ಬೆಂಗಳೂರು: ಇಡೀ ದೇಶದಲ್ಲಿ ವೋಟ್ ಚೋರಿ ಆಗಿರುವುದು ಸತ್ಯ. ನರೇಂದ್ರ ಮೋದಿ ಅಕ್ರಮ ಮಾಡಿಯೇ ಚುನಾವಣೆಗಳನ್ನು ಗೆದ್ದಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ಆರೋಪ ಮಾಡಿದ್ದಾರೆ.
ರಾಹುಲ್ ಗಾಂಧಿ ಆರೋಪದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಸಂತೋಷ್ ಲಾಡ್, ಆಳಂದ ಚುನಾವಣೆ ಆಗಿ 5-6 ವರ್ಷ ಆಯಿತು. ಎಸ್ಐಟಿ ಅವರು ಎಲೆಕ್ಷನ್ ಕಮಿಷನ್ಗೆ ಪತ್ರ ಬರೆದಿದ್ದಾರೆ, ಆದರೆ ಇದಕ್ಕೆ ಉತ್ತರ ಕೊಟ್ಟಿಲ್ಲ. ಮೇಲ್ನೋಟದಲ್ಲಿ ಇದು ಸತ್ಯ. ಕರ್ನಾಟಕ ಮಾತ್ರ ಅಲ್ಲ ಒರಿಸ್ಸಾ, ಮಹಾರಾಷ್ಟ್ರದಲ್ಲಿ ಮತಕಳ್ಳತನ ಆಗಿದೆ. ಬಿಹಾರದಲ್ಲಿ 3 ಲಕ್ಷ ಮನೆಗೆ 0 ನಂಬರ್ ಕೊಟ್ಟಿದ್ದಾರೆ. ಮೋದಿ ಹೀಗೆ ಅಕ್ರಮ ಮಾಡಿಯೇ ಚುನಾವಣೆಗಳನ್ನು ಗೆದ್ದಿರುವುದು ಎಂದು ಆರೋಪಿದ್ದಾರೆ.
ರಾಜ್ಯದಲ್ಲಿ ಮತಪಟ್ಟಿ ಪರಿಷ್ಕರಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಪರಿಷ್ಕರಣೆ ಮಾಡಲಿ ಯಾರು ಬೇಡ ಎಂದರು. ಆದರೆ ಬಿಹಾರ ತರಹ ಆಗುವ ಆತಂಕ ಇದೆ. ಎಲೆಕ್ಷನ್ ಕಮಿಷನರ್ ಅವರನ್ನು ಹೇಗೆ ನೇಮಕ ಆಗಬೇಕು ಎಂದು ಇತ್ತು. ಆದರೆ ಬಿಜೆಪಿಯವರು ಆ ನಿಯಮವನ್ನೇ ಬದಲಾವಣೆ ಮಾಡಿದರು. ಎಲೆಕ್ಷನ್ ಕಮಿಷನ್ ರಾಹುಲ್ ಗಾಂಧಿ ಮಾಡಿರುವ ಆರೋಪಕ್ಕೆ ಸರಿಯಾಗಿ ಉತ್ತರ ಕೊಟ್ಟಿಲ್ಲ. ಇವರೆಲ್ಲ ಒಬ್ಬ ಮನುಷ್ಯನನ್ನು ದೇವರು ಮಾಡಿದ್ದಾರೆ. ಈಗ ಇವರದ್ದು ಪಿಕ್ಚರ್ ನೋಡಬೇಕಂತೆ, ತೋರಿಸುತ್ತಾರೆ ನೋಡಿ. ಯಾರಪ್ಪನ ದುಡ್ಡು ಎಲ್ಲಮ್ಮನ ಜಾತ್ರೆ ಅಷ್ಟೇ. ಇವರಿಗೆ ಕೇವಲ ಒಬ್ಬ ವ್ಯಕ್ತಿ ಜನಪ್ರಿಯ ಆಗಬೇಕು ಅಷ್ಟೆ. ಕೊಳ್ಳೆ ಹೊಡೆದು ಹೋಗಬೇಕು ಅಷ್ಟೇ. ಮೋದಿ ಅವರೇ ಪಿಕ್ಚರ್ ನಿಮ್ಮದೆ ಓಡಿಸಿ ಎಂದು ಕಿಡಿಕಾರಿದ್ದಾರೆ.