ಗುವಾಹಟಿ : ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ತಮ್ಮ ಕರಾರುವಾಕ್ ಬೌಲಿಂಗ್ ದಾಳಿಯ ಮೂಲಕ ಎದುರಾಳಿಗಳನ್ನು ಕಂಗೆಡಿಸಿದ ಟೀಮ್ ಇಂಡಿಯಾದ ಪ್ರಮುಖ ಅಸ್ತ್ರ ಜಸ್ಪ್ರೀತ್ ಬೂಮ್ರಾ, ತಂಡದಲ್ಲಿನ ತಮ್ಮ ಬದಲಾದ ಪಾತ್ರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತಂಡದ ತಂತ್ರಗಾರಿಕೆಗೆ ತಕ್ಕಂತೆ ಯಾವುದೇ ಹಂತದಲ್ಲಿ ಬೌಲಿಂಗ್ ಮಾಡಲು ತಾವು ಸದಾ ಸಿದ್ಧ ಎಂದು ಅವರು ಘೋಷಿಸಿದ್ದಾರೆ.
ಭಾನುವಾರ ಬರ್ಸಾಪರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೂಮ್ರಾ, ಕೇವಲ 17 ರನ್ ನೀಡಿ 3 ಪ್ರಮುಖ ವಿಕೆಟ್ ಕಬಳಿಸುವ ಮೂಲಕ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು. ಈ ಪಂದ್ಯದಲ್ಲಿ ಬೂಮ್ರಾ ಅವರನ್ನು ಬಳಸಿಕೊಂಡ ರೀತಿ ಭಾರತದ ಬದಲಾದ ರಣತಂತ್ರಕ್ಕೆ ಸಾಕ್ಷಿಯಂತಿತ್ತು.
ಬದಲಾದ ಬೌಲಿಂಗ್ ಕ್ರಮಾಂಕ
ಸಾಮಾನ್ಯವಾಗಿ ಡೆತ್ ಓವರ್ ಸ್ಪೆಷಲಿಸ್ಟ್ ಎಂದು ಗುರುತಿಸಿಕೊಂಡಿರುವ ಬೂಮ್ರಾ, ಗುವಾಹಟಿಯಲ್ಲಿ ಪವರ್ಪ್ಲೇನ ಕೊನೆಯ ಓವರ್, ನಂತರ ಇನಿಂಗ್ಸ್ನ ಮಧ್ಯಭಾಗದಲ್ಲಿ (11ನೇ ಓವರ್) ಹಾಗೂ ಅಂತಿಮವಾಗಿ ಡೆತ್ ಓವರ್ಗಳಲ್ಲಿ ಬೌಲಿಂಗ್ ಮಾಡಿದರು. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಈ ‘ಫ್ಲೆಕ್ಸಿಬಲ್’ (ಹೊಂದಿಕೊಳ್ಳುವ) ತಂತ್ರಗಾರಿಕೆ ಫಲ ನೀಡಿದೆ. 2025ರ ಏಷ್ಯಾಕಪ್ನಲ್ಲಿಯೂ ಬೂಮ್ರಾ ಪವರ್ಪ್ಲೇನಲ್ಲೇ ತಮ್ಮ ಕೋಟಾದ 3 ಓವರ್ಗಳನ್ನು ಮುಗಿಸಿ ಯಶಸ್ವಿಯಾಗಿದ್ದರು.
“ತಂಡದ ಗೆಲುವೇ ಮುಖ್ಯ”
ಪಂದ್ಯದ ನಂತರ ಮಾತನಾಡಿದ ಬೂಮ್ರಾ, “ತಂಡಕ್ಕೆ ನನ್ನ ಕೊಡುಗೆ ನೀಡುವುದಷ್ಟೇ ನನ್ನ ಗುರಿ. ನಾಯಕ ನನಗೆ ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡಲು ಹೇಳಿದರೆ ಅದಕ್ಕೂ ಸಿದ್ಧ, ಅಥವಾ ಕೊನೆಯ ಓವರ್ಗಳಲ್ಲಿ ಬೌಲ್ ಮಾಡಲು ಹೇಳಿದರೂ ಸಂತೋಷದಿಂದ ಮಾಡುತ್ತೇನೆ. ಏಷ್ಯಾಕಪ್ನಲ್ಲಿ ಪವರ್ಪ್ಲೇನಲ್ಲಿ ಸತತವಾಗಿ ಬೌಲಿಂಗ್ ಮಾಡಿದ್ದು ನನಗೆ ಹೊಸ ಅನುಭವವಾಗಿತ್ತು. ತಂಡದ ಹಿತದೃಷ್ಟಿಯಿಂದ ನಾವು ಹೊಂದಿಕೊಳ್ಳಬೇಕಾಗುತ್ತದೆ,” ಎಂದು ತಿಳಿಸಿದ್ದಾರೆ.
ಕಿವೀಸ್ ಪಡೆಯನ್ನು ಕಟ್ಟಿಹಾಕಿದ ಬೂಮ್ರಾ
ಗುವಾಹಟಿಯಲ್ಲಿ ಬೂಮ್ರಾ ತಮ್ಮ ಮೊದಲ ಎಸೆತದಲ್ಲೇ ಟಿಮ್ ಸೀಫರ್ಟ್ ಅವರನ್ನು ಔಟ್ ಮಾಡುವ ಮೂಲಕ ಕಿವೀಸ್ ಪತನಕ್ಕೆ ನಾಂದಿ ಹಾಡಿದರು. ನಂತರ ಅಪಾಯಕಾರಿ ಕೈಲ್ ಜೇಮಿಸನ್ ಅವರ ವಿಕೆಟ್ ಹಾರಿಸಿದ ಅವರು, ಸೆಟ್ ಆಗಿದ್ದ ಮಿಚೆಲ್ ಸ್ಯಾಂಟ್ನರ್ ಅವರನ್ನೂ ಪೆವಿಲಿಯನ್ಗೆ ಅಟ್ಟಿದರು. ಯಾರ್ಕರ್, ಸ್ಲೋವರ್ ಬಾಲ್ ಮತ್ತು ಕಟರ್ಗಳ ಮಿಶ್ರಣದ ಮೂಲಕ ಕಿವೀಸ್ ಬ್ಯಾಟರ್ಗಳಿಗೆ ರನ್ ಗಳಿಸಲು ಬೂಮ್ರಾ ಅವಕಾಶವನ್ನೇ ನೀಡಲಿಲ್ಲ.
ಇದನ್ನೂ ಓದಿ : ತುಮಕೂರು ಬಳಿ ಭೀಕರ ಅಪಘಾತ | ಮೂವರು ಟೆಕ್ಕಿಗಳು ಸ್ಥಳದಲ್ಲೇ ಸಾವು!


















