ಕೊಲಂಬೊ: ಐಸಿಸಿ ಟಿ20 ವಿಶ್ವಕಪ್ 2026ರ ಕ್ರೀಡಾಕೂಟದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಭರ್ಜರಿ ಜಯ ಸಾಧಿಸಿ ಸೂಪರ್-8 ಹಂತಕ್ಕೆ ಲಗ್ಗೆ ಇಟ್ಟಿದೆ. ಆದರೆ, ಈ ಪಂದ್ಯದ ಫಲಿತಾಂಶಕ್ಕಿಂತ ಹೆಚ್ಚಾಗಿ, ಪಂದ್ಯದ ಅಂತಿಮ ಹಂತದಲ್ಲಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ತೆಗೆದುಕೊಂಡ ಒಂದು ನಿರ್ಧಾರವೀಗ ಕ್ರಿಕೆಟ್ ಜಗತ್ತಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅದುವೇ ‘ಫಿನಿಶರ್’ ಖ್ಯಾತಿಯ ರಿಂಕು ಸಿಂಗ್ ಅವರಿಗೆ ಬೌಲಿಂಗ್ ನೀಡಿದ್ದು.
ಈ ನಡೆ ಪಾಕಿಸ್ತಾನ ತಂಡವನ್ನು ಅವಮಾನಿಸುವ ತಂತ್ರವಾಗಿತ್ತೇ? ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕುರಿತು ಇಂಗ್ಲೆಂಡ್ನ ಮಾಜಿ ಆಟಗಾರರಾದ ಮೊಯೀನ್ ಅಲಿ ಮತ್ತು ರವಿ ಬೋಪಾರ ತಮ್ಮದೇ ಆದ ವಿಶ್ಲೇಷಣೆ ನೀಡಿದ್ದಾರೆ.
ಏನಿದು ವಿವಾದ?
ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 176 ರನ್ಗಳ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ ಬ್ಯಾಟಿಂಗ್ ಕುಸಿತ ಕಂಡಿತು. ಪಂದ್ಯ ಸಂಪೂರ್ಣವಾಗಿ ಭಾರತದ ಹಿಡಿತದಲ್ಲಿದ್ದಾಗ, 17ನೇ ಓವರ್ಅನ್ನು ಸಾಮಾನ್ಯವಾಗಿ ಬೌಲಿಂಗ್ ಮಾಡದ ರಿಂಕು ಸಿಂಗ್ ಅವರಿಗೆ ನೀಡಲಾಯಿತು. ಇದಕ್ಕೂ ಮುನ್ನ ಪಾರ್ಟ್-ಟೈಮ್ ಬೌಲರ್ ತಿಲಕ್ ವರ್ಮಾ ಕೂಡ ಬೌಲ್ ಮಾಡಿ ಶದಾಬ್ ಖಾನ್ ವಿಕೆಟ್ ಪಡೆದಿದ್ದರು. ಪ್ರಮುಖ ಬೌಲರ್ಗಳಿದ್ದರೂ ರಿಂಕುಗೆ ಚೆಂಡು ನೀಡಿದ್ದು ಪಾಕಿಸ್ತಾನದ ಸ್ಥಿತಿಯನ್ನು ಅಣಕಿಸುವಂತಿತ್ತು ಎಂದು ಕೆಲವು ನೆಟ್ಟಿಗರು ವಾದಿಸಿದ್ದರು.
ಮೊಯೀನ್ ಅಲಿ ಮತ್ತು ರವಿ ಬೋಪಾರ ಹೇಳಿದ್ದೇನು?
ಈ ಕುರಿತು ‘ಬಿಯರ್ಡ್ ಬಿಫೋರ್ ವಿಕೆಟ್’ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಇಂಗ್ಲೆಂಡ್ ಮಾಜಿ ಆಲ್ ರೌಂಡರ್ ಮೊಯೀನ್ ಅಲಿ, “ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅದು ಸ್ವಲ್ಪ ಮಟ್ಟಿಗೆ ತಮಾಷೆಯಂತೆ (Joke) ಕಂಡಿತು. ಆದರೆ ತಾಂತ್ರಿಕವಾಗಿ ನೋಡುವುದಾದರೆ, ಪಂದ್ಯದ ಫಲಿತಾಂಶ ನಿರ್ಧಾರವಾಗಿತ್ತು. ಆ ಹಂತದಲ್ಲಿ ಜಸ್ಪ್ರೀತ್ ಬುಮ್ರಾ ಅವರಂತಹ ಪ್ರಮುಖ ಬೌಲರ್ಗಳನ್ನು ಮತ್ತೆ ದಾಳಿಗೆ ಇಳಿಸುವ ಅಗತ್ಯವಿರಲಿಲ್ಲ. ನಾಯಕ ತಮ್ಮ ಪ್ರಮುಖ ಬೌಲರ್ಗಳ ಶಕ್ತಿಯನ್ನು ಉಳಿಸಲು ಈ ನಿರ್ಧಾರ ತೆಗೆದುಕೊಂಡಿರಬಹುದು,” ಎಂದು ಅಭಿಪ್ರಾಯಪಟ್ಟಿದ್ದಾರೆ.
