ಹಾವೇರಿ: ಹಾವೇರಿಯ ಬಸ್ಸಿನಲ್ಲಿ ಡ್ರೈವರ್ ನಮಾಜ್ ಮಾಡಿದ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನಡೆ, ನುಡಿ ನೋಡಿದಾಗ ಹೇಗೆ ಮುಸ್ಲಿಮರ ಓಲೈಕೆ ಮಾಡುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ. ಇದರ ಪ್ರತಿಫಲವಾಗಿಯೇ ಬಸ್ ನಲ್ಲಿ ಚಾಲಕ ನಮಾಜ್ ಮಾಡಿದ್ದಾರೆ.
ಬಸ್ ಹೋಗುವಾಗಲೇ ನಮಾಜ್ ಮಾಡಿದರೆ ಎಲ್ಲರಿಗೂ ಪುಣ್ಯ ಪ್ರಾಪ್ತಿ ಸಿಗುತ್ತಿತ್ತು. ಸಿದ್ದರಾಮಯ್ಯ ಮಾತು ಕೇಳಿ, ವಿಮಾನದಲ್ಲಿ ಪೈಲಟ್ ಹೀಗೆ ಮಾಡಿದ್ರೆ ಗೋವಿಂದ ಎಂದು ವ್ಯಂಗ್ಯವಾಡಿದ್ದಾರೆ.
ಒಬ್ಬ ಮುಖ್ಯಮಂತ್ರಿ ಆಗಿ ಯಾವ ಹಂತದವರೆಗೂ ರಾಜಕಾರಣ ಮಾಡಬಹುದು? ಕೂಡಲೇ ಕ್ರಮ ಅಲ್ಲ, ಕೆಲಸದಿಂದಲೇ ತೆಗೆಯುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಇದು ಅತಿರೇಕಕ್ಕೆ ಹೋಗಲಿದೆ. ಇದನ್ನು ಗಮನಿಸಿದರೆ ಜನರು, ಸರ್ಕಾರದ ಬಗ್ಗೆ ಯೋಚನೆ ಮಾಡುವಂತಾಗಿದೆ. ಹೀಗಾಗಿ ಮತದಾರ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.