ನವದೆಹಲಿ : ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಸಂಘರ್ಷದ ಪರಿಣಾಮವಾಗಿ ದೇಶಾದ್ಯಂತ ವಾಣಿಜ್ಯ ಎಲ್ಪಿಜಿ (LPG) ಸಿಲಿಂಡರ್ಗಳ ಕೊರತೆ ಎದುರಾಗಿದ್ದು, ಇದರ ಬಿಸಿ ಈಗ ರೈಲ್ವೆ ಪ್ರಯಾಣಿಕರಿಗೂ ತಟ್ಟುವ ಆತಂಕ ನಿರ್ಮಾಣವಾಗಿದೆ. ಅಡುಗೆ ಅನಿಲದ ಕೊರತೆಯಿಂದಾಗಿ ರೈಲುಗಳಲ್ಲಿ ಬೇಯಿಸಿದ ಆಹಾರ (ಬಿಸಿ ಊಟ) ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಗಂಭೀರ ಚಿಂತನೆ ನಡೆಸಿದೆ. ಒಂದು ವೇಳೆ ಊಟದ ಸೇವೆ ಸ್ಥಗಿತಗೊಂಡರೆ, ಟಿಕೆಟ್ ಕಾಯ್ದಿರಿಸುವಾಗಲೇ ಮುಂಗಡವಾಗಿ ಊಟ ಬುಕ್ ಮಾಡಿದ ಪ್ರಯಾಣಿಕರಿಗೆ ಹಣ ಮರುಪಾವತಿಸಲು ರೈಲ್ವೆ ಇಲಾಖೆ ಯೋಚಿಸುತ್ತಿದೆ.
ಬೇಸ್ ಕಿಚನ್ಗಳ ಮೇಲೆ ಎಲ್ಪಿಜಿ ಕೊರತೆಯ ಪ್ರಭಾವ
ಸಾಮಾನ್ಯವಾಗಿ ರೈಲುಗಳ ಪ್ಯಾಂಟ್ರಿ ಕಾರ್ಗಳಲ್ಲಿ ಆಹಾರವನ್ನು ಕೇವಲ ಬಿಸಿ ಮಾಡಿ ವಿತರಿಸಲಾಗುತ್ತದೆಯೇ ಹೊರತು, ಅಲ್ಲಿ ಪೂರ್ಣ ಪ್ರಮಾಣದ ಅಡುಗೆ ಮಾಡುವುದಿಲ್ಲ. ಬದಲಾಗಿ ಪ್ರಮುಖ ನಿಲ್ದಾಣಗಳ ‘ಬೇಸ್ ಕಿಚನ್’ಗಳಲ್ಲಿ ಆಹಾರ ತಯಾರಿಸಿ ರೈಲುಗಳಿಗೆ ತುಂಬಲಾಗುತ್ತದೆ. ಇದೀಗ ಈ ಬೇಸ್ ಕಿಚನ್ಗಳಲ್ಲೇ ಎಲ್ಪಿಜಿ ಕೊರತೆ ಎದುರಾಗಿರುವುದರಿಂದ ದೂರದೂರುಗಳಿಗೆ ಸಂಚರಿಸುವ ರೈಲುಗಳ ಪ್ರಯಾಣಿಕರಿಗೆ ಆಹಾರ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.
ಈ ಹಿನ್ನೆಲೆಯಲ್ಲಿ ಮಾರ್ಚ್ 10ರಂದು ತನ್ನ ಎಲ್ಲ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಿರುವ ಐಆರ್ಸಿಟಿಸಿ, ರೈಲ್ವೆ ನಿಲ್ದಾಣಗಳಲ್ಲಿರುವ ಫುಡ್ ಪ್ಲಾಜಾಗಳು, ರಿಫ್ರೆಶ್ಮೆಂಟ್ ರೂಮ್ಗಳು ಹಾಗೂ ‘ಜನ ಆಹಾರ’ ಮಳಿಗೆಗಳಿಗೆ ಎಲ್ಪಿಜಿ ಕೊರತೆಯಾದರೆ ಪರ್ಯಾಯ ಅಡುಗೆ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದೆ. ಪ್ರಯಾಣಿಕರ ಹಸಿವು ನೀಗಿಸಲು ಅನುಕೂಲವಾಗುವಂತೆ ‘ರೆಡಿ ಟು ಈಟ್’ (RTE) ಅಂದರೆ ಸಿದ್ಧ ಆಹಾರಗಳ ದಾಸ್ತಾನನ್ನು ಹೆಚ್ಚಿಸಿಕೊಳ್ಳುವಂತೆಯೂ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಎಲ್ಲಿಯಾದರೂ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾದರೆ ತಕ್ಷಣವೇ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸೂಚಿಸಲಾಗಿದೆ.
ನಿತ್ಯ 17 ಲಕ್ಷ ಊಟ ಪೂರೈಕೆ
ದೇಶಾದ್ಯಂತ ಐಆರ್ಸಿಟಿಸಿ ತನ್ನ ಬೇಸ್ ಕಿಚನ್ಗಳು ಹಾಗೂ ಆನ್ಬೋರ್ಡ್ ಕ್ಯಾಟರಿಂಗ್ ಸೇವೆಗಳ ಮೂಲಕ ಪ್ರತಿದಿನ ಬರೋಬ್ಬರಿ 17 ಲಕ್ಷ ಊಟವನ್ನು ಪೂರೈಸುತ್ತದೆ. ಇಷ್ಟೊಂದು ಬೃಹತ್ ಪ್ರಮಾಣದ ಆಹಾರ ತಯಾರಿಕೆಗೆ ನಿರಂತರ ಇಂಧನ ಪೂರೈಕೆ ಅತ್ಯಗತ್ಯ. ಆದರೆ, ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಹೊರ್ಮುಜ್ ಜಲಸಂಧಿಯ ಮೂಲಕ ನಡೆಯುವ ಹಡಗು ಸಂಚಾರಕ್ಕೆ ಭಾರಿ ಅಡಚಣೆಯಾಗಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಸರ್ಕಾರ ಮಂಗಳವಾರವಷ್ಟೇ ನೈಸರ್ಗಿಕ ಅನಿಲದ ಪಡಿತರ ವ್ಯವಸ್ಥೆಗೆ ಮುಂದಾಗಿದೆ. ಪೈಪ್ಲೈನ್ ಮೂಲಕ ಮನೆಗಳಿಗೆ ಪೂರೈಕೆಯಾಗುವ ಅಡುಗೆ ಅನಿಲ (PNG) ಹಾಗೂ ವಾಹನಗಳಿಗೆ ಬಳಸುವ ಸಿಎನ್ಜಿ (CNG) ಪೂರೈಕೆಗೆ ಮೊದಲ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಇದರ ನೇರ ಪರಿಣಾಮ ವಾಣಿಜ್ಯ ಬಳಕೆಯ ಎಲ್ಪಿಜಿ ಪೂರೈಕೆಯ ಮೇಲಾಗಿದ್ದು, ರೈಲ್ವೆ ಕ್ಯಾಟರಿಂಗ್ ಸೇವೆಗಳು ಅನಿವಾರ್ಯವಾಗಿ ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ : ರಾಜ್ಯ BJP ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ದಿಢೀರ್ ರಾಜೀನಾಮೆ!



