ರವಿ ಬೋಪಾರ ಕೂಡ ಇದಕ್ಕೆ ದನಿಗೂಡಿಸಿದ್ದು, “ಭಾರತ ತಂಡ ಪಂದ್ಯದಲ್ಲಿ ಭಾರಿ ಮುನ್ನಡೆ ಸಾಧಿಸಿತ್ತು. ಹೀಗಾಗಿ ರಿಂಕು ಸಿಂಗ್ಗೆ ಬೌಲಿಂಗ್ ನೀಡುವ ಪ್ರಯೋಗಕ್ಕೆ ಮುಂದಾಯಿತು,” ಎಂದು ಸಮರ್ಥಿಸಿಕೊಂಡರು.
ಭಾರತ-ಪಾಕ್ ನಡುವಿನ ಅಂತರ ಸ್ಪಷ್ಟ
ಈ ಪಂದ್ಯದಲ್ಲಿ ಭಾರತ ತಂಡದ ಪ್ರದರ್ಶನ ಮತ್ತು ಪಾಕಿಸ್ತಾನದ ವೈಫಲ್ಯವು ಉಭಯ ತಂಡಗಳ ನಡುವಿನ ಗುಣಮಟ್ಟದ ಅಂತರವನ್ನು ಎತ್ತಿ ತೋರಿಸಿದೆ ಎಂದು ಉಭಯ ಕ್ರಿಕೆಟಿಗರು ಒಪ್ಪಿಕೊಂಡರು. “ಶ್ರೀಲಂಕಾದ ಪಿಚ್ಗಳು ಸ್ಪಿನ್ನರ್ಗಳಿಗೆ ನೆರವಾಗಲಿವೆ, ಪಾಕಿಸ್ತಾನಕ್ಕೆ ಅನುಕೂಲವಾಗಬಹುದು ಎಂದು ಭಾವಿಸಿದ್ದೆ. ಆದರೆ ಭಾರತ ತಂಡ ಆಟದ ಎಲ್ಲ ವಿಭಾಗಗಳಲ್ಲೂ ಎದುರಾಳಿಗಿಂತ ಬಹಳ ಮುಂದಿದೆ,” ಎಂದು ಮೊಯೀನ್ ಅಲಿ ಹೇಳಿದ್ದಾರೆ.
ಒಟ್ಟಾರೆಯಾಗಿ, ಇಶಾನ್ ಕಿಶನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 175 ರನ್ ಕಲೆಹಾಕಿದ ಭಾರತ, ಪಾಕಿಸ್ತಾನವನ್ನು 114 ರನ್ಗಳಿಗೆ ಆಲೌಟ್ ಮಾಡಿ 61 ರನ್ಗಳ ಏಕಪಕ್ಷೀಯ ಜಯ ಸಾಧಿಸಿತು. ಭವಿಷ್ಯದ ಪಂದ್ಯಗಳಲ್ಲಿ ಅಗತ್ಯ ಬಿದ್ದರೆ ಪಾರ್ಟ್-ಟೈಮ್ ಬೌಲರ್ಗಳನ್ನು ಬಳಸಿಕೊಳ್ಳುವ ತಂತ್ರಗಾರಿಕೆಯ ಭಾಗವಾಗಿಯೂ ಸೂರ್ಯಕುಮಾರ್ ಈ ನಡೆ ಅನುಸರಿಸಿರಬಹುದು ಎನ್ನಲಾಗಿದೆ.
ಇದನ್ನೂ ಓದಿ : ಎಸ್ಸೆಸ್ಸೆಲ್ಸಿ ಪರೀಕ್ಷೆಗಿಂತ ಐಪಿಎಲ್ ಮುಖ್ಯ : ರಾಜಸ್ಥಾನ್ ರಾಯಲ್ಸ್ ಕೂಡಿಕೊಂಡ ವೈಭವ್ ಸೂರ್ಯವಂಶಿ!



















