್ತಿಗಳು ಮತ್ತು ಕಂಪನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದರೆ ನ್ಯಾಯಾಂಗ ನಿಂದನೆ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿತ್ತು.


















