2024-25ನೇ ಸಾಲಿನ ಬಜೆಟ್ ನಲ್ಲಿ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ರಕ್ಷಣಾ ವಲಯಕ್ಕೆ ಬರೋಬ್ಬರಿ 6.81 ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದರು. ಹಾಗೆ ನೋಡಿದರೆ, ಭಾರತದ ಇತಿಹಾಸದಲ್ಲೇ ಇಷ್ಟು ದೊಡ್ಡ ಮೊತ್ತವನ್ನು ರಕ್ಷಣಾ ವಿಭಾಗಕ್ಕೆ ನೀಡಿದ ದಾಖಲೆಗಳಿಲ್ಲ. ಸೇನೆ ಮತ್ತು ಯೋಧರ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಬಹುಪಾಲು ಬಜೆಟ್ ಅನುದಾನವನ್ನು ಬಳಸಿಕೊಳ್ಳಲಾಗುತ್ತಿತ್ತು. ಆದರೀಗ ಕಾಲ ಬದಲಾಗಿದೆ. ಕಾಲ್ಕೆರೆದು ಜಗಳಕ್ಕೆ ಬಂದ ಪಾಕಿಗಳ ವಿರುದ್ಧ ಸಮರ ಸಾರಿಯಾಗಿದೆ. ಭಾರತದ ಪ್ರತೀಕಾರದ ಬಿಲ್ಲಿನಿಂದ ಸಿಡಿದ ಬಾಣವೀಗ ಪಾಕ್ ಎದೆಗೆ ನಾಟಿಯಾಗಿದೆ. ಯಾವ ಸಮಯದಲ್ಲಾದರೂ ಪಾಕ್ ಮತ್ತೆ ಕ್ಯಾತೆ ಶುರುಮಾಡಬಹುದು. ಹೀಗಾಗಿ ಭಾರತೀಯ ಸೇನೆಯನ್ನು ಮತ್ತಷ್ಟು ಶಕ್ತಗೊಳಿಸುವ ಸಂಕಲ್ಪ ಮಾಡಲಾಗಿದೆ. ಈ ನಿಟ್ಟಿನಲ್ಲೇ ಮೋದಿ ಸರ್ಕಾರ ಹೆಚ್ಚುವರಿ 50 ಸಾವಿರ ಕೋಟಿ ಅನುದಾನಕ್ಕೆ ಸಮ್ಮತಿಸಿದೆ.
ರಕ್ಷಣಾ ವಲಯಕ್ಕೆ ಐತಿಹಾಸಿಕ 7 ಲಕ್ಷ ಕೋಟಿ ಮೀಸಲು
ಫೆಬ್ರವರಿಯಲ್ಲಿ ಬಜೆಟ್ ಮಂಡಿಸಿದ್ದ ನಿರ್ಮಲಾ ಸೀತಾರಾಮನ್ ಅಂದು 6.81 ಲಕ್ಷ ಕೋಟಿಗಳನ್ನು ದೇಶದ ರಕ್ಷಣಗೆ ಮೀಸಲಿಟ್ಟಿದ್ದರು. ಆದರೆ, ಯಾವಾಗ ಆಪರೇಷನ್ ಸಿಂಧೂರ ಹೆಸರಲ್ಲಿ ಭಾರತ ಪ್ರತೀಕಾರದ ಸಮರ ಸಾರಿತೋ, ದೇಶದ ನೆತ್ತಿಯ ಮೇಲೆ ಯುದ್ಧದ ಕಾರ್ಮೋಡ ಆವರಿಸುವಂತೆ ಮಾಡಿದೆ. ಪಾಕಿಸ್ತಾನದ ಬೆನ್ನಿಗೆ ನಿಂತಿರುವ ಟರ್ಕಿ, ಚೀನಾ ಕುಮ್ಮಕ್ಕು ನೀಡಿದರೆ ಪಾಕ್ ಮತ್ತೆ ಕಿರಿಕ್ ಮಾಡಬಹುದು. ಹೀಗಾಗಿ ಭಾರತೀಯ ಸೇನೆಯನ್ನು ಹಿಂದೆಂದಿಗಿಂತಲೂ ಹೆಚ್ಚಿನ ಬಲಶಾಲಿಯಾಗಿಸುವ ನಿರ್ಧಾರವನ್ನು ಮೋದಿ ಕೈಗೊಂಡಿದ್ದಾರೆ. ಹೀಗಾಗಿಯೇ 50 ಸಾವಿರ ಕೋಟಿಗಳ ಹೆಚ್ಚುವರಿ ಅನುದಾನ ಮಂಜೂರಾಗಿದೆ. ಈ ಹಣದಲ್ಲಿ ಡಿಆರ್ ಡಿಒನ ಸಂಶೋಧನೆಗೆ ಪಾಲು ನೀಡಲಾಗ್ತಿದೆ. ಅದ್ರಲ್ಲೂ ಡ್ರೋನ್ ಗಳನ್ನು ಹೊಡೆದುರುಳಿಸುವ ಶಕ್ತಿ ಹೊಂದಿರುವ ದೇಶಿ ನಿರ್ಮಿತ ಭಾರ್ಗವಾಸ್ತ್ರದ ಬಲವರ್ಧನೆಗೆ ಹೆಚ್ಚಿನ ನಿಧಿ ಬಳಕೆಯಾಗ್ತಿದೆ. ಮಿತ್ರ ರಾಷ್ಟ್ರಗಳಿಂದ ಸೇನೆಗೆ ನೂತನ ಫೈಟರ್ ಜೆಟ್ ಖರೀದಿ, ನೌಕಾ ಪಡೆಯ ಆತ್ಮ ಜಲಾಂತರ್ಗಾಮಿ ನೌಕೆಗಳ ಖರೀದಿ ಸೇರಿದಂತೆ, ಯೋಧರಿಗೆ ಅಗತ್ಯವಿರುವ ಮದ್ದು ಗುಂಡುಗಳ ದಾಸ್ತಾನನ್ನು ಹೆಚ್ಚಿಸಲು ಬಳಕೆ ಮಾಡಲು ತೀರ್ಮಾನಿಸಲಾಗಿದೆ.
ಚಳಿಗಾಲದ ಅಧಿವೇಶನದಲ್ಲೇ ಪೂರಕ ಬಜೆಟ್ ಗೆ ಅನುಮೋದನೆ
ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರದ ಗದ್ದುಗೆ ಏರಿದಾಗಿನಿಂದಲೂ ರಕ್ಷಣಾ ವಲಯವನ್ನು ಸರ್ವ ಶಕ್ತವಾಗಿಸಲಾಗುತ್ತಿದೆ. ಬಜೆಟ್ ನಲ್ಲಿ ದೊಡ್ಡ ಪಾಲನ್ನೇ ರಕ್ಷಣಾ ವಲಯಕ್ಕೆ ಮೀಸಲಿಡಲಾಗುತ್ತಿದೆ. 2014-15ರ ಸಾಲಿನಲ್ಲಿ 2.29 ಲಕ್ಷ ಕೋಟಿ ನೀಡಲಾಗಿತ್ತು. ದೇಶದ ಬಜೆಟ್ ನಲ್ಲಿ ಈಗಿನ ಲೆಕ್ಕ ನೋಡಿದ್ರೆ ಶೇಕಡಾ 13ರಷ್ಟನ್ನು ರಕ್ಷಣೆಗೆ ಮೀಸಲಿಡಲಾಗಿದೆ. ಇನ್ನು ಯುಪಿಎ ಅವಧಿ ಹೋಲಿಸಿದ್ರೆ ಈ ಮೊತ್ತವೇ ಬರೋಬ್ಬರಿ 3 ಪಟ್ಟು ಹೆಚ್ಚು ಮಾಡಲಾಗಿದೆ.ಇನ್ನು 2023-24ನೇ ಸಾಲಿಗೆ ಹೋಲಿಸಿದ್ರೆ ಶೇಕಡಾ 9.5ರಷ್ಟು ಅನುದಾನವನ್ನು ಏರಿಸಲಾಗಿದೆ. ಈ ಮೂಲಕ ಭಾರತ ವಿಶ್ವದ ಅತಿ ಸರ್ವಶಕ್ತ ಸೇನೆಯಾಗಿ ಹೊರ ಹೊಮ್ಮುವತ್ತ ದಾಪುಗಾಲು ಇಡ್ತಿದೆ.