ಢಾಕಾ: ಬಾಂಗ್ಲಾದೇಶದಲ್ಲಿ ಬಂಗಬಂಧು ಶೇಖ್ ಮುಜೀಬುರ್ ರೆಹಮಾನ್ ಅವರ ಪರಂಪರೆಯನ್ನು ಇತಿಹಾಸದಿಂದ ಅಳಿಸಿ ಹಾಕಲು ಎಲ್ಲ ರೀತಿಯ ಪ್ರಯತ್ನಗಳನ್ನೂ ನಡೆಸುತ್ತಿರುವ ಮೊಹಮ್ಮದ್ ಯೂನುಸ್ ನೇತೃತ್ವದ ಬಾಂಗ್ಲಾ ಮಧ್ಯಂತರ ಸರ್ಕಾರ ಇದೀಗ ಬಾಂಗ್ಲಾದಲ್ಲಿ ಹೊಸದಾಗಿ ಬಿಡುಗಡೆಯಾದ 20 ಟಾಕಾದ ನೋಟಿನ ಮೇಲೆ 18ನೇ ಶತಮಾನದ ಕಂತಾಜಿಯ ಹಿಂದೂ ದೇವಾಲಯದ ಚಿತ್ರವನ್ನು ಮುದ್ರಿಸಿದೆ.
ಈ ಹಿಂದೆ ಇದ್ದ ದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಭಾವಚಿತ್ರವನ್ನು ನೋಟಿನಿಂದ ತೆಗೆದುಹಾಕಲಾಗಿದೆ. ಈ ದೇವಾಲಯವು 2015ರಲ್ಲಿ ಇಸ್ಲಾಮಿಕ್ ತೀವ್ರವಾದಿಗಳಿಂದ ಬಾಂಬ್ ದಾಳಿಗೆ ಗುರಿಯಾಗಿತ್ತು ಮತ್ತು 2024ರಲ್ಲಿ ದೇವಾಲಯದ ಆವರಣದಲ್ಲಿ ಮಸೀದಿಯ ನಿರ್ಮಾಣದಿಂದಾಗಿ ಸ್ಥಳೀಯ ಹಿಂದೂ ಸಮುದಾಯದಿಂದ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು.
ಕಂತಾಜಿಯ ದೇವಾಲಯ, ದಿನಾಜ್ಪುರ್ನ ಕಂತಾನಗರ ಗ್ರಾಮದಲ್ಲಿ ನೆಲೆಗೊಂಡಿದ್ದು, ಭಗವಾನ್ ಕೃಷ್ಣ ಮತ್ತು ರುಕ್ಮಿಣಿಗೆ ಸಮರ್ಪಿತವಾದ 18ನೇ ಶತಮಾನದ ಟೆರಾಕೋಟಾ ವಾಸ್ತುಶಿಲ್ಪದ ಅದ್ಭುತ ಉದಾಹರಣೆಯಾಗಿದೆ. ಈ ದೇವಾಲಯವನ್ನು ಮಹಾರಾಜ ಪ್ರಾಣನಾಥ್ 1704ರಲ್ಲಿ ನಿರ್ಮಾಣ ಆರಂಭಿಸಿದ್ದು, ಅವರ ಮಗ ರಾಮನಾಥ್ 1752ರಲ್ಲಿ ನಿರ್ಮಾಣ ಪೂರ್ಣಗೊಳಿಸಿದ್ದರು. ಇದು ಬಾಂಗ್ಲಾದೇಶದಲ್ಲಿ ಅತಿ ಹೆಚ್ಚು ಜನರು ಭೇಟಿ ನೀಡುವಂತಹ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ.
ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರವು ಮುಜಿಬುರ್ ರೆಹಮಾನ್ ಅವರ ಅವಾಮಿ ಲೀಗ್ನ ಚಿಹ್ನೆಗಳನ್ನು ತೆಗೆದುಹಾಕುವ ಕಾರ್ಯಾಚರಣೆಯ ಭಾಗವಾಗಿ ಈ ಬದಲಾವಣೆಯನ್ನು ತಂದಿದೆ. ಹೊಸ 20 ಟಾಕಾ ನೋಟಿನ ಒಂದು ಬದಿಯಲ್ಲಿ ಕಂತಾಜಿಯ ದೇವಾಲಯದ ಚಿತ್ರವಿದ್ದರೆ, ಇನ್ನೊಂದು ಬದಿಯಲ್ಲಿ ಪಹರ್ಪುರ್ ಬೌದ್ಧ ವಿಹಾರದ ಚಿತ್ರವಿದೆ. ಈ ನೋಟು ಜೂನ್ 1, 2025ರಂದು ಬಿಡುಗಡೆಯಾಗಿದೆ.
2024ರಲ್ಲಿ, ಕಂತಾಜಿಯ ದೇವಾಲಯದ ಆವರಣದಲ್ಲಿ ಮಸೀದಿಯ ನಿರ್ಮಾಣಕ್ಕೆ ದಿನಾಜ್ಪುರ್-1 ಕ್ಷೇತ್ರದ ಸಂಸದ ಜಕಾರಿಯಾ ಜಕಾ ಅವರು ಶಂಕುಸ್ಥಾಪನೆ ಮಾಡಿದ್ದರು. ಇದು ಸ್ಥಳೀಯ ಹಿಂದೂ ಸಮುದಾಯದಿಂದ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಯೂನುಸ್ ಸರ್ಕಾರದ ಧಾರ್ಮಿಕ ವ್ಯವಹಾರಗಳ ಸಲಹೆಗಾರ ಎಎಫ್ಎಂ ಖಾಲಿದ್ ಹೊಸೈನ್, ದೇವಾಲಯದ ಜಾಗವನ್ನು ದೇವಾಲಯಕ್ಕೆ ಬಿಟ್ಟು, ಮಸೀದಿಯ ವಿಸ್ತರಣೆಗೆ ಸರ್ಕಾರಿ ಜಾಗವನ್ನು ಬಳಸಿಕೊಳ್ಳುವಂತೆ ಸೂಚಿಸಿದ್ದರು.
ಈ ಬದಲಾವಣೆಯು ಬಾಂಗ್ಲಾದೇಶದ ರಾಜಕೀಯ ಪಯಣವನ್ನು ಪ್ರತಿಬಿಂಬಿಸುತ್ತದೆ. ಶೇಖ್ ಮುಜಿಬುರ್ ರೆಹಮಾನ್ ಅವರ ಭಾವಚಿತ್ರವು 2012ರಲ್ಲಿ 20 ಟಾಕಾದ ನೋಟಿನಲ್ಲಿ ಸೇರಿಸಲ್ಪಟ್ಟಿತ್ತು. ಆದರೆ, ಈಗ ಯೂನುಸ್ ನೇತೃತ್ವದ ಸರ್ಕಾರವು ದೇಶದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಚಿಹ್ನೆಗಳನ್ನು ನೋಟಿನಲ್ಲಿ ಮುದ್ರಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.