ನವದೆಹಲಿ : ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವ ಕೇರಳ ರಾಜ್ಯದ ಹೆಸರನ್ನು ‘ಕೇರಳಂ‘ ಎಂದು ಅಧಿಕೃತವಾಗಿ ಬದಲಾಯಿಸುವ ಮಹತ್ವದ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ರಾಜ್ಯದ ಅಧಿಕೃತ ದಾಖಲೆಗಳಲ್ಲಿ ಹಾಗೂ ಎಲ್ಲಾ ಭಾಷೆಗಳಲ್ಲಿ ಹೆಸರು ಬದಲಾಯಿಸುವಂತೆ ಕೋರಿ ಕೇರಳ ವಿಧಾನಸಭೆಯು ಈ ಹಿಂದೆಯೇ ನಿರ್ಣಯವನ್ನು ಅಂಗೀಕರಿಸಿದ್ದು, ಇದೀಗ ಕೇಂದ್ರ ಸರ್ಕಾರದ ಅಂತಿಮ ಮುದ್ರೆ ಬಿದ್ದಿದೆ.

ಕೇರಳದಲ್ಲಿ ಮೇ ತಿಂಗಳಿಗೂ ಮುನ್ನ 140 ಸದಸ್ಯ ಬಲದ ವಿಧಾನಸಭೆಗೆ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಭಾರತೀಯ ಚುನಾವಣಾ ಆಯೋಗವು ಈವರೆಗೆ ಅಧಿಕೃತ ದಿನಾಂಕವನ್ನು ಪ್ರಕಟಿಸದಿದ್ದರೂ, ಚುನಾವಣಾ ಕಾವು ಈಗಾಗಲೇ ರಂಗೇರಿದೆ. ಈ ಮಹತ್ವದ ಘಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೂತನ ಕಚೇರಿ ‘ಸೇವಾ ತೀರ್ಥ’ದಲ್ಲಿ ನಡೆಯುತ್ತಿರುವ ಮೊದಲ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಹೊರ ಬಿದ್ದಿದೆ.

ಕೇರಳದ ಹೆಸರನ್ನು ಬದಲಾಯಿಸುವ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು 2024ರಲ್ಲೇ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದರು. ದೇಶದ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸಲಾದ ಎಲ್ಲಾ ಭಾಷೆಗಳಲ್ಲಿ ದಕ್ಷಿಣದ ಈ ರಾಜ್ಯದ ಹೆಸರನ್ನು “ಕೇರಳ” ದಿಂದ “ಕೇರಳಂ” ಎಂದು ಬದಲಾಯಿಸುವಂತೆ ಆಗ್ರಹಿಸಲಾಗಿತ್ತು. ಆದರೆ, ಈ ಮೊದಲ ನಿರ್ಣಯವನ್ನು ಪರಿಶೀಲಿಸಿದ ಕೇಂದ್ರ ಗೃಹ ಸಚಿವಾಲಯವು ಕೆಲವು ತಾಂತ್ರಿಕ ಬದಲಾವಣೆಗಳನ್ನು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ತಿದ್ದುಪಡಿಗಳೊಂದಿಗೆ ಜೂನ್ 25, 2024ರಂದು ರಾಜ್ಯ ವಿಧಾನಸಭೆಯು ಎರಡನೇ ಬಾರಿಗೆ ಈ ನಿರ್ಣಯವನ್ನು ಮಂಡಿಸಿ ಅಂಗೀಕರಿಸಿತ್ತು.
ಸಾಂಸ್ಕೃತಿಕ ಅಸ್ಮಿತೆಯ ಪ್ರತಿಪಾದನೆ
ಮಲಯಾಳಂ ಭಾಷೆಯಲ್ಲಿ ರಾಜ್ಯವನ್ನು ‘ಕೇರಳಂ’ ಎಂದೇ ಕರೆಯಲಾಗುತ್ತದೆ ಎನ್ನುವುದು ರಾಜ್ಯ ಸರ್ಕಾರದ ಪ್ರಮುಖ ವಾದವಾಗಿದೆ. ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಮಲಯಾಳಂ ಮಾತನಾಡುವ ಸಮುದಾಯಗಳಿಗಾಗಿ ಅಖಂಡ ‘ಕೇರಳಂ’ ರಾಜ್ಯವನ್ನು ರಚಿಸುವ ಬೇಡಿಕೆ ಇತ್ತು ಎಂಬುದನ್ನು ಮುಖ್ಯಮಂತ್ರಿಗಳು ಒತ್ತಿ ಹೇಳಿದ್ದಾರೆ. ಸಂವಿಧಾನದ ಒಂದನೇ ಪರಿಚ್ಛೇದದಲ್ಲಿ ರಾಜ್ಯದ ಹೆಸರನ್ನು ಕೇವಲ ‘ಕೇರಳ’ ಎಂದು ದಾಖಲಿಸಲಾಗಿದೆ. ಹೀಗಾಗಿ ಸಂವಿಧಾನದ 3ನೇ ವಿಧಿಯ ಅಡಿಯಲ್ಲಿ ಇದನ್ನು ‘ಕೇರಳಂ’ ಎಂದು ತಿದ್ದುಪಡಿ ಮಾಡಲು ಕೇಂದ್ರವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪಿಣರಾಯಿ ವಿಜಯನ್ ಈ ಹಿಂದೆ ಪ್ರತಿಪಾದಿಸಿದ್ದರು. ಇದೀಗ ಈ ದಶಕದ ಬೇಡಿಕೆಗೆ ಅಧಿಕೃತ ಮಾನ್ಯತೆ ಸಿಕ್ಕಂತಾಗಿದೆ.
ಇದನ್ನೂ ಓದಿ : ಶಾಲಾ ಮಕ್ಕಳು ಓಡಾಡುವ ಸ್ಥಳದಲ್ಲೇ ಪುಂಡರ ವೀಲ್ಹಿಂಗ್ ಹುಚ್ಚಾಟ



















