“ಚೆನ್ನೈ: ತಮಿಳುನಾಡಿನ ಕರೂರಿನಲ್ಲಿ ಕಳೆದ ವಾರ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಮಾವೇಶದಲ್ಲಿ ನಡೆದ ಕಾಲ್ತುಳಿತದಲ್ಲಿ 41 ಮಂದಿ ಸಾವನ್ನಪ್ಪಿದ ಘಟನೆ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಘಟನೆಯ ಬಗ್ಗೆ ಸತ್ಯಶೋಧನೆಗಾಗಿ ಬಿಜೆಪಿಯು ತನ್ನ ಸಂಸದರ ನಿಯೋಗವನ್ನು ಕಳುಹಿಸಿರುವುದನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತೀವ್ರವಾಗಿ ಟೀಕಿಸಿದ್ದಾರೆ.
“ಮಣಿಪುರದಲ್ಲಿ ಅಷ್ಟೊಂದು ಹಿಂಸಾಚಾರ, ಗಲಭೆಗಳು ಸಂಭವಿಸಿದಾಗಲಾಗಲೀ, ಉತ್ತರಪ್ರದೇಶದ ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿದಾಗಲಾಗಲೀ ಯಾವುದೇ ಸಮಿತಿ ಕಳುಹಿಸದ ಬಿಜೆಪಿ, ಕರೂರಿಗೆ ತಕ್ಷಣವೇ ನಿಯೋಗವನ್ನು ಕಳುಹಿಸಿಕೊಟ್ಟಿದೆ,” ಎಂದು ಸ್ಟಾಲಿನ್ ಕಿಡಿಕಾರಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ರಾಜ್ಯ ಚುನಾವಣೆಗೆ ಮುನ್ನ ಬಿಜೆಪಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ. “ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ನಂತರವಾಗಲಿ, ಉತ್ತರ ಪ್ರದೇಶದಲ್ಲಿ ನಡೆದ ಕುಂಭಮೇಳದ ಕಾಲ್ತುಳಿತದ ನಂತರವಾಗಲಿ ಬಿಜೆಪಿ ಯಾವುದೇ ತನಿಖಾ ಸಮಿತಿಯನ್ನು ಕಳುಹಿಸಿರಲಿಲ್ಲ. ಆದರೆ, ಕರೂರಿಗೆ ಮಾತ್ರ ತಕ್ಷಣವೇ ನಿಯೋಗವನ್ನು ಕಳುಹಿಸಲಾಗಿದೆ. ಇದು ತಮಿಳುನಾಡಿನ ಮೇಲಿನ ಕಾಳಜಿಯಿಂದಲ್ಲ, ಬದಲಾಗಿ ಚುನಾವಣಾ ಲಾಭಕ್ಕಾಗಿ,” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಮೋದಿಯವರ ‘ಪ್ರತಿನಿಧಿ’ಯಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕರೂರು ಭೇಟಿಯನ್ನೂ ಸ್ಟಾಲಿನ್ ಟೀಕಿಸಿದ್ದಾರೆ. ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ನಿಧಿ ಹಂಚಿಕೆ ವಿವಾದದ ನಡುವೆಯೇ ಈ ಭೇಟಿ ನಡೆದಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಬಿಜೆಪಿ ನಿಯೋಗದ ಭೇಟಿ ಮತ್ತು ಆರೋಪ
ನಟಿ ಹೇಮಮಾಲಿನಿ ನೇತೃತ್ವದ ಬಿಜೆಪಿ ಸಂಸದರ ನಿಯೋಗವು ಮಂಗಳವಾರ ಕರೂರಿಗೆ ಭೇಟಿ ನೀಡಿ, ಸಂತ್ರಸ್ತರ ಕುಟುಂಬಗಳನ್ನು ಮತ್ತು ಗಾಯಾಳುಗಳನ್ನು ಭೇಟಿ ಮಾಡಿತ್ತು. “ವಿಜಯ್ ಅವರಂತಹ ಸ್ಟಾರ್ ನಟನ ಕಾರ್ಯಕ್ರಮಕ್ಕೆ ಇಂತಹ ಸಣ್ಣ ಜಾಗವನ್ನು ನೀಡಿರುವುದು ಅನ್ಯಾಯ. ದೊಡ್ಡ ಮೈದಾನವನ್ನು ನೀಡಿದ್ದರೆ ಈ ದುರಂತವನ್ನು ತಪ್ಪಿಸಬಹುದಿತ್ತು,” ಎಂದು ಹೇಮಮಾಲಿನಿ ಸ್ಟಾಲಿನ್ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು.
ಆರೋಪ-ಪ್ರತ್ಯಾರೋಪಗಳ ಸುರಿಮಳೆ
ದುರಂತದ ನಂತರ ಆಡಳಿತಾರೂಢ ಡಿಎಂಕೆ ಮತ್ತು ವಿಜಯ್ ಅವರ ಟಿವಿಕೆ ಪಕ್ಷದ ನಡುವೆ ಆರೋಪ-ಪ್ರತ್ಯಾರೋಪಗಳು ಹೆಚ್ಚಾಗಿವೆ. ಜನಸಂದಣಿ ಹೆಚ್ಚಾಗುತ್ತಿರುವ ಬಗ್ಗೆ ಪೊಲೀಸರು ನೀಡಿದ ಎಚ್ಚರಿಕೆಯನ್ನು ಟಿವಿಕೆ ಪಕ್ಷದ ಸಂಘಟಕರು ನಿರ್ಲಕ್ಷಿಸಿದ್ದಾರೆ ಎಂದು ಡಿಎಂಕೆ ಆರೋಪಿಸಿದೆ. ಇನ್ನೊಂದೆಡೆ, ಚುನಾವಣೆಗೆ ಮುನ್ನ ತಮ್ಮನ್ನು ತೊಂದರೆಗೆ ಸಿಲುಕಿಸಲು ಡಿಎಂಕೆ ನಡೆಸಿದ ‘ಪಿತೂರಿ’ ಇದು ಎಂದು ಟಿವಿಕೆ ದೂರಿದೆ. ನಟ ವಿಜಯ್ ಅವರು, ಸ್ಟಾಲಿನ್ ‘ಪ್ರತೀಕಾರದ ರಾಜಕೀಯ’ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನ್ಯಾಯಾಲಯದ ಮೊರೆ ಹೊದ ಟಿವಿಕೆ
ಈ ಮಧ್ಯೆ, ವಿಜಯ್ ಅವರ ಟಿವಿಕೆ ಪಕ್ಷವು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ. ಕಾಲ್ತುಳಿತದ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಮತ್ತು ಮೃತರ ಕುಟುಂಬಗಳನ್ನು ಭೇಟಿ ಮಾಡಲು ತಮಗೆ ತಡೆಯೊಡ್ಡದಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದೆ.



















