ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆಗೆ (Waqf Bill) ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿದೆ. ದೇಶಾದ್ಯಂತ ಮುಸ್ಲಿಂ ಸಂಘಟನೆಗಳು ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸಿವೆ. ಪ್ರತಿಪಕ್ಷಗಳು ಕೂಡ ಮಸೂದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಇದರ ಬೆನ್ನಲ್ಲೇ, ಮಸೂದೆಗೆ ಸಂಬಂಧಿಸಿದಂತೆ ಬಿಜೆಪಿಯು ಸ್ಪಷ್ಟನೆ ನೀಡಿದೆ. “ವಕ್ಫ್ ಮಸೂದೆಯಿಂದ ಮಸೀದಿಗಳಿಗೆ ಯಾವುದೇ ಧಕ್ಕೆಯಾಗುವುದಿಲ್ಲ” ಎಂದು ಕೇಂದ್ರದ ಮಾಜಿ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ವಕ್ಫ್ ತಿದ್ದುಪಡಿ ಮಸೂದೆಯು ಕಾಯ್ದೆಯಾಗಿ ಜಾರಿಯಾದ ಬಳಿಕ ದೇಶದ ಯಾವುದೇ ಮಸೀದಿ, ಪೂಜಾ ಸ್ಥಳ ಅಥವಾ ಕಬರಸ್ತಾನ್ (ಮುಸ್ಲಿಮರ ಸ್ಮಶಾನ)ಗಳನ್ನು ಸರಕಾರ ಮುಟ್ಟುವುದಿಲ್ಲ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿಅಂಗೀಕಾರಗೊಂಡಿರುವ ವಕ್ಫ್ ಮಸೂದೆಯು ಮುಸ್ಲಿಂ ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತದೆ. ಮಂಡಳಿಯ ವ್ಯವಹಾರಗಳ ಬಗ್ಗೆ ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ವಕ್ಫ್ ಮಂಡಳಿಯ ಉದ್ದೇಶವನ್ನು ವ್ಯವಸ್ಥಾಪಕರಾಗಿರುವವರು ಸರಿಯಾದ ರೀತಿಯಲ್ಲಿ ಕಾರ್ಯಗತಗೊಳಿಸುತ್ತಿದ್ದಾರೆಯೇ ಇಲ್ಲವೇ ಎಂಬುದಷ್ಟೇ ತಿದ್ದುಪಡಿಯಿಂದ ಸ್ಪಷ್ಟವಾಗಲಿದೆ. ವಕ್ಫ್ ಧಾರ್ಮಿಕ ಸಂಸ್ಥೆಯಲ್ಲ. ಅದು ಕಾನೂನುಬದ್ಧ ಅಥವಾ ಶಾಸನಬದ್ಧ ಸಂಸ್ಥೆಯಾಗಿದೆ. ಇತರ ಆಸ್ತಿಯ ಮೇಲೆ ಅವರಿಗೆ ಯಾವುದೇ ಹಕ್ಕುಗಳಿಲ್ಲ ಎಂದಿದ್ದಾರೆ.
ಮಸೂದೆಯು ಮುಸ್ಲಿಂ ಮಹಿಳೆಯರಿಗೆ ಸಬಲೀಕರಣ ನೀಡುತ್ತದೆ. ವಿಧವೆಯರು ಮತ್ತು ಶೋಷಣೆಗೆ ಒಳಗಾದ ಜನತೆಗೆ ಸಹಕಾರಿಯಾಗಿದೆ. ನಾನು ಜನಿಸಿದ ಪಾಟ್ನಾದ ಡಾಕ್ ಬಂಗಲೆ ಬಳಿಯ ಪ್ರದೇಶಗಳಲ್ಲಿಸಾಕಷ್ಟು ವಕ್ಫ್ ಭೂಮಿ ಇದೆ. ಆದರೆ ಅಲ್ಲಿ ಪಂಚತಾರಾ ಹೋಟೆಲ್ಗಳು ಮತ್ತು ಶೋ ರೂಂಗಳು ತಲೆ ಎತ್ತಿವೆ. ಅದರ ಬದಲಾಗಿ ಆಸ್ಪತ್ರೆಗಳು, ವಿಶ್ವವಿದ್ಯಾಲಯಗಳು ಮತ್ತು ತರಬೇತಿ ಕೇಂದ್ರಗಳನ್ನು ನಿರ್ಮಿಸಿದ್ದರೆ ವಕ್ಫ್ ಮಂಡಳಿಗಳಿಗೆ ಇರುವ ಸಾಮಾಜಿಕ ಕಳಕಳಿಗೆ ಸ್ಪಷ್ಟ ನಿದರ್ಶನವಾಗಿರುತ್ತಿತ್ತು ಎಂದು ವಿವರಿಸಿದ್ದಾರೆ.